ಪೊಲೀಸರಿಂದಲೇ ರೇಣುಕಾಚಾರ್ಯ ತಮ್ಮನ ಮಗನ ಸಾವಿನ ತನಿಖೆ: ಹೊನ್ನಾಳಿಯಲ್ಲಿ ಸ್ಪಷ್ಟಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 09, 2022 | 1:31 PM

ತಲೆ‌ಕೂದಲು ಪತ್ತೆಯಾಗಿರುವುದು ಹಾಗೂ ಹಿಂಬದಿ ಸೀಟಿನಲ್ಲಿ ಶವ ಇದ್ದಿದ್ದು ಅನುಮಾನ ಮೂಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪೊಲೀಸರಿಂದಲೇ ರೇಣುಕಾಚಾರ್ಯ ತಮ್ಮನ ಮಗನ ಸಾವಿನ ತನಿಖೆ: ಹೊನ್ನಾಳಿಯಲ್ಲಿ ಸ್ಪಷ್ಟಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (Renukacharya) ತಮ್ಮನ ಮಗ ಚಂದ್ರಶೇಖರ್ (Chandrashekhar) ಸಾವಿನ ತನಿಖೆಯನ್ನು ಪೊಲೀಸರೇ ಮುಂದುವರಿಸುತ್ತಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಹೊನ್ನಾಳಿಯ ಶಾಸಕರ ನಿವಾಸಕ್ಕೆ ಬುಧವಾರ (ನ 9) ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮೆಲ್ಲರ ಚಂದ್ರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ವಿಶೇಷವಾಗಿ ಅವರ‌ ತಂದೆ-ತಾಯಿಗೆ ನೋವು ಭರಿಸುವ ಶಕ್ತಿ ಸಿಗಲಿ’ ಎಂದು ಪ್ರಾರ್ಥಿಸಿದರು.

ಚಂದ್ರು ಅವರನ್ನು ಅವರ ಕುಟುಂಬ ಬಹುವಾಗಿ ನೆಚ್ಚಿಕೊಂಡಿತ್ತು. ಸಿವಿಲ್ ಎಂಜಿನಿಯರಿಂಗ್ ಓದಿದ್ದರೂ ದೊಡ್ಡಪ್ಪನಿಗೆ ಸಹಾಯ ಮಾಡಬೇಕೆಂದು ಅವರು ಹೊನ್ನಾಳಿಯಲ್ಲಿಯೇ ಉಳಿದುಕೊಂಡಿದ್ದರು. ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದರು. ಈ ಸಾವು ರೇಣುಕಾಚಾರ್ಯ ಅವರಿಗೆ ಆಘಾತ ತಂದೊಡ್ಡಿದೆ. ನಾನು ಫೋನ್ ಮೂಲಕ ಅವರಿಗೆ ಸಮಾಧಾನ ಮಾಡಲು ಯತ್ನಿಸಿದೆ. ಆದರೆ ಮನಸ್ಸು ತಡೀಯಲಿಲ್ಲ. ಹೀಗಾಗಿ ಬಂದಿದ್ದೇನೆ ಎಂದು ನುಡಿದರು.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ನಿರ್ಣಯಕ್ಕೆ ಬರಲು ಆಗುವುದಿಲ್ಲ. ಘಟನಾ ಸ್ಥಳದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಯೂ ಇದೆ. ತಲೆ‌ಕೂದಲು ಪತ್ತೆಯಾಗಿರುವುದು ಹಾಗೂ ಹಿಂಬದಿ ಸೀಟಿನಲ್ಲಿ ಶವ ಇದ್ದಿದ್ದು ಅನುಮಾನ ಮೂಡಿಸಿದೆ ಎಂದರು.

ಕಾರಿನ ಗಾಜು ಒಡೆದಿರುವ ರೀತಿಯೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖಾಧಿಕಾರಿಗಳು ತನಿಖೆ ಮುಂದುವರಿಸಿದೆ. ಪೋಸ್ಟ್​ಮಾರ್ಟಂ ಹಾಗೂ ವಿಧಿವಿಜ್ಞಾನ (ಎಫ್​ಎಸ್​ಎಲ್) ತಜ್ಞರ ವರದಿಯ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು. ಚಂದ್ರು ಅವರು ಗೌರಿಗದ್ದೆಗೆ ಹೊರಟ ನಂತರ ಕಾರು ಪತ್ತೆಯಾಗುವವರೆಗೆ ಏನೆಲ್ಲಾ ನಡೆದಿದೆ ಎನ್ನುವ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆದಿದೆ. ಅನಿವಾರ್ಯವಾದರೆ ಸಿಐಡಿ ತನಿಖೆಯ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಅವರು ತಿಳಿಸಿದರು.

ಸಚಿವ ಭೈರತಿ ಬಸವರಾಜ ಆಡಿಯೊ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದಾವಣಗೆರೆ ಪಾಲಿಕೆಯ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅವರೇ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅನಂತರವಷ್ಟೇ ಯಾರು ತಪ್ಪು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಲಿದೆ ಎಂದಿದ್ದರು.

ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಶಾಸಕ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೋ ಪುಸ್ತಕ ನೋಡಿಕೊಂಡು ಹೇಳಿಕೆ ಕೊಡುವುದಲ್ಲ. ವಿಕಿಪಿಡಿಯಾದ ವಿಶ್ವಾಸಾರ್ಹತೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ವಿಕಿಪಿಡಿಯಾ ಮೇಲೆ ಸಾಕಷ್ಟು ಪ್ರಕರಣಗಳು ಮತ್ತು ಆರೋಪಗಳಿವೆ. ವಿಕಿಪಿಡಿಯಾ ಮುಖ್ಯಸ್ಥ ಈಗಾಗಲೇ ಜೈಲಿನಲ್ಲಿದ್ದು ಬಂದವನು. ಅಂಥವರ ವಿಚಾರ ನಂಬಿ ಪ್ರತಿಪಾದಿಸುತ್ತಾರೆ ಅಂದರೆ ಏನು ಅರ್ಥ? ಈ ಬಗ್ಗೆ ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕು. ಜಾರಕಿಹೊಳಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಏಕೆ ಮಾತನಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಆಗ್ರಹಿಸಿದರು.

 

Published On - 1:31 pm, Wed, 9 November 22