ದಲಿತ ಸಮುದಾಯದಿಂದಲೇ ದಲಿತರ ಬಹಿಷ್ಕಾರ; ಕಾನೂನು ಸಮರಕ್ಕೆ ಮುಂದಾದ 7 ಕುಟುಂಬಗಳು
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಕುಲದ ವಿರುದ್ಧ ಮಾತನಾಡಿದ ಕಾರಣ ದಲಿತ ಸಮುದಾಯದ ಮುಖಂಡರು 7 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಆದೇಶಿಸಲಾಗಿದ್ದು, ನ್ಯಾಯಕ್ಕಾಗಿ ಬಹಿಷ್ಕೃತರು ಕಾನೂನಿನ ಮೊರೆ ಹೋಗಿದ್ದಾರೆ.

ಮಂಡ್ಯ, ಅಕ್ಟೋಬರ್ 18: ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯವೇ ದಲಿತರನ್ನು ಬಹಿಷ್ಕರಿಸಿರುವ ಆರೋಪ ಕೇಳಿ ಬರುತ್ತಿದೆ. ಕಾಲೋನಿಯ 7 ಕುಟುಂಬಗಳು ಬಹಿಷ್ಕಾರಕ್ಕೆ ಒಳಗಾಗಿದ್ದು, ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಕುಲದ ಮುಖಂಡರು ಆದೇಶ ಮಾಡಿದ್ದಾರೆ. ಇದೀಗ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.
ಸಮುದಾಯದ ವಿರುದ್ಧ ಮಾತನಾಡಿದ್ದಕ್ಕೆ 7 ಕುಟುಂಬಗಳಿಗೆ ಬಹಿಷ್ಕಾರ
ಕಾಲೋನಿಯ ದಲಿತ ಸಮುದಾಯದವರು ಹಬ್ಬವನ್ನು ಆಚರಿಸಲು ಕಾಲೋನಿಯಲ್ಲಿ ಹಣ ಕೇಳಲಾಗುತ್ತಿತ್ತು. ಈ ಸಂದರ್ಭದಲ್ಲಿ 7 ಕುಟುಂಬದ ಸದಸ್ಯರು ಕುಲದ ವಿರುದ್ಧ ಮಾತನಾಡಿದ್ದರು. ಅಷ್ಟೇ ಅಲ್ಲದೇ ಹಬ್ಬಕ್ಕೆ ಹಣ ನೀಡುವುದಿಲ್ಲವೆಂದೂ ಹೇಳಿದ್ದರು. ಇದೇ ಕಾರಣಕ್ಕೆ ದಲಿತ ಸಮುದಾಯ ಪಂಚಾಯಿತಿಯ ಯಜಮಾನರು ಈ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರವೊಡ್ಡಿದ್ದಾರೆ.
ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಆದೇಶ ಮಾಡಲಾಗಿದೆ. ಅವರನ್ನು ಕುಲದ ಯಾವುದೇ ಕಾರ್ಯಕ್ರಮಗಳಿಗೂ ಕರೆಯಬಾರದೆಂದೂ, ಕರೆದರೂ ಆ ಕುಟುಂಬಗಳು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದೂ ಕಟ್ಟಾಜ್ಞೆ ಮಾಡಿದ್ದಾರೆ. ಬಹಿಷ್ಕೃತ ಕುಟುಂಬಗಳೊಂದಿಗೆ ಯಾವುದೇ ವ್ಯಾಪಾರ, ವ್ಯವಹಾರ ನಡೆಸದಂತೆ ಸೂಚಿಸಲಾಗಿದೆ.
ಕಾನೂನಾತ್ಮಕ ಹೋರಾಟಕ್ಕಿಳಿದಿರುವ ಬಹಿಷ್ಕೃತ ಕುಟುಂಬಗಳು
ತಮ್ಮದೇ ಸಮುದಾಯದವರಿಂದ ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿರುವ ಕುಟುಂಬಗಳೀಗ ಸಿಡಿದೆದ್ದಿವೆ. ಬಹಿಷ್ಕಾರ ಹಾಕಿದ ಕುಲದ ಮುಖಂಡರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲು ಆ 7 ಕುಟುಂಬಗಳು ಮುಂದಾಗಿವೆ.ಈ ಹಿನ್ನೆಲೆ ತಮಗಾದ ಅನ್ಯಾಯವನ್ನು ಅರಿತು, ತಮ್ಮ ನೆರವಿಗೆ ಬರುವಂತೆ ಸರ್ಕಾರ ಸೇರಿದಂತೆ ಡಿಸಿ, ಎಸ್ಪಿ ಹಾಗೂ ತಾಲೂಕು ಆಡಳಿತಕ್ಕೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಮನವಿ ಮಾಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



