AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಆಸ್ಪತ್ರೆಯಾ? ದನದ ಕೊಟ್ಟಿಗೆಗಿಂತಲೂ ಕೆಟ್ಟದಾಗಿದೆ: ಕೊವಿಡ್ ವಾರ್ಡ್​ ಪರಿಸ್ಥಿತಿ ಕಂಡು ದಿಗ್ಭ್ರಾಂತರಾದ ಡಿಸಿಎಂ ಸವದಿ!

DCM Laxman Savadi: ಹೀಗೆಲ್ಲಾ ಇದ್ರೆ ಹೇಗ್ರೀ ನಿರ್ದೇಶಕ ಸಾಹೇಬ್ರೇ? ಕೊರೊನಾ ಸೋಂಕಿತರು ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲವೇ? ಕೂಡಲೇ ವಾರ್ಡ್​ನಿಂದ ಶವ ಕೊಂಡೊಯ್ಯಿರಿ ಎಂದು ಬಿಮ್ಸ್​ ನಿರ್ದೇಶಕ ವಿನಯ್ ದಾಸ್ತಿಕೊಪ್ಪಗೆ ಸವದಿ ಸೂಚಿಸಿದರು. ಇದೇ ವೇಳೆ ತಡವಾಗಿ ಆಗಮಿಸಿದ DHO ಶಶಿಕಾಂತ್ ಮುನ್ಯಾಳಗೆ ಸೇರಿದಂತೆ ಬಿಮ್ಸ್​ ನಿರ್ದೇಶಕ ದಾಸ್ತಿಕೊಪ್ಪಗೂ ಡಿಸಿಎಂ ಲಕ್ಷ್ಮಣ ಸವದಿ ಮತ್ತೆ ತರಾಟೆಗೆ ತೆಗೆದುಕೊಂಡರು.

ಇದು ಆಸ್ಪತ್ರೆಯಾ? ದನದ ಕೊಟ್ಟಿಗೆಗಿಂತಲೂ ಕೆಟ್ಟದಾಗಿದೆ: ಕೊವಿಡ್ ವಾರ್ಡ್​ ಪರಿಸ್ಥಿತಿ ಕಂಡು ದಿಗ್ಭ್ರಾಂತರಾದ ಡಿಸಿಎಂ ಸವದಿ!
ಡಿಸಿಎಂ ಲಕ್ಷ್ಮಣ ಸವದಿ
ಸಾಧು ಶ್ರೀನಾಥ್​
|

Updated on:May 29, 2021 | 11:13 AM

Share

ಬೆಳಗಾವಿ: ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿ ಬಳಿಕ ಎಚ್ಚೆತ್ತ ಡಿಸಿಎಂ ಲಕ್ಷ್ಮಣ ಸವದಿ ಇಂದು ನಗರದಲ್ಲಿರುವ ಬಿಮ್ಸ್​ ಕೊವಿಡ್ ವಾರ್ಡ್​ಗೆ ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಆದರೆ ಮಾಧ್ಯಮಗಳಲ್ಲಿ ಬಿತ್ತರಿಸಿದ್ದಕ್ಕಿಂತಾ ಅಲ್ಲಿನ ಪರಿಸ್ಥಿತಿ ಕೆಟ್ಟದ್ದಾಗಿ ಕಂಡುಬಂದಿದ್ದರಿಂದ ಹೌಹಾರಿದರು. ಕೊವಿಡ್ ವಾರ್ಡ್​ ಪರಿಸ್ಥಿತಿ ಕಂಡು ದಿಗ್ಭ್ರಾಂತರಾದ ಡಿಸಿಎಂ ಸವದಿ ಇದೇನು ಆಸ್ಪತ್ರೆಯೇ ಎಂದು ಬಿಮ್ಸ್​ ನಿರ್ದೇಶಕ ವಿನಯ್ ದಾಸ್ತಿಕೊಪ್ಪಗೆ ಪ್ರಶ್ನಿಸುತ್ತಾ… ದನದ ಕೊಟ್ಟಿಗೆ ಇದಕ್ಕಿಂತಲೂ ಚೆನ್ನಾಗಿರುತ್ತಲ್ರೀ ಎಂದು ಗರಂ ಆದರು.

ಬಿಮ್ಸ್​ನ ಕೊವಿಡ್ ವಾರ್ಡ್​ಗೆ ಭೇಟಿ ನೀಡಿದ್ದ ವೇಳೆ ಡಿಸಿಎಂ ಲಕ್ಷ್ಮಣ ಸವದಿ ಪಿಪಿಇ ಕಿಟ್​ ಧರಿಸಿ ವೈದ್ಯರ ತಂಡದ ಜೊತೆ ಒಳಗೆಲ್ಲ ರೌಂಡ್ಸ್​ ಹೊಡೆದರು. ಕೊವಿಡ್ ಐಸಿಯು, ನಾರ್ಮಲ್​ ವಾರ್ಡ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಗ ಅಲ್ಲಿ ಕಂಡುಬಂದ ನಾನಾ ಭೀಕರ ದೃಶ್ಯಗಳನ್ನು ಕಂಡು ಡಿಸಿಎಂ ಲಕ್ಷ್ಮಣ ಸವದಿ ಸ್ಥಳದಲ್ಲೆ ಕೆಂಡಾಮಂಡಲರಾದರು.

ಡಿಸಿಎಂ ಸವದಿ ಭೇಟಿ ವೇಳೆ ತಿಳಿಸಿದ ಕೊವಿಡ್ ರೋಗಿಗಳು 10 ಗಂಟೆಯಾದರೂ ಉಪಾಹಾರ ಬಂದಿಲ್ಲವೆಂದು ಮಾಹಿತಿ ನೀಡಿದರು. ಕೊವಿಡ್​ ವಾರ್ಡ್​ನಲ್ಲಿ ಶವ ಇರುವುದನ್ನು ಕಂಡು ತಬ್ಬಿಬ್ಬು ಆಗುವ ದುಃಸ್ಥಿತಿ ಸಚಿವ ಲಕ್ಷ್ಮಣ ಸವದಿ ಅವರದ್ದಾಗಿತ್ತು. ಸೋಂಕಿತರ ಜತೆ ಶವ ಇರುವುದನ್ನು ಕಂಡು ಡಿಸಿಎಂ ಗರಂ ಆದರು. ರೋಗಿಗಳ ಪಕ್ಕದಲ್ಲೇ ಮೃತದೇಹ ಇರಿಸುವುದರಿಂದ ಆತಂಕಗೊಂಡರು. ಹೀಗೆಲ್ಲಾ ಇದ್ರೆ ಹೇಗ್ರೀ ನಿರ್ದೇಶಕ ಸಾಹೇಬ್ರೇ? ಕೊರೊನಾ ಸೋಂಕಿತರು ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲವೇ? ಕೂಡಲೇ ವಾರ್ಡ್​ನಿಂದ ಶವ ಕೊಂಡೊಯ್ಯಿರಿ ಎಂದು ಬಿಮ್ಸ್​ ನಿರ್ದೇಶಕ ವಿನಯ್ ದಾಸ್ತಿಕೊಪ್ಪಗೆ ಸವದಿ ಸೂಚಿಸಿದರು. ಇದೇ ವೇಳೆ ತಡವಾಗಿ ಆಗಮಿಸಿದ DHO ಶಶಿಕಾಂತ್ ಮುನ್ಯಾಳಗೆ ಸೇರಿದಂತೆ ಬಿಮ್ಸ್​ ನಿರ್ದೇಶಕ ದಾಸ್ತಿಕೊಪ್ಪಗೂ ಡಿಸಿಎಂ ಲಕ್ಷ್ಮಣ ಸವದಿ ಮತ್ತೆ ತರಾಟೆಗೆ ತೆಗೆದುಕೊಂಡರು.

ಕೋವಿಡ್ ವಾರ್ಡ್ ಪರಿಶೀಲನೆ ಬಳಿಕ ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡುತ್ತಾ ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೆ. ಬಿಮ್ಸ್‌ ನಿರ್ದೇಶಕರಿಗೆ ಇನ್ನು ಯಾವ ಭಾಷೆಯಲ್ಲಿ ಹೇಳಬೇಕು? ಮೊನ್ನೆ ಒಂದು ಭಾಷೆಯಲ್ಲಿ ಹೇಳಿದೀನಿ, ಅದೂ ಅವರಿಗೆ ಅರ್ಥ ಆಗಿಲ್ಲ. ಸಿಎಂ ವಿಡಿಯೋ ಕಾನ್ಫರೆನ್ಸ್ ಮುಗಿದ ಮೇಲೆ ಸಭೆ ಮಾಡ್ತೀನಿ. ಬಿಮ್ಸ್ ವಾರ್ಡ್ ಒಳಗೆ ಹೋಗಿ ನೋಡಿ ಬಂದಿದ್ದೇನೆ. ಅಲ್ಲಿನ ಪರಿಸ್ಥಿತಿಯನ್ನು ಕಂಡು ನನಗೂ ಸ್ವಲ್ಪ ಕನ್ಫ್ಯೂಸ್ ಆಗಿ ಹೋಯ್ತು ಏನ್ ಹೇಳಬೇಕು ಅಂತಾ ಗೊತ್ತಾಗಲಿಲ್ಲ ಎಂದು ಬಿಮ್ಸ್ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ ಡಿಸಿಎಂ ಲಕ್ಷ್ಮಣ್ ಸವದಿ ಮತ್ತೊಮ್ಮೆ ಕಿಡಿಕಿಡಿಯಾದರು.

(DCM Laxman Savadi visits bims covid center in belagavi admonishes bims director vinay dastikoppa)

ಕೊರೊನಾ 3ನೇ ಅಲೆಯ ಆತಂಕ‌, ಮತ್ತೆ ಲಾಕ್​ಡೌನ್​ಗೆ ಒಲವು: ಹೀಗಿರಲಿದೆ ಜೂನ್​ ತಿಂಗಳ ಚಿತ್ರಣ

Published On - 11:09 am, Sat, 29 May 21