
ದಾವಣಗೆರೆ, (ಆಗಸ್ಟ್ 27): ಸಚಿವ ಮಧು ಬಂಗಾರಪ್ಪನವರ (Madhu bangarappa) ವಿರುದ್ಧ ಪ್ರಣವಾನಂದ ಸ್ವಾಮೀಜಿ (Pranavananda Swamiji) ಮತ್ತೆ ಗುಡುಗಿದ್ದಾರೆ. ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ತೆಗೆದು ಹಾಕಲಾಗಿದೆ. ಮೊದಲ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿತ್ತು. ಇದೇ ಮಧು ಬಂಗಾರಪ್ಪ ನನ್ನ ಹೆಸರು ತೆಗೆಸಿದ್ದಾರೆ. ಏನಾದರೂ ಮುಂದಿನ ಚುನಾವಣೆಯಲ್ಲಿ ಮಧು ಬಂಗಾರಪ್ಪ ಶಾಸಕನಾದ್ರೆ ನಮ್ಮ ಕಾವಿ ಬಟ್ಟೆ ಬಿಚ್ಚಿ ಹಾಕುತ್ತೇನೆ ಎಂದು ಸವಾಲು ಹಾಕಿದ ಸ್ವಾಮೀಜಿ, ಮುಂದಿನ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ವಿರುದ್ದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ದಾವಣಗೆರೆಯಲ್ಲಿಂದು ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡ ಶ್ರೀ ನಾರಾಯಣ ಗುರು ಜಯಂತಿ ಸರ್ಕಾರಿ ಕಾರ್ಯಕ್ರಮಕ್ಕೆ ಮೊದಲ ಆಹ್ವಾನ ನೀಡಲಾಗಿತ್ತು. ಆದ್ರೆ, ಮಧು ಬಂಗಾರಪ್ಪ ದೆಹಲಿಗೆ ಹೋಗಿ ನನ್ನ ಹೆಸರು ತೆಗೆಸುವಂತೆ ಸಿಎಂಗೆ ಒತ್ತಡ ಹಾಕಿದ್ದಾರೆ. ನನ್ನ ವಿರುದ್ದ ತಪ್ಪು ಮಾಹಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ಗೆ ನೀಡಿದ್ದಾನೆ. ಡಿಕೆ ಶಿವಕುಮಾರ್ ಸಿಎಂ ಆಗಲು ನಾವು ಮತ್ತೆ 32 ಸ್ವಾಮೀಜಿಗಳು ಸಿದ್ದರಾಮಯ್ಯನವರನ್ನು ಎದುರು ಹಾಕಿಕೊಂಡು ಹೋರಾಟ ಮಾಡಿದ್ದೇವು. ಮಧು ಬಂಗಾರಪ್ಪ ನಿಮ್ಮ ಸಚಿವ ಸಂಪುಟದಲ್ಲಿ ಇದ್ದರೆ ನಿಮಗೆ ಕೆಟ್ಟ ಹೆಸರು. ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಮಧು ಬಂಗಾರಪ್ಪ ನಮ್ಮಹೆಸರನ್ನು ಆಹ್ವಾನ ಪತ್ರಿಕೆಯಿಂದ ನನ್ನ ಹೆಸರು ತೆಗಿಸಿರಬಹುದು. ಆದರೆ ಈಡಿಗ ಸಮುದಾಯದವರು ಹೃದಯದಿಂದ ಕಿತ್ತು ಹಾಕಲು ಆಗೋದಿಲ್ಲ. ಅಧಿಕಾರದ ಅಮಲಿನಿಂದ ಮಧು ಬಂಗಾರಪ್ಪ ಈ ರೀತಿ ಮಾಡುತ್ತಿದ್ದಾರೆ.ಮಂಜುನಾಥ್ನ ಮೇಲೆ ಪ್ರಮಾಣ ಮಾಡುತ್ತೇನೆ ಮಧು ಬಂಗಾರಪ್ಪ ಮತ್ತೊಮ್ಮೆ ವಿಧಾನಸೌಧ ಪ್ರವೇಶ ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮಧು ಗೆಲ್ಲುವುದಿಲ್ಲ. ಬಂಗಾರಪ್ಪನವರು ಬಂಗಾರದ ಹಾಗೇ ಇದ್ದರು. ಆದರೆ ಈ ಮಧು ನಾಗರಹಾವಿಗಿಂತ ಹೆಚ್ಚಿನ ವಿಷ ಹೊಂದಿರುವ ವ್ಯಕ್ತಿ. ಈ ರೀತಿ ದ್ವೇಷ ಸಾಧಿಸುವ ವ್ಯಕ್ತಿಯನ್ನು ಕಾಂಗ್ರೆಸ್ ಅದ್ಯಕ್ಷರು ಪಕ್ಷದಲ್ಲಿ ಇಟ್ಟುಕೊಳ್ಳಬೇಡಿ ಎಂದು ಕಿಡಿಕಾರಿದರು.
ನಾಳೆ ನಡೆಯುವ ನಾರಾಯಣಗುರು ಜಯಂತಿ ದಿನ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಕೂರುತ್ತೇವೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಒಂದು ದಿನ ದೆಹಲಿಯಲ್ಲಿ ಜಂತರ್ ಮಂಥರ್ನಲ್ಲಿ ಪ್ರತಿಭಟನೆಗೆ ಕೂರುತ್ತೇನೆ. ಮಧು ಬಂಗಾರಪ್ಪ ಅನುಯಾಯಿಗಳು ನಮಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.