ಮಂಗಳೂರು, ಮಾರ್ಚ್ 09: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwala) ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ (Diganth) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂದತಿಯೊಂದು ಹಬ್ಬಿದೆ. ದಿಗಂತ್ ಬಂಟ್ವಾಳ ತಾಲೂಕಿನ ಸಜಿಪ ಮೂಲದ ಮಂಗಳಮುಖಿಯ ಜೊತೆ ಹೋಗಿದ್ದಾನೆ ಎಂದು ಸ್ನೇಹಿತರ ಮೂಲಕ ಗೊತ್ತಾಯಿತು ಎಂದು ದಿಗಂತ್ ಸಹೋದರ ಪವನ್ ಟಿವಿ9 ಗೆ ತಿಳಿಸಿದ್ದಾರೆ.
ಟಿವಿ9 ಜೊತೆ ಮಾತನಾಡಿದ ಪವನ್, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿ ಹರಡುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡದ ಎಸ್ಐ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ಮಾಹಿತಿ ಇದೆಯಾ ಎಂದು ವಿಚಾರಿಸಿದೆ. ಅವರು ನಮಗೆ ಈ ರೀತಿಯ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ರು. ಜನ ಆ ರೀತಿ ಹೇಳುತ್ತಿದ್ದಾರೆ ಅಂದ್ರು. ಅದು ಸುಳ್ಳು ಸುದ್ದಿಯಾಗಿರಬಹುದು. ಈವರೆಗೂ ಆತನ ವರ್ತನೆಯಲ್ಲಿ ಈ ರೀತಿಯ ಬದಲಾವಣೆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪವನ್ ಹೇಳಿದರು.
ಸ್ನೇಹಿತರ ಜೊತೆ ಮೆಸೇಜ್ ಮಾಡುತ್ತಿದ್ದನು. ತಡರಾತ್ರಿವರೆಗೂ ಮೊಬೈಲ್ನಲ್ಲಿ ಗೇಮ್ಸ್ ಆಡುತ್ತಿದ್ದನಂತೆ. ಅವನು ಬೇರೆ ಬೇರೆ ಮೊಬೈಲ್ನ್ನೂ ಉಪಯೋಗಿಸುತ್ತಿದ್ದನು ಎಂದು ಪೊಲೀಸರು ಹೇಳಿದ ಬಳಿಕವಷ್ಟೇ ನನಗೆ (ಪವನ್) ಗೊತ್ತಾಗಿದೆ ಎಂದು ಹೇಳಿದ್ದಾರೆ.
ಫರಂಗಿಪೇಟೆಯಲ್ಲಿ ಸಿಸಿ ಕ್ಯಾಮರಾ ತುಂಬಾ ಕಡಿಮೆಯಿವೆ. ನಾಪತ್ತೆಯಾಗಿ 48 ಗಂಟೆ ಬಳಿಕ ಶ್ವಾನದಳ ಬಂದಿತ್ತು. ಆದರೆ, 6 ಗಂಟೆ ಬಳಿಕ ಶ್ವಾನಕ್ಕೆ ವಾಸನೆ ಗ್ರಹಿಸುವುದು ಸಾಧ್ಯವಾಗಲ್ಲ. ಶ್ವಾನ ಬಂದರೂ ಸಹ ಏನು ಪ್ರಯೋಜನ ಇಲ್ಲದಂತಾಗಿದೆ. 24 ಗಂಟೆ ಒಳಗೆ ಹುಡುಕಾಟ ಆರಂಭಿಸಿದ್ದರೇ ಏನಾದರೂ ಒಳ್ಳೆ ಸುದ್ದಿ ಸಿಗುತ್ತಿತ್ತು. ಹಿಂದೂ ಸಂಘಟನೆಗಳ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ತನಿಖೆಯಲ್ಲಿ ಯಾವುದೇ ಬೆಳವಣಿಗೆ ಇಲ್ಲದಾಗ ಇನ್ನಷ್ಟು ಒತ್ತಡ ಹಾಕಬೇಕಿದೆ ಎಂದರು.
ದಿಗಂತ್ಗಾಗಿ ಪೊಲೀಸರು ಕಳೆದ 12 ದಿನಗಳಿಂದ ಹುಡುಕಾಟ ನಡೆಸಿದ್ದಾರೆ. ವಿವಿಧ ಆಯಾಮಗಳಲ್ಲಿ 40 ಕ್ಕೂ ಅಧಿಕ ಪೋಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಬಂಟ್ವಾಳ ಸಬ್ ಡಿವಿಜನ್ನ ಸುಮಾರು 9 ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳು. ಎಸ್.ಐ.ಗಳು ಹಾಗೂ ಸುಮಾರು 100 ಕ್ಕೂ ಅಧಿಕ ಪೋಲೀಸರ ತಂಡ ಹುಡುಕಾಟದಲ್ಲಿ ನಿರತವಾಗಿದೆ. ಡಿಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮೆರಾಗಳನ್ನು ಬಳಿಸಿ ಹುಡುಕಾಟ ನಡೆಸಿದ್ದಾರೆ.
ಮೊದಲಿಗೆ ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನೇತ್ರಾವತಿ ನದಿ ಭಾಗದ ಸುತ್ತಲಿನ ಭಾಗದಲ್ಲಿ ದೋಣಿ ಬಳಸಿಕೊಂಡು ನದಿಯಲ್ಲೂ ಕೂಡ ಸರ್ಚ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರು ಜೈಲಿನಲ್ಲಿ 40ಕ್ಕೂ ಹೆಚ್ಚು ಕೈದಿಗಳಿಗೆ ಫುಡ್ ಪಾಯಿಸನ್: ವಾಂತಿ-ಭೇದಿ, ಓರ್ವನ ಸ್ಥಿತಿ ಗಂಭೀರ
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಅಡಿಷನಲ್ ಎಸ್ಪಿ ರಾಜೇಂದ್ರ, ಡಿವೈಎಸ್ ಪಿ. ವಿಜಯಪ್ರಸಾದ್, ಇನ್ಸ್ಪೆಕ್ಟರ್ಗಳಾದ ಶಿವಕುಮಾರ್, ಅನಂತಪದ್ಮನಾಭ, ನಾಗಾರಾಜ್ ಹೆಚ್, ಎಸ್ಐಗಳಾದ ನಂದಕುಮಾರ್, ಪ್ರಸನ್ನ, ಅವಿನಾಶ್, ಹರೀಶ್, ಉದಯರವಿ, ರಾಮಕೃಷ್ಣ, ಕಿಶೋರ್, ಸಮರ್ಥ್, ಅರ್ಜುನ್, ಮುರಳೀಧರ, ಆನಂದ ಮತ್ತು ಕೌಶಿಕ್ ಮತ್ತು ಎಸ್ಐಗಳು ಸೇರಿಕೊಂಡು 10 ತಂಡವಾಗಿ ಕಾರ್ಯಾಚರಣೆ ನಡೆಸಿವೆ.