ಬೆಸ್ಕಾಂಗೆ 3.85 ಕೋಟಿ ರೂ ನಷ್ಟ: ಹರಿಹರ ಉಪ ವಿಭಾಗಾಧಿಕಾರಿಗಳ ಕಳ್ಳಾಟ ಬಟಾಬಯಲು

ದಾವಣಗೆರೆ ಜಿಲ್ಲೆಯ ಹರಿಹರ ಬೆಸ್ಕಾಂ ವಿಭಾಗದಲ್ಲಿ 3.85 ಕೋಟಿ ರೂ. ಮೌಲ್ಯದ ಭಾರೀ ಗೋಲ್​ಮಾಲ್ ಬಟಾಬಯಲಾಗಿದೆ. 42 ವಿವಿಧ ಸಾಮಗ್ರಿಗಳ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸದ್ಯ ಹರಿಹರ ಠಾಣೆ ಪೊಲೀಸರು ಎಫ್​​ಐಆರ್​​ ದಾಖಲಿಸಿದ್ದಾರೆ. ಅಧಿಕಾರಿಗಳ ಕಳ್ಳಾಟದಿಂದ ಬೆಸ್ಕಾಂಗೆ 3.85 ಕೋಟಿ ರೂ. ನಷ್ಟ ಉಂಟಾಗಿದೆ.

ಬೆಸ್ಕಾಂಗೆ 3.85 ಕೋಟಿ ರೂ ನಷ್ಟ: ಹರಿಹರ ಉಪ ವಿಭಾಗಾಧಿಕಾರಿಗಳ ಕಳ್ಳಾಟ ಬಟಾಬಯಲು
ಹರಿಹರದ ಬೆಸ್ಕಾಂ ಉಪ ವಿಭಾಗ
Updated By: ಗಂಗಾಧರ​ ಬ. ಸಾಬೋಜಿ

Updated on: Oct 05, 2025 | 7:35 PM

ದಾವಣಗೆರೆ, ಅಕ್ಟೋಬರ್​ 05: ಜಿಲ್ಲೆಯ ಹರಿಹರದ (harihara) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಉಪ ವಿಭಾಗದಲ್ಲಿ (Bescom) ಭಾರೀ ಗೋಲ್​ಮಾಲ್ ಒಂದು ಬೆಳಕಿಗೆ ಬಂದಿದೆ. ಅಧಿಕಾರಿಗಳ ಕಳ್ಳಾಟದಿಂದ ಬೆಸ್ಕಾಂಗೆ ಬರೋಬ್ಬರಿ 3.85 ಕೋಟಿ ರೂ. ನಷ್ಟವಾಗಿದೆ. ಒಟ್ಟು 3.85 ಕೋಟಿ ರೂ ಮೌಲ್ಯದ 42 ವಿವಿಧ ಸಾಮಗ್ರಿಗಳನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ಆಂತರಿಕ ಲೆಕ್ಕ ಪರಿಶೋಧನೆ ವೇಳೆ ಬಯಲಾಗಿದೆ.

ಬೆಸ್ಕಾಂ ಉಪ ವಿಭಾಗದ ಇಇ ರವಿಕಿರಣ್ ದೂರಿನ ಅನ್ವಯ ಹರಿಹರದ ಬೆಸ್ಕಾಂ ಸಹಾಯಕ ಉಗ್ರಾಣ ಪಾಲಕನ ವಿರುದ್ಧ ಕ್ರಿಮಿನಲ್ ಕೇಸ್ ಮತ್ತು ಬೆಸ್ಕಾಂ ಅಸಿಸ್ಟೆಂಟ್ ಸ್ಟೋರ್ ಕೀಪರ್ ಅರುಣ್ ಕುಮಾರ್​​ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರುದಾರ ಇಇ ರವಿಕುಮಾರ್​​ನಿಂದ ಮಾಹಿತಿ ಪಡೆದ ಪೊಲೀಸರು, ಎಫ್ಐಆರ್ ದಾಖಲಿಸಿಕೊಂಡು ಬೆಸ್ಕಾಂ ಹರಿಹರ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಟ್ರೇಡಿಂಗ್​ನಲ್ಲಿ ಬರೋಬ್ಬರಿ 2.28 ಕೋಟಿ ರೂ. ಕಳೆದುಕೊಂಡ ಖಾಸಗಿ ಕಂಪನಿ ಉದ್ಯೋಗಿ!

ಉಗ್ರಾಣದಿಂದ 72.58 ಲಕ್ಷ ರೂ. ಮೌಲ್ಯದ 102 ಟಿಸಿಗಳು ಮಾಯವಾಗಿವೆ. ಅಧಿಕಾರಿಗಳಿಂದ ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬ, ವೈರ್, ಲೈನ್ ಸಾಮಗ್ರಿ, ಪಿವಿಸಿ ಅಲ್ಯುಮಿನಿಯಮ್ ರೀಡ್ ವೈರ್ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜೊತೆಗೆ 89,270 ಲೀಟರ್ ಟಿಸಿ ಆಯಿಲ್ ಲೆಕ್ಕವನ್ನೂ ಅಧಿಕಾರಿಗಳು ನೀಡಿಲ್ಲ.

ಕಳುವಾಗಿದ್ದ 1 ಕೋಟಿ 50 ಸಾವಿರ ರೂ ಮೌಲ್ಯದ ಮೊಬೈಲ್ ವಾರಸುದಾರರಿಗೆ ಹಸ್ತಾಂತರ

ಮತ್ತೊಂದು ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳುವಾಗಿದ್ದ 1 ಕೋಟಿ 50 ಸಾವಿರ ರೂ. ಮೌಲ್ಯದ 861 ಮೊಬೈಲ್​ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಪೊಲೀಸರು ಒಪ್ಪಿಸಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ಹೆಸರಿನಲ್ಲಿ ಬಂದು ಮಹಿಳೆ ಮೇಲೆ ಹಲ್ಲೆ: ದರೋಡೆಗೆ ಯತ್ನ?

ಮೊಬೈಲ್ ಕಳುವಾದ ಬಗ್ಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 2370 ದೂರುಗಳು ದಾಖಲಾಗಿದ್ದವು. ಮೊಬೈಲ್ ಕಳುವಾದ ಬಗ್ಗೆ ಕೆಎಸ್​​ಪಿ ಆ್ಯಪ್​ನಲ್ಲಿ ವಾರಸುದಾರರು ದೂರು ದಾಖಲಿಸಿದ್ದರು. ಮೊಬೈಲ್ ಕಳೆದ ತಕ್ಷಣ ಬ್ಲ್ಯಾಕ್​ ಮಾಡಿಸಬೇಕು. ಪೊಲೀಸ್ ಇಲಾಖೆ ಪೋರ್ಟಲ್​​ನಲ್ಲಿ ನಿಯಮಾನುಸಾರ ದೂರು ದಾಖಲಿಸಿಬೇಕೆಂದು ಸಾರ್ವಜನಿಕರಿಗೆ ದಾವಣಗೆರೆ ಎಸ್​​ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.