ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದ ಸಿಎಂ, ಡಿಸಿಎಂ

10 ಕೆಜಿ ಅಕ್ಕಿಯ ಪೈಕಿ ಐದು ಕೆಜಿ ಅಕ್ಕಿಯ ಹಣವನ್ನು ನೇವರಾಗಿ ಫಲಾನುಭವಿಗಳ ಖಾತೆಗೆ ಹಾಕುವ ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದರು.

ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದ ಸಿಎಂ, ಡಿಸಿಎಂ
ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಚಾಲನೆ ಹಾಗೂ ಲೋಗೋ ಬಿಡುಗಡೆ
Follow us
| Updated By: Rakesh Nayak Manchi

Updated on:Jul 10, 2023 | 6:32 PM

ಬೆಂಗಳೂರು: ಅನ್ನಭಾಗ್ಯ ಯೋಜನೆಯ (Anna Bhagya Scheme) ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಚಾಲನೆ ನೀಡಿದರು. ಇದೇ ವೇಳೆ ಯೋಜನೆಯ ಲೋಗೋ ಕೂಡ ಬಿಡುಗಡೆ ಮಾಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದ ಕಾರ್ಯಕ್ರಮದಲ್ಲಿ 10 ಕೆಜಿ ಅಕ್ಕಿಯ ಪೈಕಿ ಐದು ಕೆಜಿ ಅಕ್ಕಿಯ 170 ರೂ. ಹಣವನ್ನು ಮೈಸೂರು, ಕೋಲಾರ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಹಾಕುವ ಮೂಲಕ ಚಾಲನೆ ನೀಡಿದರು. ಬಳಿಕ ಹಂತ ಹಂತವಾಗಿ ಇಡೀ ರಾಜ್ಯದ ಫಲಾನುಭವಿಗಳಿಗೆ ಹಣ ಜಮೆಯಾಗಲಿದೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ​ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದು ಮನಮೋಹನ್​ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿದ್ದೆವು. ನಮ್ಮ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಯೋಜನೆ. ರಾಜ್ಯದ 1.28 ಕೋಟಿ ಕುಟುಂಬಕ್ಕೆ ಅನ್ನಭಾಗ್ಯ ಯೋಜನೆ ತಲುಪುತ್ತದೆ. ರಾಜ್ಯದ 4.42 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಅಂತ್ಯೋದಯ, BPL ಕಾರ್ಡ್​ದಾರರು ಸೇರಿ 4.42 ಕೋಟಿ ಜನರಿಗೆ ಅನುಕೂಲವಾಗಲಿದೆ. ನಾವು ಹೆಚ್ಚುವರಿಯಾಗಿ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿಲ್ಲ. ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದೆವು ಎಂದರು.

ಇದನ್ನು ಓದಿ: Bengaluru; ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು: ಸಿಟಿ ರವಿ

ಅನ್ನ ಭಾಗ್ಯ ಹೊಸ ಕಾರ್ಯಕ್ರಮ ಏನೂ ಅಲ್ಲ. ನಾವು 2013ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರಾರಂಭಿಸಿದ್ದೆವು. ಜನರಿಗೆ ಏನು ಭರವಸೆ ಕೊಟ್ಟಿದ್ದೆವು ಅದನ್ನು ಈಡೇರಿಸಬೇಕು. ಜನರಿಗೆ ದ್ರೋಹ ಮಾಡಬಾರದು ಅಂತ ಪ್ರಮಾಣ ವಚನ ವಹಿಸಿಕೊಂಡ ಮೊದಲ ದಿನವೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಐದು ಗ್ಯಾರಂಟಿಗಳಲ್ಲಿ ಮೂರನೇ ಗ್ಯಾರಂಟಿಯಾಗಿರುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ. ನಮ್ಮ ಐದು ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಸರ್ಕಾರ ಹೃದಯ ಶ್ರೀಮಂತಿಕೆ ತೋರಿಸಿ ಅಕ್ಕಿ ಕೊಡಬಹುದಿತ್ತು ಎಂದು ಕುಟುಕಿದ ಅವರು, ನಮಗೂ ಅಕ್ಕಿ ಹೊಂದಿಸುವ ಶಕ್ತಿ ಇದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Mon, 10 July 23