AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಆತಂಕ: ರಾಜ್ಯದಲ್ಲಿ ಪ್ರತಿನಿತ್ಯ 5 ಸಾವಿರ ಕೋವಿಡ್ ಪರೀಕ್ಷೆ

ಕ್ರಿಸ್‌ಮಸ್ ಮತ್ತು ನ್ಯೂಯರ್ ಆಚರಣೆಗೆ ಹೆಚ್ಚು ಜನ ಸೇರಲಿದ್ದಾರೆ. ಹೀಗಾಗಿ ನಿರ್ಬಂಧ ಹೇರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಶುಕ್ರವಾರ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ. ಸಿಎಂ ನೇತೃತ್ವದಲ್ಲಿ ಕೂಡ ಮೀಟಿಂಗ್ ನಡೆಯಲಿದೆ.

ಕೊರೊನಾ ಆತಂಕ: ರಾಜ್ಯದಲ್ಲಿ ಪ್ರತಿನಿತ್ಯ 5 ಸಾವಿರ ಕೋವಿಡ್ ಪರೀಕ್ಷೆ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on:Dec 20, 2023 | 6:51 AM

Share

ಬೆಂಗಳೂರು, ಡಿಸೆಂಬರ್ 20: ರಾಜ್ಯದಲ್ಲಿ ಕೊರೊನಾ (Coronavirus JN1) ಭೀತಿ ಮತ್ತೆ ಆವರಿಸಿದೆ. ಕೋವಿಡ್ (Covid 19) ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಮಾರ್ಗಸೂಚಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಕೋವಿಡ್ ತಪಾಸಣೆ ತೀವ್ರಗೊಳಿಸಲು ಸರ್ಕಾರ ನಿರ್ಧರಿಸಿದೆ. ವಿಕಾಸಸೌಧದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಿಸೆಂಬರ್‌ 23ರಿಂದ ರಾಜ್ಯದಲ್ಲಿ ಪ್ರತಿನಿತ್ಯ 5 ಸಾವಿರ ಪರೀಕ್ಷೆ ನಡೆಸಲಾಗುತ್ತದೆ. ಆಕ್ಸಿಜನ್‌, ವೆಂಟಿಲೇಟರ್‌, ಐಸಿಯು ಬೆಡ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳ ಜತೆ ವರ್ಚುವಲ್‌ ಸಭೆ ನಡೆಸಿ ಕೋವಿಡ್‌ ಕುರಿತು ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೊರೊನಾ ಮಾರ್ಗಸೂಚಿ ಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಕೋವಿಡ್ -19 ವೈರಸ್ ಹರಡದಂತೆ ತಡೆಗಟ್ಟಲು ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ನಮ್ಮ ಪ್ರಯತ್ನ ಫಲನೀಡಬೇಕಾದರೆ ಸಾರ್ವಜನಿಕರ ಸಹಕಾರವೂ ಅತಿ ಮುಖ್ಯ ಎಂದಿದ್ದಾರೆ.

ನ್ಯೂಇಯರ್‌ ಆಚರಣೆಗೆ ನಿರ್ಬಂಧ ಹೇರುತ್ತಾ ಸರ್ಕಾರ?

ಕ್ರಿಸ್‌ಮಸ್ ಮತ್ತು ನ್ಯೂಯರ್ ಆಚರಣೆಗೆ ಹೆಚ್ಚು ಜನ ಸೇರಲಿದ್ದಾರೆ. ಹೀಗಾಗಿ ನಿರ್ಬಂಧ ಹೇರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಶುಕ್ರವಾರ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ. ಸಿಎಂ ನೇತೃತ್ವದಲ್ಲಿ ಕೂಡ ಮೀಟಿಂಗ್ ನಡೆಯಲಿದೆ.

ಯಾರಿಗೆಲ್ಲ ಶನಿವಾರದಿಂದ ಕೋವಿಡ್ ಪರೀಕ್ಷೆ?

ಶೀತ, ಜ್ವರ, ಕೆಮ್ಮು ಸೇರಿ ಕೊರೊನಾ ಲಕ್ಷಣ ಇದ್ದವರು, ತೀವ್ರ ಉಸಿರಾಟ ಸಮಸ್ಯೆ ಹೊಂದಿರುವವರು, ಬೇರೆ ದೇಶಗಳಿಂದ ಬಂದ ಸೋಂಕು ಲಕ್ಷಣ ಇದ್ದವರು, ಕೇರಳದಿಂದ ಬಂದ ಸೋಂಕು ಲಕ್ಷಣ ಇದ್ದವರು, ಹೃದ್ರೋಗ, ವಯೋಸಹಜ ಕಾಯಿಲೆ ಇರುವವರು, ವಿಷಮ ಶೀತ ಜ್ವರ ಲಕ್ಷಣ ಹೊಂದಿರುವವರು, ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವವರಿಗೆ ಶನಿವಾರದಿಂದ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ, ಇಲ್ಲಿದೆ ವಿವರ

ಈ ಮಧ್ಯೆ, ದೇಶದಲ್ಲಿ ಮತ್ತೆ ಕೊರೊನಾ ಅಲೆ ಸೃಷ್ಟಿಯಾಗಿರುವುದರಿಂದ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಇಂದು (ಬುಧವಾರ) ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿದ್ದಾರೆ. ಬೆಳಗ್ಗೆ 10 ಗಂಟೆಗೆ ವರ್ಚುವಲ್ ಮೂಲಕ ಸಭೆ ನಡೆಯಲಿದೆ. ದೇಶದಲ್ಲಿ ಕೊರೊನಾ ಹಾವಳಿ ನಿಯಂತ್ರಣ ಹಾಗೂ ಸಾಂಕ್ರಾಮಿಕ ಎದುರಿಸುವ ಸಿದ್ಧತೆ ಬಗ್ಗೆ ಅವರು ತಿಳಿಸಲಿದ್ದಾರೆ.

ದೇಶದಲ್ಲಿ ಹೊಸದಾಗಿ 260ಮಂದಿಗೆ ಸೋಂಕು

ದೇಶದಲ್ಲಿ ಕೊರೊನಾ ಹೊಸ ಉಪತಳಿ ‘ಜೆನ್‌.1’ ಪ್ರಸರಣ ವೇಗ ಪಡೆದುಕೊಂಡಿದೆ. ನಿನ್ನೆ ದೇಶಾದ್ಯಂತ 260 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆಯು 1,828ಕ್ಕೆ ಹೆಚ್ಚಳವಾಗಿದೆ. ಆದರೆ, ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖವಾಗುತ್ತಿರುವವರ ಪ್ರಮಾಣ ಶೇ 98.81 ರಷ್ಟಿರುವುದು ಸಮಾಧಾನಕರ ಸಂಗತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 am, Wed, 20 December 23