ಮಂಗಳೂರು, ಜನವರಿ 14: ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಂಗಳೂರು ಕೂಡ ಒಂದು. ವರ್ಷ ಕಳೆದಂತೆ ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಪಾರ್ಕಿಂಗ್ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿದೆ. ಮೂರು ವರ್ಷಗಳ ಹಿಂದೆ ನಗರದಲ್ಲಿ ಪ್ರಾರಂಭಿಸಿದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ (parking complex) ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಇನ್ನು ಸಹ ಪಿಲ್ಲರ್ ಮೇಲೇರಿ ಬಂದಿಲ್ಲ.
ಮಂಗಳೂರು ನಗರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಪಾಲಿಕೆಯ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದಾಗಿ ಹೆಚ್ಚಿನ ಕಮರ್ಷಿಯಲ್ ಕಾಂಪ್ಲೆಕ್ಸ್ಗಳಲ್ಲಿ ವಾಹನಗಳ ಪಾರ್ಕಿಂಗ್ಗೆ ಸ್ಥಳವಕಾಶವೇ ಇಲ್ಲವಾಗಿದೆ. ಹೀಗಾಗಿ ಮಂಗಳೂರು ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ದಶಕದ ಹಿಂದೆಯೇ ಮಲ್ಟಿ ಲೆವೆಲ್ ಪಾರ್ಕಿಂಗ್ ಸಂಕೀರ್ಣ ನಿರ್ಮಾಣದ ಪ್ರಸ್ತಾಪವನ್ನು ಮಾಡಲಾಗಿತ್ತು.
ಕಳೆದ ಎರಡು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಬಹು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಕಾಮಗಾರಿಯನ್ನು ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದ ಸ್ಥಳದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಕಾಮಗಾರಿಗಾಗಿ ಬೃಹದಾದ ಹೊಂಡ ತೆಗೆದು ಸೈಡ್ ವಾಲ್ ಕಟ್ಟಿದ್ದು ಬಿಟ್ಟರೆ ಬೇರೆನೂ ಆಗಿಲ್ಲ. ಹಾಕಿರುವ ಪಿಲ್ಲರ್ಗಳು ಇನ್ನು ಮೇಲೆರದೆ ಬಹುಮಹಡಿಯ ಪಾರ್ಕಿಂಗ್ ಕಟ್ಟಡ ಕೇವಲ ಸ್ಕೆಚ್ಗೆ ಮಾತ್ರ ಸೀಮಿತವಾಗಿದೆ.
ಇದನ್ನೂ ಓದಿ: ಮಂಗಳೂರು: 8 ವರ್ಷಗಳ ನಂತರ ಸಮುದ್ರದಾಳದಲ್ಲಿ ಪತ್ತೆಯಾಯ್ತು ಸೇನಾ ವಿಮಾನ
ಸುಮಾರು 79.05 ಕೋಟಿ ರೂ.ಗಳಲ್ಲಿ ಈ ಯೋಜನೆ ನಡೆಸಲಾಗುತ್ತಿದೆ. ಆದರೆ ಕಾಮಗಾರಿ ಮಾತ್ರ ವೇಗ ಪಡೆಯುತ್ತಿಲ್ಲ. ಈ ಹಿಂದೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಾರ್, ಬೈಕ್ ಪಾರ್ಕಿಂಗ್ ಮಾತ್ರವಲ್ಲದೆ ಸಣ್ಣಪುಟ್ಟ ವ್ಯಾಪಾರಸ್ಥರೂ ಕೂಡ ಇಲ್ಲಿ ವ್ಯಾಪಾರ ಮಾಡುತ್ತಿದ್ದರು. ಆದರೆ ಇದೀಗ ಗುಂಡಿ ಅಗೆದಿರುವುದರಿಂದ ಎಲ್ಲರು ಸಮಸ್ಯೆ ಅನುಭವಿಸುವಂತಾಗಿದೆ.
ಇದೇ ಸ್ಥಳದಲ್ಲಿ ಹಲವು ದಶಕದಿಂದ ಇರುವ ಪ್ರವಾಸಿ ಬಾಡಿಗೆ ವಾಹನ ನಿಲ್ದಾಣಕ್ಕೆ ಜಾಗದ ಸಮಸ್ಯೆಯಿಂದಾಗಿ ಕಾರು ಚಾಲಕರು ವಾಹನ ನಿಲ್ಲಿಸಲು ಪರದಾಡುವಂತಾಗಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಈ ಮಲ್ಟಿ ಲೆವೆಲ್ ಪಾರ್ಕಿಂಗ್ ಸಂಕೀರ್ಣ ಉಪಯೋಗವಾಗುವಂತೆ ಮಾಡಬೇಕಾಗಿದೆ. ಇದರ ಜೊತೆ ಇಲ್ಲಿನ ಪ್ರವಾಸಿ ಬಾಡಿಗೆಯ ವಾಹನ ನಿಲ್ದಾಣದ ಸೀಮಿತ ವಾಹನಕ್ಕೆ ಉಚಿತವಾಗಿ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕಾರು ಚಾಲಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮಂಗಳೂರೇ ಆಸರೆ, ಹೇಗೆ? ಇಲ್ಲಿದೆ ನೋಡಿ ಮಾಹಿತಿ
ಮಳೆಗಾಳದಲ್ಲಂತೂ ಬೃಹತ್ ಕೆರೆಯಾಕಾರದಲ್ಲಿ ಈ ಹೊಂಡ ಅಪಾಯಕಾರಿಯಾಗುತ್ತಿದ್ದು ಈ ಬಾರಿಯ ಮಳೆಗಾಲದಲ್ಲೂ ಅದೇ ಪರಿಸ್ಥಿತಿಯಂತಾಗುತ್ತಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಅದಷ್ಟು ಶೀಘ್ರವಾಗಿ ಈ ಕಾಮಗಾರಿಯನ್ನು ಮುಗಿಸಿ ದಶಕದ ಯೋಜನೆಯನ್ನು ಮಂಗಳೂರು ಜನ ಕಣ್ತುಂಬಿಕೊಳ್ಳುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.