AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಬ ಬಳಿ ಕುಮಾರಧಾರಾ ನದಿಯಲ್ಲಿ ಮೊಸಳೆ ಶವ ಪತ್ತೆ: ಹಲವು ಅನುಮಾನಗಳಿಗೆ ಕಾರಣವಾದ ಘಟನೆ

ಕುಮಾರಧಾರಾ ನದಿಯಲ್ಲಿ ಮರಿ ಮೊಸಳೆಯೊಂದರ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಡಬ ಸಮೀಪ ನದಿಯಲ್ಲಿ ಮೊಸಳೆ ಶವ ಪತ್ತೆಯಾಗಿದ್ದು, ಅತಿಯಾದ ತಾಪಮಾನದಿಂದ ಅಥವಾ ಮೀನುಗಾರಿಕೆಗೆಂದು ನದಿಗೆ ರಾಸಾಯನಿಕ ಸಿಂಪಡಿಸಿರುವುದರಿಂದ ಮೊಸಳೆ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಡಬ ಬಳಿ ಕುಮಾರಧಾರಾ ನದಿಯಲ್ಲಿ ಮೊಸಳೆ ಶವ ಪತ್ತೆ: ಹಲವು ಅನುಮಾನಗಳಿಗೆ ಕಾರಣವಾದ ಘಟನೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Apr 13, 2024 | 6:22 PM

Share

ಮಂಗಳೂರು, ಏಪ್ರಿಲ್ 13: ದಕ್ಷಿಣ ಕನ್ನಡ ಜಿಲ್ಲೆಯ ಕಡಬ (Kadaba) ಸಮೀಪದ ಪಂಜ-ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯ (Kumaradhara river) ಸೇತುವೆಯ ಕೆಳಗೆ ಮೊಸಳೆಯೊಂದರ (Crocodile) ಶವ ತೇಲುತ್ತಿರುವುದು ಪತ್ತೆಯಾಗಿದ್ದು, ನೀರು ಕಡಿಮೆಯಾಗಿರುವುದು ಮತ್ತು ವಿಪರೀತ ತಾಪಮಾನದಿಂದ ಮೃತಪಟ್ಟಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಸುಮಾರು 1.5 ರಿಂದ 2 ವರ್ಷ ವಯಸ್ಸಿನ ಮೊಸಳೆಯ ಶವವನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಮೊಸಳೆ ಸಾವಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಜಲ ಮಾಲಿನ್ಯದ ಪರಿಣಾಮ ಪ್ರದೇಶದಲ್ಲಿನ ವನ್ಯಜೀವಿಗಳ ಮೇಲೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಮೊಸಳೆಗಳು ಸಾಮಾನ್ಯವಾಗಿ 60 ವರ್ಷಗಳವರೆಗೆ ಜೀವಿತಾವಧಿಯನ್ನು ಹೊಂದಿರುತ್ತವೆ ಎನ್ನಲಾಗಿದೆ.

ಮಾಹಿತಿ ದೊರೆಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನದಿಯಿಂದ ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸಿದರು. ನದಿಯಲ್ಲಿ ಮೀನು ಹಿಡಿಯಲು ವ್ಯಕ್ತಿಗಳು ರಾಸಾಯನಿಕಗಳನ್ನು ಬಳಸಿರುವುದು ಮೊಸಳೆಯ ಸಾವಿಗೆ ಕಾರಣವಾಗಿರಬಹುದು ಎಂಬ ವದಂತಿಗಳೂ ಹರಡಿವೆ.

ಮೊಸಳೆ ಶವ ಪತ್ತೆಯಾದ ನಾಕೂರು ಗಯಾ ಪ್ರದೇಶದ ನೀರಿನಲ್ಲಿ ಕಂಡುಬರುವ ‘ದೇವರ ಮೀನು’ ಎಂದೂ ಕರೆಯಲ್ಪಡುವ ಮಹಶೀರ್ ಜಾತಿಯ ಮೀನುಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನ್ಯಾಚುರಲ್ ಐಸ್ ಕ್ರೀಂ ಮಾರಾಟ ಮಾಡುವ ಮಂಗಳೂರಿನ ಬೊಂಡ ಫ್ಯಾಕ್ಟರಿ ಬಂದ್​ಗೆ ಆದೇಶ

ಈ ವಿಚಾರವಾಗಿ ಪಂಜ ವಲಯ ಅರಣ್ಯಾಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಮೊಸಳೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮೀನುಗಳು ನೀರಿನಲ್ಲಿ ಈಜುತ್ತಿರುವುದನ್ನು ಗಮನಿಸಿದ್ದೇವೆ. ಅವುಗಳಿಗೆ ಹಾನಿಯಾಗಿಲ್ಲ. ಮತ್ತೊಂದು ಪ್ರಾಣಿಯೊಂದಿಗಿನ ಮುಖಾಮುಖಿಯ ಸಮಯದಲ್ಲಿ ಉಂಟಾದ ಗಾಯಗಳಿಂದ ಬಲಿಯಾಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ, ಈ ವೇಳೆ ಮೊಸಳೆಯ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ