Revenge: ಅಯ್ಯೋ! ಇದೆಂಥಾ ರಿವೇಂಜ್, ಲಂಚ ಕೇಳಿದ್ದಕ್ಕೆ ಲೋಕಾಯುಕ್ತಕ್ಕೆ ಹಿಡಿದುಕೊಟ್ಟಿದ್ದರು, ಅದಕ್ಕೆ ನಿವೃತ್ತಿ ದಿನ ಶಿಕ್ಷಕಿಗೆ ಅವಮಾನಕರ ಸೆಂಡ್​ ಆಫ್​

| Updated By: ಸಾಧು ಶ್ರೀನಾಥ್​

Updated on: Aug 01, 2023 | 11:40 AM

Humiliation: ಇದಕ್ಕೆ ಕಾರಣ ಲಂಚದ ಕಥೆ.‌ ಜು. 8ರಂದು ಇದೇ ಶಾಲೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಇದೇ ಮುಖ್ಯ ಶಿಕ್ಷಕಿ ಶೋಭಾರಾಣಿ ಅವರಿಂದ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಶಾಲಾ ಆಡಳಿತ ಮಂಡಳಿ ಸಂಚಾಲಕಿ ಜ್ಯೋತಿಯನ್ನು ಲೋಕಾಯುಕ್ತ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಮುಂದಿನದು ನಿಮ್ಮ ಊಹೆಗೆ ಬಿಟ್ಟಿದ್ದು

Revenge: ಅಯ್ಯೋ! ಇದೆಂಥಾ ರಿವೇಂಜ್, ಲಂಚ ಕೇಳಿದ್ದಕ್ಕೆ ಲೋಕಾಯುಕ್ತಕ್ಕೆ ಹಿಡಿದುಕೊಟ್ಟಿದ್ದರು, ಅದಕ್ಕೆ ನಿವೃತ್ತಿ ದಿನ ಶಿಕ್ಷಕಿಗೆ ಅವಮಾನಕರ ಸೆಂಡ್​ ಆಫ್​
ಮುಖ್ಯ ಶಿಕ್ಷಕಿ ಶೋಭಾ ರಾಣಿ ಅವರಿಗೆ ಬೀಳ್ಕೊಡುಗೆ
Follow us on

ಬಜ್ಪೆ, ಮಂಗಳೂರು: ಅವರು ಆ ಶಾಲೆಯ ಮುಖ್ಯಶಿಕ್ಷಕಿ. ಅದೊಂದೆ ಶಾಲೆಯಲ್ಲಿ 42 ವರ್ಷ ಸೇವೆ ಸಲ್ಲಿಸಿದ್ದರು. ಇವತ್ತು ಅವರ ವೃತ್ತಿಯ ಕೊನೆ ದಿನ. ಇಂದು ನಿವೃತ್ತಿಯಾಗುವ (Retirement) ಆ ಶಿಕ್ಷಕಿಗೆ ಶಾಲೆಯು ಬೀಳ್ಕೊಡುಗೆ ಮಾಡುವುದನ್ನು ಬಿಟ್ಟು ಅವರ ಕಚೇರಿಗೆ ಬೀಗ ಹಾಕಿ ಗೆಟ್ ಔಟ್ (Humiliation) ಅಂದಿದೆ. ಇದ್ಯಾಕೆ ಹೀಗೆ ಅಂತಾ ನೋಡಿದ್ರೆ ಇದರ ಹಿಂದೆ ಒಂದು ಲಂಚದ ಕತೆಯೇ ಇದೆ‌. ಈಕೆಯ ಹೆಸರು ಶೋಭಾ ರಾಣಿ. ಮಂಗಳೂರು ನಿವಾಸಿ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಬಜ್ಪೆ ಬಳಿಯ ಸುಂಕದಕಟ್ಟೆಯಲ್ಲಿರೋ (Sunkadakatte, Bajpe, Mangalore) ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 42 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ನಿನ್ನೆ ಸೋಮವಾರ ಜುಲೈ 31ಕ್ಕೆ ಇವರ ವೃತ್ತಿಯ ಕೊನೆ ದಿನ. ಅಂದ್ರೆ ಇವರ ನಿವೃತ್ತಿಯ ದಿನ. ಯಾವುದೇ ಶಿಕ್ಷಕಗೆ ನಿವೃತ್ತಿಯ ದಿನ ಅದ್ದೂರಿಯಾಗಿರುತ್ತೆ‌. ಶಾಲೆ ಆಡಳಿತ ಮಂಡಳಿ, ಶಿಕ್ಷಕವೃಂದ, ಹಾಲಿ ಹಾಗೂ ಹಳೇ ವಿದ್ಯಾರ್ಥಿಗಳು ಪ್ರೀತಿಯಿಂದ ಸೆಂಡ್ ಆಫ್ ನೀಡ್ತಾರೆ‌‌. ಆದ್ರೆ ಶೋಭಾರಾಣಿ ವಿಚಾರದಲ್ಲಿ ಇದೆಲ್ಲ ಆಗಿಲ್ಲ. ಸನ್ಮಾನದ ಬದಲಿಗೆ ಅವಮಾನ ಮಾಡುವ, ದ್ವೇಷದ ಹೈ ಡ್ರಾಮವನ್ನು ಶಾಲೆಯ ಆಡಳಿತ ಮಂಡಳಿ ಮಾಡಿದೆ.

ನಿನ್ನೆ ಶೋಭಾ ರಾಣಿ ಅವರು ಶಾಲೆಗೆ ಬರುತ್ತಿದ್ದಂತೆ ಅವರು ಕುಳಿತುಕೊಳ್ಳುತ್ತಿದ್ದ ಕಚೇರಿಯ ಕೊಠಡಿಗೆ ಬೀಗ ಹಾಕಲಾಗಿತ್ತು! ಅವರಿಗೆ ಯಾರೂ ಕೂಡ ಸನ್ಮಾನ ಮಾಡಬಾರದು ಅಂತ ಶಾಲಾ ಆವರಣದಲ್ಲಿ ಸಮಾರಂಭಕ್ಕೆ ಅವಕಾಶವಿಲ್ಲ ಅನ್ನೋ ಬೋರ್ಡನ್ನು ಸಹ ತೂಗು ಹಾಕಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಕಾರಣವಾದ ಈ ಮುಖ್ಯ ಶಿಕ್ಷಕಿ ತಮ್ಮ ಕರ್ತವ್ಯದ ಕೊನೆಯ ದಿನ ಈ ರೀತಿ ನಿಲ್ಲುವ, ಸಲ್ಲದ ಪರಿಸ್ಥಿತಿ ಎದುರಾಗಿತ್ತು.‌

ಇದಕ್ಕೆ ಕಾರಣ ಒಂದು ಲಂಚದ ಕಥೆ.‌ ಹೌದು ಜುಲೈ 8ರಂದು ಇದೇ ಶಾಲೆಗೆ ಲೋಕಾಯುಕ್ತ ಪೊಲೀಸರು (Lokayukta Police) ದಾಳಿ ನಡೆಸಿದ್ದರು. ಇದೇ ಮುಖ್ಯ ಶಿಕ್ಷಕಿ ಶೋಭಾರಾಣಿ ಅವರಿಂದ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದ (Bribe) ಶಾಲಾ ಆಡಳಿತ ಮಂಡಳಿ ಸಂಚಾಲಕಿ ಜ್ಯೋತಿ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಇನ್ನೇನು ಒಂದು ತಿಂಗಳಲ್ಲಿ ಶೋಭಾ ರಾಣಿ ನಿವೃತ್ತಿಯಾಗಲಿದ್ದು ಅವರ ಪಿಂಚಣಿ ದಾಖಲಾತಿಗೆ ಸಹಿ ಹಾಕಲು ಜ್ಯೋತಿ ಲಂಚ ಕೇಳಿದ್ದರು.

ಈ ಬಗ್ಗೆ ಲೋಕಾಯುಕ್ತದ ಮೊರೆ ಹೋಗಿದ್ದ ಮುಖ್ಯ ಶಿಕ್ಷಕಿ ಶೋಭಾರಾಣಿ ಸಂಚಾಲಕಿ ಜ್ಯೋತಿ ಅವರನ್ನು ಲೋಕಾಯುಕ್ತ ಖೆಡ್ಡಾಕ್ಕೆ ಕೆಡವಿದ್ದರು. ಪರಿಣಾಮ ಜ್ಯೋತಿ ಬಂಧವಾಗಿತ್ತು. ಇದರಿಂದ ಮುಖ್ಯ ಶಿಕ್ಷಕಿ ಶೋಭಾರಾಣಿ ವಿರುದ್ಧ ರಿವೆಂಜ್ ತೆಗೆದುಕೊಳ್ಳಲು ಮೂರು ನಾಲ್ಕು ದಿನದ ಹಿಂದೆ ಕರ್ತವ್ಯಲೋಪ ಕಾರಣಕೊಟ್ಟು ಅಮಾನತ್ತು ಮಾಡಲಾಗಿತ್ತು! ನಿನ್ನೆ ಅವರ ಕಚೇರಿಗೆ ಬೀಗ ಹಾಕಿ ಅವರಿಗೆ ಅವಮಾನಿಸಲು ಮುಂದಾಗಿತ್ತು.

ಇನ್ನು ಇವರಿಗೆ ಅವಮಾನಿಸಿದ್ರೆ ನಾವು ಸುಮ್ಮನಿರಲ್ಲ ಅಂತ ಶೋಭಾ ರಾಣಿ ಅವರಿಂದ ವಿದ್ಯೆ ಕಲಿತ ಹಳೆ ವಿದ್ಯಾರ್ಥಿಗಳು ಶಾಲೆಯ ಬಳಿ ಜಮಾಯಿಸಿದ್ದರು.‌ ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು ಅಂತ ಬಿಇಓ ಈಶ್ವರ್ ಶಾಲೆಗೆ ಆಗಮಿಸಿ ಶಾಲಾ ಆಡಳಿತ ಮಂಡಳಿಗೆ ತಿಳಿಯಹೇಳಿದರು. ಇದಾದ ಬಳಿಕ ಶಾಲೆಯ ಪ್ರಾಂಗಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿಗಳು ನಡೆಸಿದರು. ಅದಕ್ಕೆ ಆಡಳಿತ ಮಂಡಳಿ ಆಗಲಿ ಶಿಕ್ಷಕರು ಮತ್ತು ಹಾಲಿ ವಿದ್ಯಾರ್ಥಿಗಳಾಗಲಿ ಯಾರೂ ಭಾಗವಹಿಸಿರಲಿಲ್ಲ.

ಸದ್ಯ ಲೋಕಾಯುಕ್ತ ಕೋರ್ಟ್​​ನಲ್ಲಿ ಲಂಚಾವತಾರದ ಪ್ರಕರಣ ಇದೆ. ಇಷ್ಟಾದರೂ ಪಿಂಚಣಿಗೆ ತೊಂದರೆ ಕೊಡಬೇಕು ಅಂತ ಶಾಲಾ ಮುಖ್ಯ ಶಿಕ್ಷಕರ ಕಚೇರಿಗೆ ಬೀಗ ಹಾಕಿ ಹೈಡ್ರಾಮವನ್ನು ಶಾಲೆಯವರು ಮಾಡಿದ್ದರು. ಅದೇನೇ ಇದ್ರೂ ಲಂಚ ಕೇಳಿದ್ದಲ್ಲದೆ, ಅದಕ್ಕೆ ರಿವೆಂಜ್ ತೆಗೆದುಕೊಳ್ಳಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿಯೇ ಸರಿ.

ಮಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ