ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್​ನ ರೋಚಕ ಸ್ಟೋರಿ

ಕಡಲನಗರಿ ಮಂಗಳೂರಿನಲ್ಲಿ ಇತ್ತೀಚೆಗೆ ಸರಣಿ ದರೋಡೆ ಕೃತ್ಯ ನಡೆಸಿ ಚಡ್ಡಿಗ್ಯಾಂಗ್ ಒಂದು ಅಂದರ್ ಆಗಿತ್ತು. ಕರಾವಳಿ ಜನರ ನಿದ್ದೆಗೆಡಿಸಿದ್ದ ಈ ಗ್ಯಾಂಗ್‌ನ ಕರಾಳ ಮಾಹಿತಿ ಇದೀಗ ಒಂದೊಂದಾಗಿ ಹೊರಬರುತ್ತಿದೆ. ಪೊಲೀಸ್ ತನಿಖೆ ವೇಳೆ ಚಡ್ಡಿ ಬನಿಯನ್ ಗ್ಯಾಂಗ್‌ನ ದರೋಡೆ ಕಹಾನಿಗಳು ಬೆಳಕಿಗೆ ಬಂದಿದೆ. ಏನದು ಅಂತೀರಾ? ಈ ಸ್ಟೋರಿ ಓದಿ.

ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್​ನ ರೋಚಕ ಸ್ಟೋರಿ
ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್​ನ ರೋಚಕ ಸ್ಟೋರಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 05, 2024 | 5:27 PM

ದಕ್ಷಿಣ ಕನ್ನಡ, ಅ.05: ಕಳೆದ ಎರಡು ತಿಂಗಳ ಹಿಂದೆ ಮಂಗಳೂರು(Mangalore) ನಗರದಲ್ಲಿ ಸರಣಿ ದರೋಡೆ ನಡೆಸಿದ್ದ ಖತರ್ನಾಕ್ ಚಡ್ಡಿ ಬನಿಯನ್ ಗ್ಯಾಂಗ್‌ನ ಸದಸ್ಯರು ಶ್ರೀಕೃಷ್ಣನ ಜನ್ಮಸ್ಥಾನ ಸೇರಿದ್ದಾರೆ. ಆದರೆ, ಮಂಗಳೂರು ಪೊಲೀಸರ ಕೈಯಲ್ಲಿ ಲಾಕ್ ಆದ ಬಳಿಕ ಈ ಗ್ಯಾಂಗ್‌ನ ಸದಸ್ಯರು ಹಲವು ಕರಾಳ ಮಾಹಿತಿಯನ್ನು ಕಕ್ಕಿದ್ದಾರೆ. ಮಂಗಳೂರು ಸಹಿತ ರಾಜ್ಯದ ಹಲವು ಕಡೆ ದರೋಡೆ ನಡೆಸಿರುವ ಈ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.

ಮೂಲತಃ ಮಧ್ಯಪ್ರದೇಶದ ಗುಣಾ ಜಿಲ್ಲೆಯವರಾದ ಇವರು “ಪಾರ್ದಿ” ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವರು. ಮಂಗಳೂರು ಪೊಲೀಸರು ಇವರ ಮೂಲ ಹುಡುಕಿಕೊಂಡು ಹೋದಾಗ ‘ಈ ಗುಣಾ ಊರಿನಲ್ಲಿ 200ಕ್ಕೂ ಹೆಚ್ಚು ಮನೆಗಳ ಸದಸ್ಯರಿಗೆ ಕಳವು, ದರೋಡೆಯೇ ವೃತ್ತಿ ಎಂಬುದು ಗೊತ್ತಾಗಿದೆ. ಜೊತೆಗೆ ಸಣ್ಣ ವಯಸ್ಸಿನಲ್ಲೇ ಈ ಗ್ಯಾಂಗ್‌ನ ಮಕ್ಕಳಿಗೆ ಕಳ್ಳತನದ ತರಬೇತಿ ನೀಡಲಾಗುತ್ತಂತೆ. ಕಳ್ಳತನವನ್ನೇ ವೃತ್ತಿಯಾಗಿಸುವಂತೆ ಮನ‌ಃಪರಿವರ್ತನೆ ಮಾಡಿ ಮಕ್ಕಳಿಗೆ ಕಠಿಣ ರೀತಿಯ ತರಬೇತಿ ನೀಡಿ, ಚಿಕ್ಕಮಕ್ಕಳಿಗೆ ಹೊಡೆದು ಬಡಿದು ದೇಹ ಮನಸ್ಸು ಎರಡನ್ನು ಇಲ್ಲಿ ಒರಟುಗೊಳಿಸಲಾಗುತ್ತದೆ.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ 150 ಪೊಲೀಸರಿಂದ ಮಂಗಳೂರು ಜೈಲ್ ಮೇಲೆ ದಾಳಿ; ಗಾಂಜಾ, ಡ್ರಗ್ಸ್, ಮೊಬೈಲ್ಸ್ ಪತ್ತೆ

ಈ ಗ್ಯಾಂಗ್‌ನ ಸದಸ್ಯರು ಕಾಲಿಗೆ ಚಪ್ಪಲಿ ಧರಿಸುವುದಿಲ್ಲ. ಮೈಯಲ್ಲಿ ಕೇವಲ ಚಡ್ಡಿ ಮತ್ತು‌ ಬನಿಯನ್ ಮಾತ್ರ ಇದ್ದು, ತಲೆಗೊಂದು ಟವೆಲ್ ಸುತ್ತಿಕೊಂಡು ರಾತ್ರಿ ವೇಳೆಯಲ್ಲಿ ಒಡಾಡುತ್ತಾರೆ. ಕನಿಷ್ಟ ಬಟ್ಟೆಯಲ್ಲಿದ್ದರೆ ಕಳವು ನಡೆಸುವುದು ಹಾಗೂ ಪರಾರಿಯಾಗುವುದು ಸುಲಭ ಎಂಬ ಪ್ಲ್ಯಾನ್ ಇವರದಾಗಿದೆ. ಇನ್ನು ಇವರ ಬಳಿ ಅತ್ಯಾಧುನಿಕ ಹಾಗೂ ಪ್ರಬಲವಾದ ಹೈಡ್ರಾಲಿಕ್ ಕಟ್ಟರ್‌ಗಳಿದ್ದು, ಕನಿಷ್ಠ ಸಲಕರಣೆಗಳನ್ನು ಬಳಸಿ ಮನೆ ದರೋಡೆ ನಡೆಸುತ್ತಾರೆ. ಮಂಗಳೂರಿನಲ್ಲಿ ದರೋಡೆ ಕೃತ್ಯ ನಡೆಸಿದಾಗಲೂ ಇವರ ಚಲನವಲನದ ದೃಶ್ಯಗಳು ಸಿ.ಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಗುಂಪಿನಲ್ಲೇ ದರೋಡೆ ‌ಕೃತ್ಯ ನಡೆಸುವ ಈ ಗ್ಯಾಂಗ್‌ಗೆ ನಗದು ಚಿನ್ನಾಭರಣವೇ ಟಾರ್ಗೆಟ್ ಆಗಿರುತ್ತದೆ.

ಜಾತ್ರೆಗಳಿದ್ದಲ್ಲಿಗೆ ಹೋಗಿ ಟೆಂಟ್ ಹಾಕಿಕೊಂಡು ‌ಕೂರುವ ಈ ಗ್ಯಾಂಗ್ ಬಲೂನ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುತ್ತಾರೆ. ಇದರ ಜೊತೆ ಹಗಲೊತ್ತು ಸೂಕ್ತವಾದ ಮನೆಗಳನ್ನು‌ ಗುರುತಿಸಿ ದರೋಡೆಗೆ ವ್ಯವಸ್ಥಿತ ಪ್ಲ್ಯಾನ್ ಮಾಡುತ್ತಾರೆ. ಒಬ್ಬಂಟಿಯಾಗಿ ವಾಸಿಸುವವರು, ವೃದ್ಧರು ಮಾತ್ರ ಇರುವ ಮನೆಯೇ ಇವರ ಟಾರ್ಗೆಟ್ ಆಗಿದ್ದು, ರಾತ್ರಿ ಹೊತ್ತು ಕಾರ್ಯಾಚರಣೆ ನಡೆಸುತ್ತಾರೆ. ಕದ್ದ ಕೂಡಲೇ ಆ ಪ್ರದೇಶದಿಂದ ಪರಾರಿಯಾಗುವ ತಂಡ, ಪರಾರಿಯಾದ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಉದಾಹರಣೆಯೇ ಬಲು ವಿರಳ.

ಎಲ್ಲಾ ಸಲಕರಣೆಗಳನ್ನು ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಂಡು ಓಡಾಡುವ ತಂಡ, ಒಬ್ಬರ ಹಿಂದೆ ಇನ್ನೊಬ್ಬರಂತೆ ಸಾಲಿನಲ್ಲಿ ಬಂದು ಮನೆಯೊಳಗೆ ನುಗ್ಗುತ್ತದೆ. ಚಡ್ಡಿ ಗ್ಯಾಂಗ್‌ನ ಒಬ್ಬೊಬ್ಬರ ಮೇಲೆ ದೇಶದ ವಿವಿಧ ಕಡೆ ಸಾಕಷ್ಟು ಕೇಸ್ ಇದ್ದು, ಇವರಿಗೆ ದರೋಡೆಯೇ ದೇವರು ಎಂಬಂತಾಗಿದೆ. ಒಟ್ಟಿನಲ್ಲಿ ಈ ತಂಡದ ಇನ್ನಷ್ಟು ಸದಸ್ಯರು ರಾಜ್ಯದಲ್ಲಿ ಇರುವ ಬಗ್ಗೆ ಸಂಶಯವಿದ್ದು, ಚಡ್ಡಿಗ್ಯಾಂಗ್​ನ ಕಳ್ಳಾಟವನ್ನು ಬುಡಸಮೇತ ಕಿತ್ತು ಹಾಕಲು ಪೊಲೀಸ್​ ಇಲಾಖೆ ಎಲ್ಲಾ ರೀತಿಯಿಂದ ತನಿಖೆ ನಡೆಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ