ಧರ್ಮಸ್ಥಳ ಕೇಸ್: SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್
ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ದೊಡ್ಡ ತಿರುವು ಸಿಕ್ಕಿದೆ. ಸೌಜನ್ಯ ಮಾವ ವಿಠ್ಠಲ್ಗೌಡನೇ ನಮಗೆ ಬುರುಡೆ ತಂದುಕೊಟ್ಟಿರುವುದು ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ಎಸ್ಐಟಿ ಮುಂದೆ ಸ್ಫೋಟಕ ಹೇಳಿಕೆ ನೀಡಿರುವುದು ಮತ್ತಷ್ಟು ಪ್ರಕರಣ ಗಂಭೀರ ಪಡೆದುಕೊಂಡಿದೆ.

ಮಂಗಳೂರು, ಸೆಪ್ಟೆಂಬರ್ 07: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಒಂದೊಂದೆ ಸತ್ಯಗಳು ಹೊರ ಬರುತ್ತಿವೆ. ಇಷ್ಟು ದಿನ ಬುರುಡೆ ಕಥೆ ಕೇಳಿ ಗುಂಡಿ ತೋಡಿದ್ದ ಎಸ್ಐಟಿ ಅಧಿಕಾರಿಗಳಿಗೂ ಪಿತ್ತ ನೆತ್ತಿಗೇರಿತ್ತು. ತನಿಖೆ ವೇಳೆ ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ ನೀಡಿದ್ದರು. ಜಯಂತ್.ಟಿ ನೋಡಿದರೆ ನಾನು ಕೊಟ್ಟಿರೋದು ಅಲ್ಲ, ಗಿರೀಶ್ ಮಟ್ಟಣ್ಣನವರ್ (Girish Mattannavar) ಬುರುಡೆ ಕೊಟ್ಟಿರೋದು ಅಂತಾ ಆರೋಪಿಸಿದ್ದರು. ಮೊನ್ನೆ ಗಿರೀಶ್ ಮಣ್ಣನವರ್ನ ವಿಚಾರಣೆ ಮಾಡಿದರೆ ನನಗೇನೂ ಗೊತ್ತಿಲ್ಲ ಅಂದಿದ್ದರು. ಇದೀಗ ಸತತ ನಾಲ್ಕೈದು ದಿನಗಳ ಕಾಲ ವಿಚಾರಣೆ ನಡೆಸಿ ಬೆಂಡೆತ್ತಿದಾಗ, ಸೌಜನ್ಯ ಮಾವ ವಿಠ್ಠಲ್ ಗೌಡರ ಹೆಸರು ಮುನ್ನೆಲೆಗೆ ಬಂದಿದೆ.
ಮಟ್ಟಣ್ಣನವರ್ ಹೇಳಿಕೆ ಕೇಳಿ ಎಸ್ಐಟಿಯೇ ಶಾಕ್!
ಧರ್ಮಸ್ಥಳ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿಗೆ ಬುರುಡೆ ಕಥೆ ಹಿಂದಿನ ಸ್ಫೋಟಕ ಮಾಹಿತಿಗಳೇ ಸಿಗುತ್ತಿವೆ. ಸೌಜನ್ಯ ಮಾವ ವಿಠ್ಠಲ್ಗೌಡನೇ ನಮಗೆ ಬುರುಡೆ ತಂದುಕೊಟ್ಟಿರುವುದು ಅಂತಾ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ಎಸ್ಐಟಿ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟಿರೋದು ಮತ್ತಷ್ಟು ಪ್ರಕರಣ ಗಂಭೀರ ಪಡೆದುಕೊಂಡಿದೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್: ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯ ಮಾವ ವಿಠ್ಠಲ ಗೌಡ!
ಗಿರೀಶ್ ಮಟ್ಟಣ್ಣನವರ್ ಹೇಳಿಕೆ ಕೇಳಿ ಎಸ್ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಅಂತೆ. ನಮಗೆ ಸೌಜನ್ಯ ಮಾವ ವಿಠ್ಠಲ್ಗೌಡರೇ ಬುರುಡೆ ತಂದುಕೊಟ್ಟಿರೋದು, ಮಾಸ್ಕ್ಮ್ಯಾನ್ ಚಿನ್ನಯ್ಯ ತೋರಿಸಿದ 11A ಸ್ಪಾಟ್ನ ಸ್ವಲ್ಪ ದೂರದಲ್ಲೇ ಬುರುಡೆ ಸಿಕ್ಕಿರೋದು. ಬಂಗ್ಲಗುಡ್ಡ ಕಾಡಿನಿಂದಲೇ ತಂದಿರೋ ಬುರುಡೆಯನ್ನ ನಮಗೆ ಕೊಟ್ಟಿದ್ದಾರೆ ಅಂತಾ ವಿಚಾರಣೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಬಾಯ್ಬಿಟ್ಟಿದ್ದಾರಂತೆ.
ಸೌಜನ್ಯ ಮಾವ ವಿಠಲ್ ಗೌಡಗೂ ಎಸ್ಐಟಿ ಗ್ರಿಲ್
ಗಿರೀಶ್ ಮಟ್ಟಣ್ಣನವರ್ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸೌಜನ್ಯ ಮಾವ ವಿಠ್ಠಲ್ಗೌಡರನ್ನ ಎಸ್ಐಟಿ ಅಧಿಕಾರಿಗಳು ಬೆಂಡೆತ್ತಿದ್ದು, ಹಂತ ಹಂತವಾಗಿ ಬುರುಡೆ ರಹಸ್ಯವನ್ನ ತೆರೆದಿಟ್ಟಿದ್ದಾರೆ. ನನಗೆ ಸ್ಥಳದಲ್ಲಿ ಕೇವಲ ಬುರುಡೆ ಮಾತ್ರ ಸಿಕ್ಕಿರೋದು, ಮರದ ಕೆಳಗೆ ಭೂಮಿ ಮೇಲ್ಭಾಗದಲ್ಲಿ ನನಗೆ ಬುರುಡೆ ಸಿಕ್ಕಿದ್ದು ಅಂತಾ ಎಸ್ಐಟಿ ವಿಚಾರಣೆಯಲ್ಲಿ ಸೌಜನ್ಯ ಮಾವ ವಿಠ್ಠಲ್ಗೌಡ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗಾದರೆ ಇವರು ಹೇಳ್ತಿರೋ ಪ್ರಕಾರ ಬುರುಡೆ ಸಿಕ್ಕಮೇಲೆ ಅಸ್ಥಿಪಂಜರವೂ ಸಿಗಬೇಕು, ಹಾಗಾಗಿ ಎಸ್ಐಟಿ, ಕಾಡಿನಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ.
ಚಿನ್ನಯ್ಯನನ್ನು ಗ್ಯಾಂಗ್ಗೆ ಪರಿಚಯಿಸಿದ್ದ ವಿಠಲಗೌಡ
ಇನ್ನು ಇಂಟ್ರಸ್ಟಿಂಗ್ ವಿಚಾರ ಏನಂದರೆ, ಸೌಜನ್ಯ ಮಾವ ಆಗಿರುವ ವಿಠ್ಠಲ್ಗೌಡನಿಗೆ ಮಾಸ್ಕ್ಮ್ಯಾನ್ ಚಿನ್ನಯ್ಯ ಮೊದಲೇ ಪರಿಚಯ ಇರೋ ವಿಚಾರ ಇದೀಗ ಗೊತ್ತಾಗಿದೆ. 2 ವರ್ಷದ ಹಿಂದೆ ಉಜಿರೆಯಲ್ಲಿ ಚಿನ್ನಯ್ಯ ಕೆಲಸ ಮಾಡುತ್ತಿದ್ದ. ಇದೇ ವೇಳೆ ವಿಠ್ಠಲ್ಗೌಡನ ಕಣ್ಣಿಗೆ ಚಿನ್ನಯ್ಯ ಬಿದ್ದಿದ್ದ. ಇಬ್ಬರ ನಡುವೆಯೂ ಪರಿಚಯ ಕೂಡ ಆಗುತ್ತೆ. ಕಾನೂನು ಪ್ರಕ್ರಿಯೆಗೆ ಒಳಪಟ್ಟ ಅಪರಿಚಿತ ಶವಗಳನ್ನ ಚಿನ್ನಯ್ಯ ಹೂಳ್ತಿರೋ ವಿಚಾರವೂ ವಿಠ್ಠಲ್ಗೌಡನಿಗೆ ಗೊತ್ತಿತ್ತು. ಇದೇ ವಿಚಾರವನ್ನ ಬಂಡವಾಳ ಮಾಡಿಕೊಂಡ ವಿಠ್ಠಲ್ಗೌಡ, ಗ್ಯಾಂಗ್ಗೆ ಚಿನ್ನಯ್ಯನನ್ನ ಪರಿಚಯಿಸುತ್ತಾನೆ. ನಂತರದಲ್ಲಿ ಬುರುಡೆ ಕಥೆ ಕಟ್ಟಿ ಷಡ್ಯಂತ್ರ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ. ಇದೆಲ್ಲವೂ ಎಸ್ಐಟಿ ವಿಚಾರಣೆಯಲ್ಲಿ ಬಯಲಾಗಿದೆ.
ಬುರುಡೆ ತಂದಿದ್ದು ಯಾವಾಗ ಗೊತ್ತಾ?
ಒಂದು ವರ್ಷದ ಹಿಂದೆ ಈ ಬುರುಡೆ ತರಲಾಗಿದೆ. ಕಳೆದ ಮಳೆಗಾಲದ ವೇಳೆ ಬಂಗ್ಲೆಗುಡ್ಡ ಬಳಿ ವಿಠಲಗೌಡ ಬುರುಡೆ ತಂದಿದ್ದ. ಅಂದಿನಿಂದ ಒಂದು ವರ್ಷಗಳ ಕಾಲ ಬುರುಡೆ ಗ್ಯಾಂಗ್ ಬಳಿ ಇತ್ತು ಎಂಬುವುದು ಎಸ್ಐಟಿ ವಿಚಾರಣೆ ವೇಳೆ ಬಯಲಾಗಿದೆ.
ಇದನ್ನೂ ಓದಿ: ಚಿನ್ನಯ್ಯನಿಗೆ ಎಸ್ಐಟಿ ಗ್ರಿಲ್: ‘ಬುರುಡೆ’ ಕೊಟ್ಟಿದ್ದೇ ಜಯಂತ್! ಮತ್ತಷ್ಟು ಸ್ಫೋಟಕ ಸಂಗತಿ ಬಹಿರಂಗ
ಇಷ್ಟೆಲ್ಲಾ ಮಾಹಿತಿ ಸಿಕ್ಕಿದರೂ ಎಸ್ಐಟಿ ಮಾತ್ರ ವಿಚಾರಣೆಯನ್ನ ನಿಲ್ಲಿಸ್ತಿಲ್ಲ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತೀವ್ರ ವಿಚಾರಣೆ ನಡೆಸುತ್ತಿದೆ. ಮಟ್ಟಣ್ಣನವರ್, ಜಯಂತ್ಗೆ ಎಸ್ಐಟಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದೆ. ಜಯಂತ್ಗೆ 4ನೇ ದಿನವೂ ವಿಚಾರಣೆ ಬಿಸಿ ತಟ್ಟಿದರೆ, ಮಟ್ಟಣ್ಣನವರ್ಗೆ 3ನೇ ದಿನವೂ ಗ್ರಿಲ್ ಮಾಡಲಾಗ್ತಿದೆ. ವಿಠ್ಠಲ್ಗೌಡನನ್ನ ನಿನ್ನೆಯಿಂದ ಎಸ್ಐಟಿ ಠಾಣೆಯಲ್ಲೇ ಇರಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







