ಪುತ್ತೂರಿನಲ್ಲಿ ಯುವತಿಯ ಕತ್ತು ಸೀಳಿ ಕೊಲೆ ಪ್ರಕರಣ; ಮೃತಳ ಮನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 7:54 PM

ಆಕೆಗಿನ್ನು ವಯಸ್ಸು ಹದಿನೆಂಟು ವಯಸ್ಸು, ಜೀವನದಲ್ಲಿ ಬಾಳಿ ಬದುಕಿ ಸುಂದರ ಕ್ಷಣಗಳನ್ನು ಅನುಭವಿಸಬೇಕಿದ್ದ ಅವಳು ಹೆಣವಾಗಿ ಹೋಗಿದ್ದಾಳೆ. ಪಾಗಲ್ ಪ್ರೇಮಿಯ ಅಟ್ಟಹಾಸಕ್ಕೆ ಮುಗ್ದ ಜೀವ ದುರಂತ ಅಂತ್ಯ ಕಂಡಿದೆ. ಈ ಹಿನ್ನಲೆ ಇಂದು(ಆ.25) ಮೃತ ಯುವತಿಯ ಮನೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಭೇಟಿ ನೀಡಿ ಸಾಂತ್ವಾನ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಯುವತಿಯ ಕತ್ತು ಸೀಳಿ ಕೊಲೆ ಪ್ರಕರಣ; ಮೃತಳ ಮನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿ
ಮೃತಳ ಮನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿ
Follow us on

ದಕ್ಷಿಣ ಕನ್ನಡ, ಆ.25: ನಿನ್ನೆ (ಆ.24) ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ ಯುವತಿ ಗೌರಿ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ಹಿನ್ನಲೆ ಇಂದು(ಆ.25) ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುದ್ದುಪದವಿನಲ್ಲಿರುವ ಮೃತ ಯುವತಿಯ ಮನೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಭೇಟಿ ನೀಡಿದ್ದಾರೆ. ಭಗವಂತ ಖೂಬಾಗೆ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದು, ಮೃತ ಗೌರಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಘಟನೆ ವಿವರ

ಈ ಭೀಭತ್ಸ್ಯ ಘಟನೆ ನಡೆದಿರುವುದು ದಕ್ಷಿಣಕನ್ನಡ ಜಿಲ್ಲೆಯ ಹೃದಯ ಭಾಗದಲ್ಲಿರುವ ಪುತ್ತೂರಿನಲ್ಲಿ. ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗೌರಿ ಎಂಬ ಯುವತಿ ನಿನ್ನೆ ಕೂಡ ಎಂದಿನಂತೆ ಕೆಲಸಕ್ಕೆಂದು ಬಂದಿದ್ದಳು. ಈ ನಡುವೆ ಈಕೆಯನ್ನು ನಗರದ ಬಸ್ ನಿಲ್ದಾಣದ ಬಳಿ ನಾಲ್ಕು ವರ್ಷದಿಂದ ಪರಿಚಿತನಾಗಿರುವ ಪದ್ಮರಾಜ್ ಎಂಬ ಯುವಕ ಭೇಟಿಯಾಗಿದ್ದ. ಈ ಸಂದರ್ಭ ಇವರಿಬ್ಬರ ನಡುವೆ ವಿಚಾರವೊಂದಕ್ಕೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ಯುವತಿ ಈ ಬಗ್ಗೆ ದೂರು ನೀಡಲೆಂದು ಪುತ್ತೂರು ಮಹಿಳಾ ಠಾಣೆ ಬಳಿ ಬಂದಿದ್ದಾಳೆ. ಆದ್ರೆ, ಈಕೆಯನ್ನು ಬೆನ್ನತ್ತಿ ಬಂದ ಆರೋಪಿ ಪದ್ಮರಾಜ್ ಠಾಣೆಯ ಹೊರ ಭಾಗದಲ್ಲೇ ಚೂರಿಯಿಂದ ಗೌರಿಯ ಕುತ್ತಿಗೆಯ ಭಾಗಕ್ಕೆ ನಾಲ್ಕು ಬಾರಿ ಇರಿದು ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ವಿಚಾರ ತಿಳಿದ ಸ್ಥಳೀಯರು ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.

ಇದನ್ನೂ ಓದಿ:ಹಾಸನ: ಮದ್ಯದ ಚಟ ಬಿಡಿಸುತ್ತೇವೆಂದು ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯ ಕೊಲೆ; ಪೋಷಕರ ಆರೋಪ

ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ

ಪದ್ಮರಾಜ್ ಮತ್ತು ಗೌರಿ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದ್ರೆ, ಇತ್ತೀಚೆಗೆ ಇವರಿಬ್ಬರ ನಡುವೆ ಗಲಾಟೆಗಳು ನಡೆಯುತಿತ್ತು. ಈ ವಿಚಾರದಲ್ಲಿ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆದ್ರೆ, ನಿನ್ನೆ ಮತ್ತೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪೊಲೀಸರು ಬೈಕ್‌ನ ಆಧಾರದಲ್ಲಿ ಆರೋಪಿಯ ಪೂರ್ವಪರ ವಿಚಾರಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಿಷ್ಯಂತ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಸ್.ಪಿ ಮೇಲ್ನೂಟಕ್ಕೆ ಪ್ರೇಮದ ವಿಚಾರದಲ್ಲಿ ಈ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ