ಉಪ್ಪಿನಂಗಡಿ: ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಎಸ್​ಪಿ ಕಚೇರಿ ಚಲೋ; ಪುತ್ತೂರು ಉಪವಿಭಾಗದಲ್ಲಿ ಸೆಕ್ಷನ್ 144 ಜಾರಿ

ಡಿಸೆಂಬರ್ 17 ರ ಮಧ್ಯರಾತ್ರಿವರೆಗೆ ನಿಷೇಧಾಜ್ಷೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಪುತ್ತೂರು ಉಪವಿಭಾಗದಲ್ಲಿ ಕೋಮುಗಲಭೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಆಗಿದ್ದು ಯಾವುದೇ ಪ್ರತಿಭಟನೆ ನಡೆಸದಂತೆ ಸೆಕ್ಷನ್ 144 ಜಾರಿ ಮಾಡಿ ಆದೇಶಿಸಲಾಗಿದೆ.

ಉಪ್ಪಿನಂಗಡಿ: ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಎಸ್​ಪಿ ಕಚೇರಿ ಚಲೋ; ಪುತ್ತೂರು ಉಪವಿಭಾಗದಲ್ಲಿ ಸೆಕ್ಷನ್ 144 ಜಾರಿ
ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ
Edited By:

Updated on: Dec 15, 2021 | 2:52 PM

ಮಂಗಳೂರು: ಪಿಎಫ್​ಐ ಪ್ರಮುಖರ ಅಕ್ರಮ ಬಂಧನ ಖಂಡಿಸಿ ಕಾರ್ಯಕರ್ತರು ಠಾಣೆಯ ಎದುರು ಪ್ರತಿಭಟಿಸಿದ್ದರು. ರಾತ್ರಿಯೂ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ್ದಾರೆ. ಕಾಲಿಗೆ ಹೊಡೆಯುವ ಬದಲು ಬೇಕಾಬಿಟ್ಟಿಯಾಗಿ ತಲೆಯ ಮೇಲೆ ಲಾಠಿಯಲ್ಲಿ ಹೊಡೆದಿದ್ದಾರೆ. ಮುಸ್ಲಿಂ ಧರ್ಮಗುರು ಸೈಯ್ಯದ್ ಅತೂರ್ ತಂಗಲ್ ತಲೆಗೂ ಹೊಡೆದಿದ್ದಾರೆ. ಇದರಿಂದ ಹಲವಾರು ಜನರಿಗೆ ಗಾಯವಾಗಿದ್ದು, ಕೆಲವರು ಐಸಿಯುನಲ್ಲಿದ್ದಾರೆ. ಅಂಬ್ಯುಲೆನ್ಸ್​ಗೂ ತಡೆ ಹಾಕಿ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಇದೀಗ ಅವರ ದುಷ್ಕೃತ್ಯ ಮರೆಮಾಚಲು ಪೊಲೀಸರ ಮೇಲೆ ಹಲ್ಲೆ ಎಂಬ ಕಥೆ ಕಟ್ಟಿದ್ದಾರೆ ಎಂದು ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ನಡೆದ ಪಿಎಫ್​ಐ ಕಾರ್ಯಕರ್ತರ ಮೇಲಿನ ಲಾಠಿಚಾರ್ಜ್ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಉಪ್ಪಿನಂಗಡಿ ತಲವಾರು ಕೇಸ್ ನಲ್ಲಿ ಅಮಾಯಕರನ್ನು ಹಿಡಿದು ಸಿಲುಕಿಸಿದ್ದಾರೆ. ಇದನ್ನು ಪ್ರತಿಭಟಿಸಿದವರ ಮೇಲೆ ಅಮಾನವೀಯ ಲಾಠಿಚಾರ್ಜ್ ನಡೆಸಲಾಗಿದೆ. ತಕ್ಷಣ ಈ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನ ಅಮಾನತು ಮಾಡಬೇಕು. ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಬೇಕು. ಲಾಠಿಚಾರ್ಜ್ ಘಟನೆ ಖಂಡಿಸಿ ಡಿಸೆಂಬರ್ 17ರ ಶುಕ್ರವಾರ ಎಸ್​ಪಿ ಕಚೇರಿ ಚಲೋ ನಡೆಸುತ್ತೇವೆ ಎಂದು ಮಂಗಖೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಪಿಎಫ್​ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ವಿಚಾರಕ್ಕೆ ಸಂಬಂಧಿಸಿ ಇದೀಗ ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಡಿ‌‌ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಆದೇಶ ನೀಡಿದ್ದಾರೆ. ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಾದ್ಯಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತಕ್ಷಣದಿಂದ ಡಿಸೆಂಬರ್ 17 ರ ಮಧ್ಯರಾತ್ರಿವರೆಗೆ ನಿಷೇಧಾಜ್ಷೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಪುತ್ತೂರು ಉಪವಿಭಾಗದಲ್ಲಿ ಕೋಮುಗಲಭೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಆಗಿದ್ದು ಯಾವುದೇ ಪ್ರತಿಭಟನೆ ನಡೆಸದಂತೆ ಸೆಕ್ಷನ್ 144 ಜಾರಿ ಮಾಡಿ ಆದೇಶಿಸಲಾಗಿದೆ.

ವಿಧಾನಸಭೆ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ವಿಷಯ ಪ್ರಸ್ತಾಪ ಮಾಡಲಾಗಿದೆ. ಮಂಗಳೂರು ನಗರ ಶಾಸಕ ಯು.ಟಿ. ಖಾದರ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕು, ತ್ರಿಶೂಲ ದೀಕ್ಷೆಯ ಬಗ್ಗೆ ಸರ್ಕಾರ ವರದಿ ತರಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಖಾದರ್ ಒತ್ತಾಯ ಮಾಡಿದ್ದಾರೆ. ಈ ವಿಚಾರವಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಭಂಗ ಬಂದರೆ ಪೊಲೀಸರು ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತಾರೆ. ಇತ್ತೀಚೆಗೆ ಬಿಪಿನ್ ರಾವತ್ ಮೃತಪಟ್ಟಾಗ ಸೋಷಿಯಲ್ ‌ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ. ಈ ರೀತಿಯ ಮಾನಸಿಕತೆಯವರ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೇವೆ. ಮಂಗಳೂರಿನಲ್ಲಿ ಬಸ್ ನಲ್ಲಿ ಹುಡುಗ-ಹುಡುಗಿ ಇದ್ದ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ ಎಂದು ಸದನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದಾರೆ.

ಗೃಹಸಚಿವರ ಉತ್ತರದ ವೇಳೆ ವಿಪಕ್ಷ ಕಾಂಗ್ರೆಸ್ ನಿಂದ ಗದ್ದಲ ಉಂಟಾಗಿದೆ. ಪೊಲೀಸರನ್ನು ಫ್ರೀ ಬಿಟ್ಟಿದ್ದು ಯಾವುದೇ ಕ್ರಮ ತೆಗೆದುಕೊಳ್ಳಲು ಅನುಮತಿ ಕೊಟ್ಟಿದ್ದೇವೆ ಎಂದು ಗೃಹಸಚಿವ ಜ್ಞಾನೇಂದ್ರ ಉತ್ತರ ನೀಡಿದ್ದಾರೆ. ಈ ಬಳಿಕ, ಆಡಳಿತ ಮತ್ತು ವಿಪಕ್ಷದ ನಡುವೆ ತೀವ್ರ ವಾಕ್ಸಮರ ಉಂಟಾಗಿದೆ. ಭೋಜನ ವಿರಾಮ ನೀಡಿ ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.

ಇದನ್ನೂ ಓದಿ: ಉಪ್ಪಿನಂಗಡಿ: ಇಬ್ಬರು ಯುವಕರ ಮೇಲೆ ತಲವಾರಿನಿಂದ ಹಲ್ಲೆ ಪ್ರಕರಣ, ಹಲ್ಲೆಕೋರರ ಬಂಧನ ಖಂಡಿಸಿ ಠಾಣೆಗೆ ಮುತ್ತಿಗೆ

ಇದನ್ನೂ ಓದಿ: ಮಂಗಳೂರು: ನಗರದ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್​ಗಿರಿ; ನಾಲ್ವರು ಆರೋಪಿಗಳ ಬಂಧನ 

Published On - 2:51 pm, Wed, 15 December 21

Web contact

TV9 Kannada

Read More
Follow Us