ಸ್ಮಾರ್ಟಿ ಸಿಟಿ ಮಂಗಳೂರಿಗೆ ರಸ್ತೆಗಳ ಅಗೆತದ ಕಪ್ಪು ಚುಕ್ಕೆ: ಗೇಲ್ ಪೈಪ್‌ಲೈನ್, ಬಿಎಸ್ಎನ್ಎಲ್ ಸೇರಿ ಹಲವು ಇಲಾಖೆಗಳಿಂದ ಅಧ್ವಾನ

ಸ್ಮಾರ್ಟ್ ಸಿಟಿ ಕಾಮಗಾರಿ ಬಂದ ಬಳಿಕ ಪೈಪ್ ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಸರಬರಾಜು ಮಾಡುವ ಗೈಲ್ ಯೋಜನೆ ಬಂದಿದೆ. ಇನ್ನೊಂದು ಕಡೆ ಕುಡಿಯುವ ನೀರು ಮನೆ ಮನೆಗೆ ಸರಬರಾಜು ಮಾಡುವ ಜಲಸಿರಿ ಯೋಜನೆಯು ಪ್ರಗತಿಯಲ್ಲಿದೆ. ಇದರ ಜೊತೆ ಇಂಟರ್ನೆಟ್‌ಗೆ ವೇಗ ನೀಡಲು ಬಿಎಸ್ಎನ್ಎಲ್ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.

ಸ್ಮಾರ್ಟಿ ಸಿಟಿ ಮಂಗಳೂರಿಗೆ ರಸ್ತೆಗಳ ಅಗೆತದ ಕಪ್ಪು ಚುಕ್ಕೆ: ಗೇಲ್ ಪೈಪ್‌ಲೈನ್, ಬಿಎಸ್ಎನ್ಎಲ್ ಸೇರಿ ಹಲವು ಇಲಾಖೆಗಳಿಂದ ಅಧ್ವಾನ
ಸಾಂದರ್ಭಿಕ ಚಿತ್ರ
Edited By:

Updated on: Oct 19, 2023 | 4:34 PM

ಮಂಗಳೂರು, ಅಕ್ಟೋಬರ್ 19: ಕಡಲನಗರಿ ಮಂಗಳೂರಿಗೆ (Mangalore) ಸ್ಮಾರ್ಟ್ ಸಿಟಿ (Smart City) ಯೋಜನೆ ಬಂದು ಆರು ವರ್ಷಗಳಾಗಿವೆ. ಆದ್ರೆ ಆರು ವರ್ಷದಲ್ಲಿ ಹಲವು ಕಾಮಗಾರಿಗಳು ಇನ್ನು ಕೂಡಾ ಅಪೂರ್ಣ ಸ್ಥಿತಿಯಲ್ಲಿವೆ. ಈ ನಡುವೆ ನಗರದಲ್ಲಿ ಹೊಸದಾದ ಕಾಂಕ್ರೀಟ್ ರಸ್ತೆಗಳ ಅಗೆತ ಸ್ಮಾರ್ಟ್ ಕಾಮಗಾರಿಗಳಿಗೆ ಕಪ್ಪುಚುಕ್ಕೆಯಾಗುತ್ತಿದೆ. ಇದರ ವಿರುದ್ದ ಜನ ಹಿಡಿಶಾಪ ಹಾಕುತ್ತಿದ್ದಾರೆ. ಮಹಾನಗರಗಳನ್ನು ಇನ್ನಷ್ಟು ಅಭಿವದ್ದಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯನ್ನೇನೋ ಜಾರಿಗೆ ತಂದಿದೆ. ಆದ್ರೆ ಮಂಗಳೂರಿಗರ ಪಾಲಿಗೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ಶಾಪವಾಗಿ ಪರಿಣಮಿಸಿದೆ. ಯಾಕಂದ್ರೆ ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೆತ್ತಿಕೊಂಡು ಆರು ವರ್ಷಗಳಾದರೂ ಹಲವು ಕಾಮಗಾರಿಗಳು ಇಂದಿಗೂ ಅಪೂರ್ಣ ಸ್ಥಿತಿಯಲ್ಲಿವೆ.

ಇಷ್ಟೇ ಅಲ್ಲದೆ, ಹೊಸದಾಗಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳನ್ನು ಅಗೆದುಹಾಕುತ್ತಿರುವುದು ಸಹ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಕಪ್ಪು ಚುಕ್ಕೆಯಾಗುತ್ತಿದೆ. ಹೀಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಇಳಿದಿದ್ದಾರೆ. ಹೊಸ ರಸ್ತೆಗಳನ್ನ ಅಗೆದು ಹಾಕುವ ಸಂಸ್ಥೆಗಳ ವಿರುದ್ದ ನಳಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಸ್ಮಾರ್ಟ್ ಸಿಟಿ ಕಾಮಗಾರಿ‌ ಮುಗಿಸಬೇಕು ಎಂದು ಅಂತಿಮ ಗಡುವು ಕೊಟ್ಟು ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದಾರೆ. ಇನ್ಮುಂದೆ ಹದಿನೈದು ದಿವಸಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆದು ಕಾಮಗಾರಿಗಳಿಗೆ ವೇಗ ಕೊಡುವ ಕೆಲಸವನ್ನು ಸಹ ಮಾಡುತ್ತೇನೆಂದು ಹೇಳಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿ ಬಂದ ಬಳಿಕ ಪೈಪ್ ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಸರಬರಾಜು ಮಾಡುವ ಗೈಲ್ ಯೋಜನೆ ಬಂದಿದೆ. ಇನ್ನೊಂದು ಕಡೆ ಕುಡಿಯುವ ನೀರು ಮನೆ ಮನೆಗೆ ಸರಬರಾಜು ಮಾಡುವ ಜಲಸಿರಿ ಯೋಜನೆಯು ಪ್ರಗತಿಯಲ್ಲಿದೆ. ಇದರ ಜೊತೆ ಇಂಟರ್ನೆಟ್‌ಗೆ ವೇಗ ನೀಡಲು ಬಿಎಸ್ಎನ್ಎಲ್ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಈ ಮೂರು ಕಾಮಗಾರಿಗಳಿಗೂ ರಸ್ತೆಯನ್ನು ಅಗೆಯುವ ಸನ್ನಿವೇಶ ಎದುರಾಗಿದೆ. ಆದ್ರೆ ಕೆಲ ಸಂಸ್ಥೆಯವರು ರಸ್ತೆ ಅಗೆದು ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ವಾಹನ ಸವಾರರು, ನಾಗರಿಕರು ಈ ಕಾಮಗಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಈ ನಡುವೆ ಕಳೆದ ಐದು ವರ್ಷದಲ್ಲಿ ಸ್ಮಾರ್ಟ್ ಸಿಟಿಯ ಯಾವುದೇ ಕಾಮಗಾರಿ ಪೂರ್ಣವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ನಾವು ಬಂದ ಬಳಿಕದಿಂದ ವೇಗ ಕೊಡುವ ಕೆಲಸ ಆಗುತ್ತಿದೆ ಅಂದಿದ್ದಾರೆ.

ಇದನ್ನೂ ಓದಿ: Arecanut Husk: ಶಬ್ದ ನಿರೋಧಕವಾಗಿ ಕಾರ್ಯನಿರ್ವಹಿಸುವಲ್ಲಿ ಅಡಿಕೆ ಸಿಪ್ಪೆ ಪರಿಣಾಮಕಾರಿ; NITK ಸಂಶೋಧನೆ

ಈಗಾಗಲೇ ಸ್ಮಾರ್ಟ್ ಸಿಟಿ ಕಾಮಗಾರಿಗೆ ಕೇಂದ್ರ ಸರಕಾರದಿಂದ 392 ಕೋಟಿ ರೂ. ಮತ್ತು ರಾಜ್ಯ ಸರಕಾರದಿಂದ 414 ಕೋಟಿ ರೂ. ಸೇರಿದಂತೆ ಒಟ್ಟು 806 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನು ಕೂಡಾ 33 ಕಾಮಗಾರಿಗಳು ಪ್ರಗತಿಯಲ್ಲಿದೆ. ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಜನೋಪಯೋಗಿಯಾಗಿ ಪೂರ್ತಿಗೊಳಿಸಿ ನಗರದ ಇನ್ನಷ್ಟು ಅಭಿವೃದ್ದಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us