
ದಾವಣಗೆರೆ, (ಜೂನ್ 23): ಬೆಣ್ಣೆನಗರಿ ದಾವಣಗೆರೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನವಾಗಿದೆ. ಪಾಕಿಸ್ತಾನ ಉಗ್ರ ಸಂಘಟನೆಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಉತ್ತರ ಪ್ರದೇಶ ಮೂಲದ ಸುಯೇಲ್ (20) ಬಂಧಿತ ಶಂಕಿತ ಉಗ್ರ. ಹರಿಹರದ ಪಕ್ಕದಲ್ಲಿರುವ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ಬಂದಿದ್ದ ಸುಯೇಲ್, ಇನ್ಟಾಗ್ರಾಂ ನಲ್ಲಿ ಪಾಕಿಸ್ತಾನದ ಉಗ್ರರ ಜೊತೆ ನಿರಂತರವಾಗಿ ಸಂಪರ್ಕ ದಲ್ಲಿ ಇದ್ದ ಎನ್ನಲಾಗಿದೆ. ಸುಯೇಲ್ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಿದ್ದ ಕೇಂದ್ರ ಗುಪ್ತಚರ ಇಲಾಖೆ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡದೊಂದಿಗೆ ಕಾರ್ಯಚರಣೆ ನಡೆಸಿ ಬಂಧಿಸಿದೆ.
ಕಳೆದ ಒಂದು ತಿಂಗಳ ಹಿಂದೆ ತುಮಕೂರು ಟೌನ್ ಪೊಲೀಸ್ ಠಾಣೆಯ ಪೊಲೀಸರು ದಾವಣಗೆರೆ ಮೂಲದ ಜಮೀರ್ ಖಾನ್ ಹಾಗೂ ಅಲ್ಲಾಭಕ್ಷಿ ಎನ್ನುವರನ್ನು ಬಂಧನ ಮಾಡಿದ್ದರು. ಅದೇ ಪ್ರಕರಣ ಜಾಡು ಹಿಡಿದು ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಪಾಕಿಸ್ತಾನದ ಉಗ್ರರ ಜೊತೆ ನಂಟು ಹೊಂದಿದ್ದ ಎನ್ನಲಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ.
ಭಾರತದ ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಮೋಸ್ಟ್ ವಾಂಟೆಡ್ ಉಗ್ರ ರಾಣಾ ಉನೇನ್ ನೊಂದಿಗೆ ಸಂಪರ್ಕದಲ್ಲಿದ್ದ ತುಮಕೂರಿನ ಅಲ್ಲಾಬಕ್ಷು ಹಾಗೂ ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ ಜಮೀರ್ ಖಾನ್ ಎಂಬ ಇಬ್ಬರು ಯುವಕರನ್ನು ಉಗ್ರ ನಿಗ್ರಹ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು.ಇವರಿಬ್ಬರು ಕಳೆದ ಕೇವಲ 20 ದಿನಗಳಿಂದ ರಾಣಾ ಉನೇನ್ ನ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆಂತರಿಕ ಭದ್ರತೆಗೆ ಕುತ್ತು ತರಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.