
ದಾವಣಗೆರೆ, ಏಪ್ರಿಲ್ 26: ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ (Vachananda Swamiji) ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಧರ್ಮದರ್ಶಿ ಸಮಿತಿಯ ಮುಖಂಡರು ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾಳೆ ಲೆಕ್ಕ ಕೊಡುತ್ತೇವೆ. ಲೆಕ್ಕ ಪಡೆದು ಮಠ ಖಾಲಿ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿ ಹೆಚ್.ಎಸ್.ನಾಗರಾಜ್ ತಾಕೀತು ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಟ್ರಸ್ಟಿ ಹೆಚ್.ಎಸ್.ನಾಗರಾಜ್, ನಮಗೆ ಲೆಕ್ಕ ಕೊಡಿ ಎಂದು ಕೇಳಿದ್ದಾರೆ, ನಾಳೆ ಲೆಕ್ಕ ಕೊಡುತ್ತೇವೆ. ಈಗಾಗಲೇ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಲೆಕ್ಕ ಪಡೆದು ಮಠ ಖಾಲಿ ಮಾಡುವಂತೆ ವಚನಾನಂದ ಸ್ವಾಮೀಜಿಗೆ ತಾಕೀತು ಮಾಡಿದರು.
ಇದನ್ನೂ ಓದಿ: ಪಂಚಮಸಾಲಿ ಪೀಠ ಸಂಘರ್ಷ: ಮೂವರು ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ
ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠ ಮುಗಿಸಲಾಗಿದೆ. ಈಗ ಹರಿಹರ ಪೀಠಕ್ಕೆ ಬಂದಿದ್ದಾರೆ, ನಾಳೆ ಲೆಕ್ಕ ಕೊಡುತ್ತೇವೆ. ಲೆಕ್ಕ ಕೊಡುವುದಕ್ಕಾಗಿಯೇ ವೇದಿಕೆ ಸಿದ್ಧ ಮಾಡಿದ್ದೇವೆ. ಎಲ್ಲರ ಸಮ್ಮುಖದಲ್ಲಿಯೇ ಲೆಕ್ಕ ಕೊಡುತ್ತೇವೆ ಎಂದು ಹೇಳಿದ್ದಾರೆ.
ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಪ್ರತಿಕ್ರಿಯಿಸಿದ್ದು, ನಾವು ನಾಳೆ ಮಠದ ವ್ಯವಹಾರದ ಕುರಿತು 2008ರಿಂದ 2026ವರೆಗಿನ ಲೆಕ್ಕ ಕೊಡುತ್ತೇವೆ. ದೇಣಿಗೆ, ಆಸ್ತಿ-ಪಾಸ್ತಿ ಹಾಗೂ ಇತರ ಮಾಹಿತಿ ನೀಡುತ್ತೇವೆ ಎಂದರು. 11 ಜನ ಟ್ರಸ್ಟಿಗಳಲ್ಲಿ ಇಬ್ಬರು ಸ್ವಾಮೀಜಿಗಳು ಮತ್ತು 9 ಜನ ಮುಖಂಡರಿದ್ದಾರೆ. ಮೊನ್ನೆ 13 ಜನ ಟ್ರಸ್ಟಿ ಸದಸ್ಯರು ಸೇರಿ ಸ್ವಾಮೀಜಿ ಉಚ್ಚಾಟಿಸಲಾಗಿದೆ. ಇನ್ನು ಮೂವರು ಟ್ರಸ್ಟಿಗಳನ್ನು ಉಚ್ಚಾಟನೆ ಮಾಡಿದ್ದೇವೆಂದು ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಹೇಳಿದ್ದಾರೆ. ಆದರೆ ಟ್ರಸ್ಟ್ ಹಾಗೂ ರಾಜ್ಯ ಪಂಚಮಸಾಲಿ ಸಂಘ ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರವೇ ಇಲ್ಲ. ಅವರು ನಮಗೆ ಸಲಹೆ ನೀಡಬಹುದು ಅಷ್ಟೇ ಎಂದಿದ್ದಾರೆ.
ಇನ್ನು ಹರಜಾತ್ರೆ ಈ ವರ್ಷ ಕೇವಲ ರಾಜಕೀಯ ಜಾತ್ರೆ ಆಗಿತ್ತು. ತಮಗೆ ಬೇಕಾದವರನ್ನು ವಚನಾನಂದ ಸ್ವಾಮೀಜಿ ಕರೆಸಿದ್ದಾರೆ. ನಮ್ಮ ಜೊತೆಗೆ ಮಾತಾಡುವುದನ್ನ ಬಿಟ್ಟಿದ್ದಾರೆ. ಸ್ವಾಮೀಜಿ ಹರಜಾತ್ರೆ ಲೆಕ್ಕಾ ಕೇಳುವ ಅಧಿಕಾರವೇ ಇಲ್ಲ ಅಂತಾರೆ ಎಂದು ಬಿ.ಸಿ.ಉಮಾಪತಿ ಆರೋಪಿಸಿದರು.
ಇನ್ನು ಇಷ್ಟು ದಿನ ಸುಮ್ಮನಿದ್ದ ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ರ ರಂಗ ಪ್ರವೇಶವಾಗಿದೆ. ಇಂದು ಇವರ ಕೂಡ ಸುದ್ದಿಗೋಷ್ಠಿ ನಡೆಸಿ ಮೂವರ ಟ್ರಸ್ಟಿಗಳನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದರು. ಮಠದ ವ್ಯವಹಾರದಲ್ಲಿ ಅವ್ಯವಹಾರ ನಡೆದರೆ, ಸ್ವಾಮೀಜಿ ವಿಚಾರಕ್ಕೆ ಬಂದಾಗ ಪಂಚಮಸಾಲಿ ರಾಜ್ಯ ಸಂಘ ಪ್ರವೇಶ ಮಾಡಬಹುದು ಎಂದು ನಿಯಮವಿದೆ. ಅದೇ ಅಧಿಕಾರ ಬಳಸಿಕೊಂಡು ಮೂವರನ್ನು ಉಚ್ಚಾಟನೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಮತ್ತೊಂದು ತಿರುವು ಪಡೆದ ಪಂಚಮಸಾಲಿ ಗುರುಪೀಠ ಸಂಘರ್ಷ: ಶ್ರೀಗಳಿಗೆ ಭಕ್ತರ ಆನೆಬಲ
ಮೇಲ್ನೋಟಕ್ಕೆ ಮಠದ ಟ್ರಸ್ಟನಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಬಾಯಿ ಮಾತಲ್ಲಿ 27 ಕೋಟಿ ರೂ ಅವ್ಯವಹಾರ ಎನ್ನಲಾಗುತ್ತಿತ್ತು. ನಿಖರವಾದ ಲೆಕ್ಕ ನಿಗೂಢವಾಗಿತ್ತು. ಆದರೆ ಅಂದಾಜು 25 ಕೋಟಿ ರೂ ಅವ್ಯವಹಾರ ಆಗಿದೆ ಎಂದು ಲೆಕ್ಕ ಕೊಡಿ ಚುಳುವಳಿಯ ಅಧ್ಯಕ್ಷ ಪರಮೇಶ್ವರ ಗೌಡ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.