ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್: ‘ಹನಿ’ಯ ‘ಮನಿ’ಟ್ರ್ಯಾಪ್ ಆಯಿಷಾ ಅರೆಸ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 08, 2024 | 6:15 PM

ನಾಪತ್ತೆಯಾಗಿದ್ದ ಮಂಗಳೂರಿನ ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ತಮ್ಮ ಮುಮ್ತಾಜ್ ಅಲಿಯ ಮೃತದೇಹ ಸತತ ಮೂವತ್ತು‌ ಗಂಟೆಗಳ ಹುಡುಕಾಟದ ಬಳಿಕ ನಿನ್ನೆ(ಅ.07) ಪತ್ತೆಯಾಗಿತ್ತು. ಮುಮ್ತಾಜ್ ಅಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದ್ದು, ಇದಕ್ಕೆ ಮಹಿಳೆಯ ಬ್ಲ್ಯಾಕ್ ಮೇಲ್ ಕಾರಣ ಎಂದು ಮೊಯಿದ್ದೀನ್ ಬಾವ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಇದೀಗ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್: ಹನಿಯ ಮನಿಟ್ರ್ಯಾಪ್ ಆಯಿಷಾ ಅರೆಸ್ಟ್​
ಮುಮ್ತಾಜ್ ಅಲಿ ಆತ್ಮಹತ್ಯೆ, ಆರೋಪಿ ಆಯಿಷಾ ಅರೆಸ್ಟ್
Follow us on

ದಕ್ಷಿಣ ಕನ್ನಡ, ಅ.08: ನದಿಗೆ ಹಾರಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ಪರಾರಿಯಾಗಿದ್ದ ಎ1 ಆರೋಪಿ ಆಯಿಷಾ ಅಲಿಯಾಸ್ ರೆಹಮತ್, A5 ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬುವವರನ್ನು ಇಂದು(ಮಂಗಳವಾರ) ಕಲ್ಲಡ್ಕ ಬಳಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದ ಮಾಸ್ಟರ್​ಮೈಂಡ್ ಆಗಿರುವ ಎ2 ಆರೋಪಿ ಅಬ್ದುಲ್ ಸತ್ತಾರ್​ಗಾಗಿ ಶೋಧ ನಡೆದಿದೆ.

ಘಟನೆ ವಿವರ

ಮೊನ್ನೆ(ಅ.06) ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆ ಆಗಿದ್ದು, ನಗರದ ಕೂಳೂರು ಬ್ರಿಡ್ಜ್​​ ಮೇಲೆ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಅವರ ಕೆಎ19 ಎಂಜಿ0004 ಸಂಖ್ಯೆಯ BMW X5 ಕಾರು ಪತ್ತೆ ಆಗಿತ್ತು. ಅದರಂತೆ ಮಂಗಳೂರಿನ ಕುಳೂರಿನ ಫಲ್ಗುಣಿ ನದಿಯಲ್ಲಿ ಸತತ ಮೂವತ್ತು ಗಂಟೆಗಳ ಕಾರ್ಯಾಚರಣೆಯ ಬಳಿಕ ಮುಮ್ತಾಜ್ ಮೃತದೇಹ, ಹುಡುಕಾಟದಲ್ಲಿದ್ದ ಸ್ಥಳೀಯ ಮೀನುಗಾರರಿಗೆ ಸಿಕ್ಕಿತ್ತು.

ಇದನ್ನೂ ಓದಿ:ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಆತ್ಮಹತ್ಯೆ ಕೇಸ್​: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಂಗಳೂರು ಕಮಿಷನರ್​

ಮುಮ್ತಾಜ್ ಮೃತದೇಹ ಪತ್ತೆಯಾಗುತ್ತಿದ್ದಂತೆ ಮೊಯಿದ್ದೀನ್ ಬಾವ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮನ ಮೃತದೇಹ ಕಂಡು ಬಾವಾ ಗೋಳಾಡಿದರೆ, ಸಂಬಂಧಿಕರು ಕಣ್ಣೀರಿಟ್ಟರು. ಶವವನ್ನು ಮೇಲಕ್ಕೆತ್ತಿದ ಬಳಿಕ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿ, ನಂತರ ಕೃಷ್ಣಾಪುರ ಮಸೀದಿಯಲ್ಲಿ ಅವರನ್ನು ದಫನ್ ಮಾಡಲಾಯಿತು.

ಇನ್ನು ಮುಮ್ತಾಜ್ ಆಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯನ್ನು ಉಪಯೋಗಿಸಿ ಮಾಡಿದ ಬ್ಲ್ಯಾಕ್ ಮೇಲ್ ಕಾರಣ ಎಂದು ಅಲಿ ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಮುಮ್ತಾಜ್ ಅಲಿ ತಮ್ಮ ಹೈದರ್ ಅಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ದೂರು ನೀಡಿದ್ದರು. ರೆಹಮತ್ ಅಲಿಯಾಸ್ ಆಯಿಷಾ ಎಂಬ ಮಹಿಳೆಯನ್ನು ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಆರು ಮಂದಿಯ ತಂಡ ಬ್ಲ್ಯಾಕ್ ಮೇಲ್ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಕಾವೂರು ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ,ಶೋಯೆಬ್ ಮತ್ತು ಮುಮ್ತಾಜ್ ಅಲಿ ಕಾರು ಚಾಲಕ ಸಿರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ಕೈಗೊಂಡಿದ್ದ ಮಂಗಳೂರು ಸಿಸಿಬಿ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ. ಸಧ್ಯ ಪ್ರಕರಣದ ಮಾಸ್ಟರ್​ಮೈಂಡ್ ಆಗಿರುವ ಎ2 ಆರೋಪಿ ಅಬ್ದುಲ್ ಸತ್ತಾರ್​ಗಾಗಿ ಶೋಧಕಾರ್ಯ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Tue, 8 October 24