ಗೊಂಬೆಯಂತಿದ್ದ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜತೆಗೆ ಸಂಬಂಧ: ಪೆನ್ ಡ್ರೈವ್​​ನಲ್ಲಿತ್ತು ಗಂಡನ ರಾಸಲೀಲೆ, ಕಿರುಕುಳದ ಸಾಕ್ಷಿ!

ದಾವಣಗೆರೆಯಲ್ಲಿ ಮದುವೆಯಾಗಿ ಎರಡು ವರ್ಷಕ್ಕೆ ಪತ್ನಿ ಕಾವ್ಯಾ ಕೊಲೆ ನಡೆದಿದೆ. ಸರ್ಕಾರಿ ನೌಕರ ಪತಿ ಮನು ವಿರುದ್ಧ ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳ ಮತ್ತು ಕೊಲೆಯ ಆರೋಪ ಕೇಳಿಬಂದಿದೆ. ಕಾವ್ಯಾ ತನ್ನ ಪತಿ ನೀಡುತ್ತಿದ್ದ ಕಿರುಕುಳ ಮತ್ತು ಅಕ್ರಮ ಸಂಬಂಧದ ಬಗ್ಗೆ ಪೆನ್‌ಡ್ರೈವ್‌ನಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಳು ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕಾವ್ಯಾ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದೆ.

ಗೊಂಬೆಯಂತಿದ್ದ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜತೆಗೆ ಸಂಬಂಧ: ಪೆನ್ ಡ್ರೈವ್​​ನಲ್ಲಿತ್ತು ಗಂಡನ ರಾಸಲೀಲೆ, ಕಿರುಕುಳದ ಸಾಕ್ಷಿ!
ದಾವಣಗೆರೆ ಪತ್ನಿ ಕೊಲೆ,
Image Credit source: tv9 kannada
Edited By:

Updated on: Apr 18, 2026 | 6:39 PM

ದಾವಣಗೆರೆ, ಏ.18: ಮದುವೆಯ ಹೊತ್ತಿನಲ್ಲಿ ಆ ದಂಪತಿಗಳು ಸ್ವರ್ಗದಿಂದ ಇಳಿದು ಬಂದ ಜೋಡಿಯಂತೆ ಕಂಡಿದ್ದರು. ಎಲ್ಲರೂ, ವಾವ್ಹ್ ಏನ್ ಚೆನ್ನಾಗಿದೆ ಜೋಡಿ, ಅದರಲ್ಲೂ ಹುಡುಗಿಯನ್ನು ಸುಂದರ ಹುಡುಗಿ ಎಂದು ಹೇಳಿದ್ದರು. ಅವರು ಅದ್ಧೂರಿ ಪ್ರೀ ವೆಡ್ಡಿಂಗ್ ಶೂಟಿಂಗ್, ಮದುವೆ ಮಾಡಿಕೊಂಡಿದ್ದರು. ಎಲ್ಲವೂ ಸುಖಾಂತ್ಯ ಕಾಣಬೇಕಿತ್ತು. ಆದರೆ, ಎರಡೇ ವರ್ಷಕ್ಕೆ ಆ ಸುಂದರ ಸಂಸಾರ ಚಿತೆಯೇರಿದೆ. ಪರಸ್ತ್ರೀ ಸಂಘಕ್ಕೆ ಬಿದ್ದ ಪತಿ, ತನ್ನನ್ನೇ ನಂಬಿ ಬಂದ ಪತ್ನಿಯನ್ನು ಚಿತ್ರಹಿಂಸೆ ನೀಡಿ ಕೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದ ಕನ್ಯೆ ಕಾವ್ಯಾ ಹಾಗೂ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನು ಎಂಬುವವರಿಗೆ ಎರಡು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮನು ಅಂಚೆ ಇಲಾಖೆಯಲ್ಲಿ ಸರ್ಕಾರಿ ನೌಕರನಾಗಿದ್ದ ಎಂಬ ಕಾರಣಕ್ಕೆ, ಕಾವ್ಯಾ ಪೋಷಕರು ಸಾಲಸೋಲ ಮಾಡಿ 2.50 ಲಕ್ಷ ರೂಪಾಯಿ ನಗದು ಮತ್ತು 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿದ್ದರು. ಈ ದಂಪತಿ ದಾವಣಗೆರೆ ನಗರದ ಅರಸು ಬಡಾವಣೆಯ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರು.

ನಿನ್ನೆ (ಏಪ್ರಿಲ್ 17) ಕಾವ್ಯಾ ತನ್ನ ತಾಯಿಯೊಂದಿಗೆ ಮಂತ್ರಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಳು. ಮನೆಯ ಮುಂದೆ ವಾಹನ ನಿಂತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದಿಂದ ಕಾವ್ಯಾಳ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ವೇಳೆ ಮನು ತನ್ನ ಅತ್ತೆಗೆ ಫೋನ್ ಮಾಡಿ “ಕಾವ್ಯಾ ಮಾತನಾಡುತ್ತಿಲ್ಲ” ಎಂದು ತಿಳಿಸಿದ್ದಾನೆ. ಗಾಬರಿಗೊಂಡ ಸಂಬಂಧಿಕರು ಧಾವಿಸಿದಾಗ ಕಾವ್ಯಾ ನಿಶ್ಚಲವಾಗಿ ಮಲಗಿದ್ದಳು. ಮನು ಅಲ್ಲಿಂದ ಪರಾರಿಯಾಗಿದ್ದನು. ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಕಾವ್ಯಾ ಸಾವನ್ನಪ್ಪಿದ್ದಳು.

ಕಾವ್ಯಾಳ ಪತಿ ಮನುಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಮತ್ತು ಆತ ಮಾದಕ ಚಟಕ್ಕೆ ಬಲಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಕಾವ್ಯಾ ತನ್ನ ಪೋಷಕರಿಗೆ ತಿಳಿಸಿ ಅಳಲು ತೋಡಿಕೊಂಡಿದ್ದಳು. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಆತನ ಅನೈತಿಕ ಸಂಬಂಧದ ಸಾಕ್ಷ್ಯಗಳನ್ನು ಕಾವ್ಯಾ ಒಂದು ಪೆನ್ ಡ್ರೈವ್ ನಲ್ಲಿ ಸಂಗ್ರಹಿಸಿಟ್ಟಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೆನ್ ಡ್ರೈವ್ ಈಗ ಈ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ನ್ಯಾಯಕ್ಕಾಗಿ ಆಗ್ರಹಿಸಿ ಕಾವ್ಯಾಳ ಸಂಬಂಧಿಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಮಗಳ ಸಾವಿನಿಂದ ತಾಯಿ ಶಶಿಕಲಾ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದಾರೆ. ಸದ್ಯ ಪೊಲೀಸರು ಆರೋಪಿ ಮನು ನನ್ನು ವಶಕ್ಕೆ ಪಡೆದಿದ್ದು, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಶಂಕೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
Follow Us