ದಾವಣಗೆರೆ: ಡೊಣ್ಣೆಯಿಂದ ತಲೆಗೆ ಹೊಡೆದು ಸ್ವಂತ ಅಕ್ಕನನ್ನೇ ಕೊಂದ ತಮ್ಮ, ಮೂವರು ಅರೆಸ್ಟ್

ಪ್ರಭಾಕರ ತನ್ನ ಮಕ್ಕಳ ಜೊತೆ ಸೇರಿಕೊಂಡು ತನ್ನ 64 ವರ್ಷದ ಅಕ್ಕಮ್ಮ ಎಂಬ ಅಕ್ಕನನ್ನ ಡೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ದಾವಣಗೆರೆ: ಡೊಣ್ಣೆಯಿಂದ ತಲೆಗೆ ಹೊಡೆದು ಸ್ವಂತ ಅಕ್ಕನನ್ನೇ ಕೊಂದ ತಮ್ಮ, ಮೂವರು ಅರೆಸ್ಟ್
ಕೊಲೆಯಾದ ಮಹಿಳೆ ಮತ್ತು ಕೊಲೆ ಮಾಡಲು ಬಳಸಲಾದ ಡೊಣ್ಣೆ

Updated on: May 22, 2023 | 8:24 AM

ದಾವಣಗೆರೆ: ಜಗತ್ತಿನಲ್ಲಿ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮಾನವೀಯತೆ ಎಂಬುವುದೇ ಮರೆಯಾಗಿದೆ. ರಕ್ತ ಸಂಬಂಧಿಗಳು, ಒಡ ಹುಟ್ಟಿದವರೇ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ. ಹಣ, ಆಸ್ತಿ, ಒಡವೆ, ಪ್ರೀತಿ, ಸ್ನೇಹ, ದ್ವೇಷ, ಸಣ್ಣ ಪುಟ್ಟ ಕಿರಿಕ್​ಗಳಿಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಲಾಗುತ್ತಿದೆ(Murder). ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮಗ ತಂದೆಯನ್ನೇ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಈಗ ಆಸ್ತಿಗಾಗಿ ಅಕ್ಕನನ್ನೇ ತಮ್ಮ ಕೊಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ(Property Dispute).

ಮೂವರನ್ನು ಬಂಧಿಸಿದ ಪೊಲೀಸ್

ದಾವಣಗೆರೆ ಜಿಲ್ಲೆಯ ‌ಚನ್ನಗಿರಿ ತಾಲೂಕಿನ ಗುಳ್ಳೇಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಜಗಳ ನಡೆದಿದೆ. ಈ ವೇಳೆ ಪ್ರಭಾಕರ ತನ್ನ ಮಕ್ಕಳ ಜೊತೆ ಸೇರಿಕೊಂಡು ತನ್ನ 64 ವರ್ಷದ ಅಕ್ಕಮ್ಮ ಎಂಬ ಅಕ್ಕನನ್ನ ಡೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಪ್ರಭಾಕರ, ಆತನ ಪುತ್ರ ದಿಲೀಪ ಹಾಗೂ ಪುತ್ರಿ ತ್ರಿವೇಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಮಗನಿಂದಲೇ ತಂದೆ ಹತ್ಯೆಗೆ ಸುಫಾರಿ ಪ್ರಕರಣ; ಚಾರ್ಜ್ ಶೀಟ್​ನಲ್ಲಿ ಬಯಲಾಯ್ತು ಕಾರಣ 

ಅಕ್ಕನ ಮೇಲೆಯೇ ತಮ್ಮನಿಂದ ಹಲ್ಲೆ

ಎರಡು ಕುಟುಂಬಗಳ ನಡುವೆ ಕಳೆದ 15 ವರ್ಷಗಳಿಂದ ಜಮೀನಿನ ವಿಚಾರಕ್ಕಾಗಿ ಗಲಾಟೆ ಇತ್ತು. ಅಕ್ಕಮ್ಮ ಹಾಗೂ ಸಹೋದರ ಪ್ರಭಾಕರ ಅವರ ಜಮೀನು ವಿವಾದ ಸದ್ಯ ಈಗ ಕೋರ್ಟ್​ನಲ್ಲಿದೆ. ಅಕ್ಕಮ್ಮ ಕೋರ್ಟ್​ನ ಅನುಮತಿ ಪಡೆದು ಜಮೀನು ಅಳತೆ ಮಾಡಲು ಸರ್ವೇಯರ್ ‌ಜೊತೆ ಜಮೀನಿಗೆ ಬಂದಿದ್ದರು. ಸರ್ವೇಯರ್ ಜಮೀನು ಅಳತೆ ಮಾಡಲು ಬಂದಾಗ ನಮ್ಮ ಜಮೀನು ಅಳತೆ ಮಾಡಲು ನೀವು ಯಾರು ಅಂತಾ ದಿಲೀಪ್ ಅಕ್ಕಮ್ಮನ ಮೇಲೆ ಕೊಡಗೋಲಿನಿಂದ ದಾಳಿಗೆ ಯತ್ನಿಸಿದ್ದಾನೆ. ಸ್ಥಳದಲ್ಲಿಯೇ ಇದ್ದ ಪ್ರಭಾಕರ ಡೊಣ್ಣೆಯಿಂದ ಅಕ್ಕಮ್ಮನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಕುಸಿದುಬಿದ್ದ ಅಕ್ಕಮ್ಮ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಘಟನೆ ಬಳಿಕ ಆರೋಪಿ ಪ್ರಭಾಕರ್​, ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ