AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್​ ಪರಿಣಾಮ: ನೆಟ್ವರ್ಕ್​ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು!

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್​ ರೌಡಿಗಳು, ಉಗ್ರಗಾಮಿಗಳು ಖುಲ್ಲಂಖುಲ್ಲಾ ಮೊಬೈಲ್​ ಬಳಕೆ ಮಾಡುತ್ತಿದ್ದ ವಿಡಿಯೋ ವೈರಲ್​ ಆಗಿತ್ತು. ಆದರೆ ಮಂಗಳೂರಿನ ಕಾರಾಗೃಹದ ಕತೆ ಬೇರೆಯೇ ಆಗಿದೆ. ಇಲ್ಲಿ ಜೈಲಿನ ಹೊರಗೆ ಓಡಾಡುವವರೂ ಮೊಬೈಲ್​ ಫೋನ್​ ಬಳಕೆ ಮಾಡದಂತಹ ಪರಿಸ್ಥಿತಿ ಉಂಟಾಗಿದ್ದು ಈ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.

ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್​ ಪರಿಣಾಮ: ನೆಟ್ವರ್ಕ್​ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು!
ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್​ ಪರಿಣಾಮ: ನೆಟ್ವರ್ಕ್​ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು!
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Nov 12, 2025 | 2:12 PM

Share

ಮಂಗಳೂರು, ನವೆಂಬರ್ 12: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada)  ಮಂಗಳೂರಿನ (Mangaluru) ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ನೆಟ್‌ವರ್ಕ್ ಜಾಮರ್​ ಅಳವಡಿಕೆ ಮಾಡಲಾಗಿದೆ. ಆದರೆ ಈ ಜಾಮರ್​ನಿಂದಾಗಿ ಕಾರಾಗೃಹದ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ನೆಟ್​ವರ್ಕ್ ಸಿಗದೇ ಜನರು ಪರದಾಡುವಂತಾಗಿದೆ. ಈ ಜಾಮರ್​ ನೆಟ್​ವರ್ಕ್​ ಸಮಸ್ಯೆಯ ಬಿಸಿ ಕಾರಾಗೃಹದಿಂದ ಸುಮಾರು 800 ಮೀಟರ್​ ದೂರದಲ್ಲೇ ಇರುವ ನ್ಯಾಯಾಲಯಕ್ಕೂ ತಟ್ಟಿದ್ದು, ವಕೀಲರಿಗೆ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಮಂಗಳೂರು ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್​ನಿಂದ ಸ್ಥಳೀಯರಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ವಕೀಲರು ಗಡುವು ನೀಡಿದ್ದಾರೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ಮಂಗಳೂರು ವಕೀಲರ ಸಂಘ ಸರ್ಕಾರಕ್ಕೆ ರವಾನೆ ಮಾಡಿದೆ.

ಜೈಲಿನೊಳಗೆ ಕೈದಿಗಳಿಗೆ ಸಿಗುತ್ತಿದೆ ನೆಟ್ವರ್ಕ್, ಹೊರಗಡೆ ಇರೋ ಸಾರ್ವಜನಿಕರಿಗಿಲ್ಲ!

ಈ ಇಡೀ ಪ್ರಕರಣದಲ್ಲೇ ಒಂದು ವಿಪರ್ಯಾಸವಿದೆ. ಜೈಲಿನೊಳಗಿರುವ ಕೈದಿಗಳಿಗೆ ಸಿಗುವ ನೆಟ್ವರ್ಕ್, ಜೈಲಿನ ಸುತ್ತಮುತ್ತ ಇರುವ ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪವನ್ನು ವಕೀಲರು ಮಾಡಿದ್ದಾರೆ. ಕಾರಾಗೃಹದ ಒಳಗೆ ಕೈದಿಗಳು ಮೊಬೈಲ್​ ಬಳಕೆ ಮಾಡುತ್ತಿದ್ದಾರೆ. ಆದರೆ ಹೊರಗೆ ನಾವು ನೆಟ್​ವರ್ಕ್ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ಕೋರ್ಟ್​ನಲ್ಲಿ ಮೊಬೈಲ್​ ಫೋನ್​ ಮೂಲಕ ಕಕ್ಷಿದಾರರ ಜೊತೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ. ಯಾರನ್ನು ಸಂಪರ್ಕಿಸುವುದಕ್ಕೂ ಸಾಧ್ಯ ಆಗ್ತಿಲ್ಲ. ಇದರಿಂದ ನಮ್ಮ ಕಾರ್ಯವೈಖರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್​ಗೆ ಮಂಗಳೂರು ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ನ್ಯಾಯಪೀಠ ಜೈಲಿನಲ್ಲಿ ಅಳವಡಿಸಲಾಗಿರುವ ಜಾಮರ್​ನ ರೇಂಜ್ ಎಷ್ಟಿದೆ, ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ವರದಿ ನೀಡುವಂತೆ ಹೇಳಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ: 4 ವಿಚಾರಣಾಧೀನ ಕೈದಿಗಳ ವಿರುದ್ಧ FIR

ಒಟ್ಟಿನಲ್ಲಿ ಖೈದಿಗಳು ಮೊಬೈಲ್ ಬಳಕೆ ಮಾಡದಂತೆ ನೋಡಿಕೊಳ್ಳಲು ಹಾಕಿರುವ ಜಾಮರ್ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ಸದ್ಯ ಜೈಲಿನ ಜಾಮರ್ ಸಮಸ್ಯೆ ವಿರುದ್ಧ ವಕೀಲರ ಸಂಘ ಗಂಭೀರ ಹೋರಾಟಕ್ಕೆ ಮುಂದಾಗಿದ್ದು ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ashok
Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More