ಬಿಹಾರ ಜಾತಿ ಜನಗಣತಿ ವರದಿ ಬಹಿರಂಗ ಬೆನಲ್ಲೇ ಕರ್ನಾಟಕದಲ್ಲೂ ಜಾತಿ ಗಣತಿ ಬಿಡುಗಡೆಗೆ ಕೇಳಿಬಂತು ಕೂಗು

| Updated By: ರಮೇಶ್ ಬಿ. ಜವಳಗೇರಾ

Updated on: Oct 03, 2023 | 12:07 PM

Karnataka caste census report: ಬಿಹಾರದಲ್ಲಿ ಆರ್​ಜೆಡಿ ಹಾಗೂ ಜೆಡಿಯು ನೇತೃತ್ವದ ಸರ್ಕಾರ, ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಜಾತಿಗಣತಿಯ ವರದಿಯನ್ನು ಸಹ ಬಿಡುಗಡೆ ಮಾಡಿವಂತೆ ಕೂಗು ಕೇಳಿಬಂದಿದೆ.

ಬಿಹಾರ ಜಾತಿ ಜನಗಣತಿ ವರದಿ ಬಹಿರಂಗ ಬೆನಲ್ಲೇ ಕರ್ನಾಟಕದಲ್ಲೂ ಜಾತಿ ಗಣತಿ ಬಿಡುಗಡೆಗೆ ಕೇಳಿಬಂತು ಕೂಗು
ವಿಧಾನಸೌಧ
Follow us on

ನವದೆಹಲಿ, (ಅಕ್ಟೋಬರ್ 03): ಬಿಹಾರ ಜಾತಿ ಗಣತಿ ಸಮೀಕ್ಷೆಯ ವರದಿಯನ್ನ (Bihar caste census report) ಬಹಿರಂಗ ಪಡಿಸಿದೆ. ಆರ್​ಜೆಡಿ ಹಾಗೂ ಜೆಡಿಯು ನೇತೃತ್ವದ ಸರ್ಕಾರ, ಬಿಹಾರದ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದೆ. ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿರುವುದು ದೇಶದಲ್ಲೇ ಇದು ಮೊದಲು. ಲೋಕಸಭೆ ಚುನಾವಣೆ ಹೊತ್ತಲ್ಲಿ ಇದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇತ್ತ ಕರ್ನಾಟಕದ ಜಾತಿಗಣತಿಯ ವರದಿಯನ್ನು(Karnataka caste census report) ಸಹ ಬಿಡುಗಡೆ ಮಾಡಿವಂತೆ ಕೂಗು ಕೇಳಿಬಂದಿದೆ.

ನವದೆಹಲಿಯಲ್ಲಿ ಇಂದು(ಅಕ್ಟೋಬರ್ 02) ಸುದ್ದಿಗಾರದೊಂದಿಗೆ ಮಾತನಾಡಿದ ಬಿಕೆ ಹರಿಪ್ರಸಾದ್(bk hariprasad), ಬಿಹಾರದಲ್ಲಿ ಜಾತಿ ಸಮೀಕ್ಷೆ ಬಿಡುಗಡೆ ಮಾಡಿದೆ. ಅದಕ್ಕಾಗಿ ಸಿಎಂ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಜಾತಿ ಗಣತಿ ಮೂಲಕ ಜನರಿಗೆ ಹಕ್ಕು ಸಿಗಲಿದೆ. ರಾಹುಲ್ ಗಾಂಧಿಯವರದ್ದು ಜಾತಿ ಗಣತಿ ಆಗಬೇಕು ಎನ್ನುವ ಆಶಯ ಇತ್ತು. ಕರ್ನಾಟಕದಲ್ಲೂ ಸಮೀಕ್ಷೆ ಮಾಡಿದೆ. ಅದನ್ನು ಬಹಿರಂಗ ಮಾಡಬೇಕು ಎಂದರು.

ಇದನ್ನೂ ಓದಿ: ಜಾತಿ ಗಣತಿ ಬಿಡುಗಡೆ ಮಾಡಲು ಹೆಚ್​ಡಿ ಕುಮಾರಸ್ವಾಮಿ ಬಿಡಲಿಲ್ಲ: ಸಿದ್ದರಾಮಯ್ಯ ಆರೋಪ

ತಪ್ಪು ಒಪ್ಪುಗಳು ಏನೇ ಇರಬಹುದು. ಅನುಷ್ಠಾನಕ್ಕೆ ಸಾಧ್ಯವಾಗುತ್ತಾ? ಇಲ್ವ ಗೊತ್ತಿಲ್ಲ.? ಸಾರ್ವಜನಿಕರ ಹಣ ಖರ್ಚು ಮಾಡಿದೆ/ ಅದನ್ನು ಬಹಿರಂಗ ಮಾಡಬೇಕು, ಚರ್ಚೆಗೆ ಅವಕಾಶ ನೀಡಬೇಕು. ರಾಜ್ಯದಲ್ಲಿ ಯಾವಗ ಬಿಡುಗಡೆ ಮಾಡುತ್ತಾರೆ ಸರ್ಕಾರವನ್ನು ಕೇಳಬೇಕು. ಯಾವುದೇ ಜಾತಿ ಒತ್ತಡ ಹೇರಲಿ, ಮೊದಲು ಬಿಡುಗಡೆ ಮಾಡಬೇಕು. ಆಮೇಲೆ ಯಾರಿಗಾದರೂ ಅನ್ಯಾಯವಾಗಿದರೆ ಸರಿ ಮಾಡಬಹುದು. ಪಕ್ಷದ ಸದಸ್ಯನಾಗಿ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಆಶಯ. ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರೇ ಜಾತಿ ಗಣತಿ ಆಗಬೇಕು ಎಂದಿದ್ದಾರೆ, ಹೀಗಾಗಿ ನಾವು ಅವರ ಹೇಳಿಕೆಯನ್ನು ಬೆಂಬಲಿಸುತ್ತೇವೆ. ಸಿದ್ದರಾಮಯ್ಯ ಅವರನ್ನು ಪ್ರತ್ಯೇಕ, ಪರೋಕ್ಷ ಟಾರ್ಗೆಟ್ ಮಾಡುವುದು ಏನಿಲ್ಲ ಎಂದು ಸ್ಪಷ್ಟಪಡಿಸಿದರು.

2014ರಲ್ಲೇ ಜಾತಿ ಗಣತಿ ನಡೆಸುವಂತೆ ಹೇಳಿದ್ದ ಸಿದ್ದರಾಮಯ್ಯ

ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ 2014ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿ ಗಣತಿ ನಡೆಸುವಂತೆ ತಿಳಿಸಿತ್ತು. ಈ ಆಯೋಗವು ಕಾಂತರಾಜ್ ಸಮಿತಿ ರಚಿಸಿತ್ತು. 1932 ರ ಬಳಿಕ ದೇಶದಲ್ಲಿ ಜಾತಿವಾರು ಜನಗಣತಿ ನಡೆದಿಲ್ಲ. ವಿವಿಧ ಧರ್ಮ, ಜಾತಿ, ಉಪ ಜಾತಿಗಳ ಜನಸಂಖ್ಯೆ ಎಷ್ಟಿದೆ ಎಂಬ ನಿಖರವಾದ ಅಂಕಿ ಅಂಶಗಳಿಲ್ಲ. ಇಂತಹುದೊಂದು ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿತ್ತು.

ಎಚ್. ಕಾಂತರಾಜ್ ಸಾರಥ್ಯದ ಸಮಿತಿಯು 2016ರಲ್ಲಿ ಜಾತಿ ಗಣತಿ ವರದಿ ಸಿದ್ದಪಡಿಸಿ ಅದನ್ನು ಸರ್ಕಾರಕ್ಕೆ ನೀಡಿತ್ತು. ಈ ಸಮಿತಿಯು ಸಮೀಕ್ಷೆ ನಡೆಸಲು 162 ಕೋಟಿ ರೂ. ವೆಚ್ಚ ಮಾಡಿತ್ತು. ಆದ್ರೆ, ಸಿದ್ದರಾಮಯ್ಯ ಸರ್ಕಾರವು ತಮ್ಮದೇ ಸರ್ಕಾರದ ಆದೇಶದ ಮೇರೆಗೆ ಸಿದ್ಧವಾಗಿದ್ದ ವರದಿಯನ್ನು ಜಾರಿ ಮಾಡಲು ಹಿಂದೇಟು ಹಾಕಿತ್ತು. ಇದಕ್ಕೆ ಹಲವು ರಾಜಕೀಯ ಕಾರಣಗಳಿವೆ ಎನ್ನಲಾಗಿದೆ. ಪ್ರಮುಖವಾಗಿ ರಾಜ್ಯದ ಪ್ರಬಲ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ನಾಯಕರು ಈ ವರದಿಗೆ ಆಕ್ಷೇಪ ಎತ್ತಿದ್ದವು ಎನ್ನಲಾಗಿದೆ.

ಹೀಗಾಗಿ ಇದು ಜೇನು ಗೂಡಿಗೆ ಕೈ ಹಾಕಿದಂತೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಅರ್ಥವಾಗಿತ್ತು. ಏಕೆಂದರೆ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿ ವರದಿ ಪ್ರಕಾರ ರಾಜ್ಯದ ಜಾತಿ ಸಮೀಕರಣದ ಲೆಕ್ಕಾಚಾರಗಳು ಬುಡಮೇಲು ಆಗುವಂತಿದ್ದವು.

ಇನ್ನು ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆದ ಬಳಿಕ  ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಬಿಜೆಪಿ ಸರ್ಕಾರ ಸೃಷ್ಟಿಸಿದ್ದ ಮೀಸಲಾತಿ ಗೊಂದಲ ನಿವಾರಿಸಲಾಗುವುದು ಎಂದು  ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ