AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಹೇಳಿದ ಪರಿವಾರವಾದ ರಾಜ್ಯದಲ್ಲಿ ಮುಕ್ತವಾಗಬೇಕು: ಬಿಎಸ್​ವೈಗೆ ಸದಾನಂದಗೌಡ ಟಾಂಗ್

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಸಂಸದ ಡಿವಿ ಸದಾನಂದಗೌಡ ಅವರು ಮತ್ತೆ ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನಮ್ಮಲ್ಲಿ ನರೇಂದ್ರ ‌ಮೋದಿ ಪರಿಕಲ್ಪನೆಯ ಸಂಘಟನೆ ಇದೆ. ಅವರ ಸ್ವಾರ್ಥ ರಹಿತ ರಾಜಕಾರಣ ಎಲ್ಲಾ ರಾಜ್ಯಗಳಲ್ಲೂ ಜಾರಿ ಆಗಬೇಕು ಎಂದರು.

ಮೋದಿ ಹೇಳಿದ ಪರಿವಾರವಾದ ರಾಜ್ಯದಲ್ಲಿ ಮುಕ್ತವಾಗಬೇಕು: ಬಿಎಸ್​ವೈಗೆ ಸದಾನಂದಗೌಡ ಟಾಂಗ್
ರಾಜ್ಯ ಬಿಜೆಪಿ ನಾಯಕರ ವಿರುದ್ಧ ಡಿವಿ ಸದಾನಂದಗೌಡ ವಾಗ್ದಾಳಿ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: Rakesh Nayak Manchi

Updated on: Mar 24, 2024 | 2:44 PM

ಮಂಗಳೂರು, ಮಾ.24: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಸಂಸದ ಡಿವಿ ಸದಾನಂದಗೌಡ (DV Sadananda Gowda) ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಬಿಜೆಪಿ (BJP) ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅಲ್ಲದೆ, ಪರಿವಾರ ರಾಜಕಾರಣದ ವಿರುದ್ಧ ಗುಡುಗಿದ್ದಾರೆ.

ಪಕ್ಷದಲ್ಲಿ 30 ವರ್ಷಗಳ ಕಾಲ ಸುದೀರ್ಘ ಕೆಲಸ ಮಾಡುವ ಅವಕಾಶ ಸಿಕ್ಕಿದೆ. 30 ವರ್ಷ ಕಳೆದ ಬಳಿಕ ದೇವರಿಗೆ ಭಕ್ತಿಯ ನಮನ ಸಲ್ಲಿಸಲು ಬಂದಿದ್ದೇನೆ. ಚುನಾವಣಾ ರಾಜಕಾರಣದಿಂದ ದೂರು ಉಳಿದು ಪಕ್ಷದ ಜೊತೆ ನಿರಂತರ ಕೆಲಸ ಮಾಡುತ್ತೇನೆ ಎಂದರು.

ನಮ್ಮಲ್ಲಿ ನರೇಂದ್ರ ‌ಮೋದಿ ಪರಿಕಲ್ಪನೆಯ ಸಂಘಟನೆ ಇದೆ. ಅವರ ಸ್ವಾರ್ಥ ರಹಿತ ರಾಜಕಾರಣವನ್ನು ಮುಂದುವರಿಸಿಕೊಂಡು ಎಲ್ಲಾ ಕಡೆ ಹೋಗಬೇಕು. ಅದು ಕೇವಲ ನರೇಂದ್ರ ಮೋದಿ, ಡೆಲ್ಲಿಗೆ ಸೀಮಿತ ಆಗಬಾರದು. ಎಲ್ಲಾ ರಾಜ್ಯಗಳಲ್ಲೂ ಅದು ಜಾರಿ ಆಗಬೇಕು. ಕೆಳಗಿನ ಹಂತದವರೆಗೂ ಹೋಗಬೇಕು. ಅವರು ಹೇಳಿದ ಪರಿವಾರವಾದದಿಂದ ಮುಕ್ತರಾಗಬೇಕು. ಭ್ರಷ್ಟಾಚಾರ, ಜಾತಿವಾದದಿಂದ ಮುಕ್ತರಾಗಬೇಕಾದ ರಾಜನೀತಿ ಇರಬೇಕು. ಪಾಪ ಮಾಡಿದವರೆಲ್ಲಾ ಕೊನೆಗೆ ಶುದ್ದೀಕರಣ ಆಗುತ್ತಾರೆ. ಇದೇ ಮುಂದಿನ ದಿನಗಳಲ್ಲಿ ಆಗುತ್ತದೆ ಎಂದರು.

ಭ್ರಷ್ಟಾಚಾರ, ಜಾತಿವಾದ, ಪರಿವಾರವಾದ ಈ ಚುನಾವಣೆ ಕಳೆದ ಬಳಿಕ ಅದು ಆಗಬೇಕು. ಈ ಚುನಾವಣೆಯಲ್ಲೇ ಅದು ಆಗಬೇಕಿತ್ತು ಎಂದರು. ಅಲ್ಲದೆ, ನಮ್ಮ ರಾಜ್ಯದಲ್ಲಿ ಜವಬ್ದಾರಿ ಹೊತ್ತಂತವರು ಅ ಮೂರರಿಂದ ಹೊರತಾಗಿಲ್ಲ. ಆ ಮೂರರಲ್ಲಿ ಇರುವಂತವರಾದ ಕಾರಣ ಜನ ತಪ್ಪು ತಿಳಿದುಕೊಳ್ಳಬಾರದು. ಆ ಪಕ್ಷದಿಂದ ಎಲ್ಲವನ್ನು ಪಡೆದ ನಾವೆಲ್ಲ ಇದ್ದೇವೆ. ಅದನ್ನು ಖಂಡಿತವಾಗಿ ಮುಂದೆ ಶುದ್ದೀಕರಣ ಮಾಡುವ ಕೆಲಸ ಮಾಡುತ್ತೇವೆ. ಈಗ ನರೇಂದ್ರ ಮೋದಿಯವರ ಚುನಾವಣೆ ಒಂದೇ ನಮಗಿರುವಂತದ್ದು, ನಮ್ಮ ಭಾಗದಿಂದಲೂ ಎಲ್ಲರನ್ನು ಕಳುಹಿಸಿಕೊಡಬೇಕು ಎಂದರು.

ಇದನ್ನೂ ಓದಿ: ಬಿಜೆಪಿ ಶುದ್ದೀಕರಣ ಮಾಡುವವರೆಗೆ ನಾನು ವಿರಮಿಸುವುದಿಲ್ಲ: ಡಿವಿ ಸದಾನಂದಗೌಡ

ಈ ಸಣ್ಣಪುಟ್ಟ ವಿಚಾರವನ್ನು ಯಾರು ಮನಸ್ಸಿಗೆ ಹಾಕಿಕೊಳ್ಳಬಾರದು. ಪಕ್ಷ ನನಗೆ ಎಲ್ಲಾ ಕೊಟ್ಟಿದೆ. ಆ ಪಕ್ಷಕ್ಕೆ ನಾನು ಏನಾದರೂ ಕೊಡಬೇಕಿದೆ. ನರೇಂದ್ರ ಮೋದಿಯಂತಹ ದೈವಾಂಶ ಶಂಭೂತ ದೇಶದ ಎಲ್ಲವನ್ನು ಸರಿ ಮಾಡಲು ಹೊರಟಿದ್ದಾರೆ. ಅದನ್ನು ಕೆಳಗಿ‌ನ ಹಂತದಲ್ಲಿ ತಗೊಂಡು ಹೋಗುವ ಜವಬ್ದಾರಿ ನಮ್ಮದು ಎಂದರು.

ನಾನು ಚುನಾವಣಾ ರಾಜಕೀಯದಿಂದ ದೂರ ನಿಂತಿದ್ದೆ. ಆದರೆ ನೀವು ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿ, ಮಾಜಿ ಮಂತ್ರಿಗಳು ನೀವು, ಹೀಗಾಗಿ ಸ್ಪರ್ಧೆ ಮಾಡಬೇಕೆಂದು ಹೇಳಿದರು. ಹೀಗಾಗಿ ನಾನು ಮುಂದೆ ಹೋದೆ. ನನ್ನ ಪ್ರಾಮಾಣಿಕತೆ, ಸ್ವಚ್ಚಾರಿತ್ರ್ಯಕ್ಕೆ ಯಾರ ಸರ್ಟಿಫಿಕೇಟ್ ಸಹ ಬೇಕಾಗಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ನಿಯತ್ತು, ಪ್ರಾಮಾಣಿಕತೆ ಎಂಬ ಶಬ್ದಗಳಿಗೆ ಅರ್ಥ ಕಳೆದುಕೊಳ್ಳುವ ರಾಜನೀತಿ ಇದೆ. ಇದು ಮನಸ್ಸಿಗೆ ಅತ್ಯಂತ ನೋವಿ‌ನ ಸಂಗತಿ. ಚುನಾವಣೆವರೆಗೂ ಆ ನೋವನ್ನು ನುಂಗಿಕೊಳ್ಳಬೇಕು ಎಂದರು.

ಈಶ್ವರಪ್ಪ ಏನು ಹೇಳಿದರು ಅಥವಾ ಇನ್ನೊಬ್ಬರು ಏನು ಹೇಳಿದರು ಎಂದು ಯೋಚಿಸಲ್ಲ. ಇದನ್ನು ಲಾಜಿಕಲ್ ಎಂಡ್​ಗೆ ತಗೊಂಡು ಹೋಗಲು ನನಗೆ ಶಕ್ತಿಯಿದೆ. ಸಮಾನಮನಸ್ಕರಾಗಿ ಇದಕ್ಕೆ ಕೈಜೋಡಿಸುವುದಾದರೆ ಎಲ್ಲರಿಗೂ ಸ್ವಾಗತಿಸುತ್ತೇನೆ. ಆದರೆ ಎಲ್ಲರೂ ನನ್ನೊಟ್ಟಿಗೆ ಸೇರಿ ಒಂದು ಗುಂಪು ಮಾಡಿ ಎಂದು ಹೇಳಲ್ಲ. ಗುಂಪುಗಾರಿಕೆಯ ರಾಜಕಾರಣ ನಾನು ಯಾವತ್ತು‌ ಮಾಡಿಲ್ಲ ಎಂದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಒಂದು ದೆಹಲಿ ಗುಂಪಿತ್ತು ಇನ್ನೊಂದು ಕರ್ನಾಟಕ ಗುಂಪಿತ್ತು. ನಾವೆಲ್ಲಾ ಬಿಜೆಪಿ ಗುಂಪಿನಲ್ಲಿದ್ದೆವು. ಬಿಜೆಪಿ ಗುಂಪಿನವರಿಗೆ ಭಾರಿ ದೊಡ್ಡ ಗೌರವ ಸಿಕ್ಕಿಲ್ಲ. ಜನ ಸಹ ನಿಮ್ಮ ಈ ಗುಂಪುಗಾರಿಕೆಗೆ ಓಟು ಕೊಡಲ್ಲ ಅಂದರು. ಡಿವೈಡೆಡ್ ಬಿಜೆಪಿಗೆ ಓಟು ಕೊಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದು ಹೇಳುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಗುಂಪುಗಾರಿಕೆಯೇ ಕಾರಣ ಎಂದು ಸದಾನಂದಗೌಡರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ