ರೆಸಾರ್ಟ್​ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ದುರ್ಮರಣ

ಖಾಸಗಿ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಾಡುತ್ತಿದ್ದ ಮೈಸೂರು ಮೂಲದ ಮೂವರು ಯುವತಿಯರು ಏಕಾಏಕಿ ಮುಳುಗಿ ಮೃತಪಟ್ಟಿದ್ದಾರೆ.

ರೆಸಾರ್ಟ್​ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ದುರ್ಮರಣ
Edited By:

Updated on: Nov 17, 2024 | 4:13 PM

ಮಂಗಳೂರು, (ನವೆಂಬರ್ 17): ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್​ನಲ್ಲಿ ನಡೆದಿದೆ. ಮೈಸೂರು ಮೂಲದ ಯುವತಿಯರು ಉಚ್ಚಿಲ ಬೀಚ್ ಬಳಿಯ ರೆಸಾರ್ಟ್​ನ ಸ್ವಮ್ಮಿಂಗ್​ ಫುಲ್​ನಲ್ಲಿ ಈಜಾಡುವಾಗ ಏಕಾಏಕಿ ಮುಳುಗಿ ಮೃತಪಟ್ಟಿದ್ದಾರೆ. ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಮೃತ ದುರ್ವೈವಿಗಳು.

ಮೈಸೂರು ಮೂಲದ ಯುವತಿಯರು ನಿನ್ನೆ(ನವೆಂಬರ್ 16) ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿ ಕೊಠಡಿ ಪಡೆದಿದ್ದು, ಇಂದು (ನವೆಂಬರ್ 17) ಬೆಳಿಗ್ಗೆ 8.30ರ ಸುಮಾರಿಗೆ ಸ್ವಿಮ್ಮಿಂಗ್ ಫೂಲ್​ನಲ್ಲಿ ಆಟವಾಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತದ್ದು, ಈ ವೇಳೆ ಆಯಾತಪ್ಪಿ ಓರ್ವ ಯುವತಿ ಮುಳುಗಿರುವ ಸಾಧ್ಯತೆ ಇದ್ದು, ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಉಳ್ಳಾಲ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಈಜುಕೊಳದಲ್ಲಿ ಮುಳುಗಿ ಪ್ರಾಣಬಿಟ್ಟ ಮೂವರು ಯುವತಿಯರ ಕೊನೆ ಕ್ಷಣ ಹೇಗಿತ್ತು? ವಿಡಿಯೋ ನೋಡಿ 

ಇನ್ನು ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇವತ್ತು ಹತ್ತು ಗಂಟೆಗೆ ಮೂವರು ಈಜುಕೊಳಕ್ಕೆ ಇಳಿದಿದ್ದಾರೆ. ಈಜು ಬಾರದ ಯುವತಿ ಆಳ ಇದ್ದ ಕಡೆ ಹೋಗಿ ಸಿಲುಕಿಕೊಂಡಿದ್ದಳು. ಅವರಳ ರಕ್ಷಣೆಗೆ ಇನ್ನಿಬ್ಬರು ಆಳ ಇರುವ ಕಡೆ ತೆರಳಿದ್ದರು. ಮೂವರಿಗೆ ಈಜು ಬರುತ್ತಿರಲಿಲ್ಲ, ಹೀಗಾಗಿ ಸಾವು ಸಂಭವಿಸಿದೆ. ಮೂವರು ಮೈಸೂರು ಮೂಲದವರು, ಇಂಜಿನಿಯರಿಂಗ್ ಪೈನಲ್ ಇಯರ್ ಸ್ಟೂಡೆಂಟ್. ರೆಸಾರ್ಟ್‌ನಲ್ಲಿ ಲೈಫ್ ಗಾರ್ಡ್ ಯಾರು ಇರಲಿಲ್ಲ. ಆಳದ ಬಗ್ಗೆಯೂ ಮಾಹಿತಿ ಫಲಕ ಅಳವಡಿಸಿಲ್ಲ. ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಮೈಸೂರು ಮೂಲದ ಮೂವರು ಯುವತಿಯರು ನಿನ್ನೆ ಬಂದಿದ್ದಾರೆ. ಇಂದು ಬೆಳಗ್ಗೆ 10ಗಂಟೆಗೆ ಸ್ವೀಮಿಂಗ್‌ನಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಸ್ವೀಮಿಂಗ್‌ ಮಾಡುವಾಗ ಈ ದುರ್ಘಟನೆ ನಡೆದಿದೆ. ರೆಸಾರ್ಟ್‌ನಲ್ಲಿ ಕೆಲ ಸುರಕ್ಷಿತ ನಿಯಮಗಳನ್ನ ಪಾಲನೆ ಮಾಡಬೇಕು. ಕೆಲ ಪ್ರಾಥಮಿಕ ಮಾಹಿತಿ ಪ್ರಕಾರ ನಿಯಮ ಪಾಲನೆಯಾಗಿಲ್ಲ. ಸದ್ಯ ಕುಟುಂಬದವರಿಗೆ ಮಾಹಿತಿ ನೀಡಿದ್ದೇವೆ ಅವರು ಬರುತ್ತಿದ್ದಾರೆ. ರೆಸಾರ್ಟ್‌ನ ನ್ಯೂನತೆಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.

ಇಬ್ಬರು ಪೊಲೀಸ್ ವಶಕ್ಕೆ, ರೆಸಾರ್ಟ್​ ಸೀಲ್ ಡೌನ್

ಇನ್ನು ಈ ದುರಂತಕ್ಕೆ ಸಂಬಂಧಿಸಿದಂತೆ ರೆಸಾರ್ಟ್​ ಮಾಲೀಕ ಮನೋಹರ್​​​​ ಸೇರಿ ಇಬ್ಬರನ್ನು ಉಲ್ಲಾಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಟಿವಿ9 ಗೆ ಎಸಿ ಹರ್ಷವರ್ಧನ್ ಪ್ರತಿಕ್ರಿಯಿಸಿದ್ದು, ಈ ಬೀಚ್ ರೆಸಾರ್ಟ್ ನ ಪರ್ಮಿಶನ್ ನನ್ನು ತಾತ್ಕಾಲಿಕವಾಗಿ ರದ್ದು ಮಾಡುತ್ತಿದ್ದೇವೆ. ತನಿಖೆ ಮುಗಿಯುವವರೆಗೂ ಸೀಲ್ ಡೌನ್ ಮಾಡುತ್ತೇವೆ. ರೆಸಾರ್ಟ್ ನಲ್ಲಿ ನ್ಯೂನ್ಯತೆಗಳು ಇರುವ‌ ಕಾರಣ ಸೀಲ್ ಡೌನ್ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:14 pm, Sun, 17 November 24

Loading...
Unable to load recommendations.
Follow Us