ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಮಾಸಿಕ 2000ರೂ. ಪಿಂಚಣಿ: ಯಾವೆಲ್ಲಾ ದಾಖಲೆಗಳು ಬೇಕು?

ಬರ ಪರಿಸ್ಥಿತಿ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ರೈತರ ಕುಟುಂಬಗಳ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಸಂಕಷ್ಟದಲ್ಲಿರುವ ಮೃತ ರೈತರ ಪತ್ನಿಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರದಿಂದ ಮಾಸಿಕ 2000 ರೂ.ವಿಶೇಷ ವಿಧವಾ ವೇತನ (ಪಿಂಚಣಿ) ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಗಾದ್ರೆ, ಅರ್​ಜಿ ಸಲ್ಲಿಸುವುದ್ಹೇಗೆ? ಇದಕ್ಕೆ ಏನೆಲ್ಲಾ ದಾಖಲೆಗಳು ಬೇಕು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಮಾಸಿಕ 2000ರೂ. ಪಿಂಚಣಿ: ಯಾವೆಲ್ಲಾ ದಾಖಲೆಗಳು ಬೇಕು?
Money

Updated on: May 22, 2026 | 6:10 PM

ಬೆಂಗಳೂರು, (ಮೇ 22): ಸಾಮಾಜಿಕ ಭದ್ರತೆ ಮತ್ತು ಪಿಂಚನೆಗಳ ನಿರ್ದೇಶನಾಲಯ ವತಿಯಿಂದ ಕರ್ನಾಟಕದಾದ್ಯಂತ ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ (Farmers) ಪತ್ನಿಯರಿಗೆ (Wife) ವಿಧವಾ ವೇತನ ಯೋಜನೆಯನ್ನು (Pension Scheme) ಜಾರಿ ಮಾಡಲಾಗಿದ್ದು, ಯೋಜನೆಯಲ್ಲಿ ರೈತನ ಮಡದಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತದೆ. ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿಯ ಗುರುತಿಸಿ ಪರಿಹಾರ ಪಡೆದಿರುವ ಮೃತ ರೈತರ ಪತ್ನಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದ್ದು, ಈ ಯೋಜನೆಯ ಕುರಿತಂತೆ ಅರ್ಹತಾ ಮಾನದಂಡ, ಸಲ್ಲಿಸಬೇಕಾದ ದಾಖಲೆಗಳ ಸಮೇತ ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದು ಈ ಕೆಳಗಿನಂತಿದೆ.

ಮುಖ್ಯಾಂಶಗಳು

  • ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಪಿಂಚಣಿ
  • ಮೃತ ರೈತರ ಪತ್ನಿಯರಿಗೆ ಮಾಸಿಕ 2000 ರೂ.ವಿಶೇಷ ವಿಧವಾ ವೇತನ (ಪಿಂಚಣಿ) ಯೋಜನೆ
  • ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಹಿತರಕ್ಷಣೆಗಾಗಿ ಈ ಕ್ರಮ

ರಾಜ್ಯದಲ್ಲಿ ಇರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಹಿತಾಶಕ್ತಿ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿ ಗುರುತಿಸಿ ಪರಿಹಾರ ಪಡೆದಿರುವ ಮೃತ ರೈತರ ಪತ್ನಿಗೆ ಮಾಸಿಕ 2000 ರೂ. ಪಿಂಚಣಿ ನೀಡಲಾಗುತ್ತಿದೆ.

ಈ ಯೋಜನೆಗೆ ಯಾರು ಅರ್ಹರು?

ಅರ್ಹತೆ ಮತ್ತು ಮಾನದಂಡಗಳು: ಈ ವಿಶೇಷ ಪಿಂಚಣಿ ಸೌಲಭ್ಯವನ್ನು ಪಡೆಯಲು, ಮೃತ ರೈತರ ಕುಟುಂಬದವರು ಈಗಾಗಲೇ ಕೃಷಿ ಇಲಾಖೆಯ ನಿಯಮಾವಳಿಗಳ ಅಡಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣವೆಂದು ಗುರುತಿಸಲ್ಪಟ್ಟು, ಸರ್ಕಾರದ ಅಧಿಕೃತ ಪರಿಹಾರ ಧನವನ್ನು ಪಡೆದಿರಬೇಕು. ಅಂತಹ ಮೃತ ರೈತರ ಪತ್ನಿಯರು ಮಾತ್ರ ಈ ಮಾಸಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ ಎಲ್ಲಿ?

ಅರ್ಹ ಫಲಾನುಭವಿಗಳು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿ ಬರುವ ‘ಅಟಲ್ ಜೀ ಜನಸ್ನೇಹಿ ಕೇಂದ್ರ’ (ನಾಡಕಚೇರಿ) ಗಳ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಬೇಕಾಗುವ ಮುಖ್ಯ ದಾಖಲೆಗಳು

  • ಕೃಷಿ ಇಲಾಖೆಯಿಂದ ಆತ್ಮಹತ್ಯೆ ಪರಿಹಾರ ಧನ ಪಡೆದಿರುವ ಅಧಿಕೃತ ಆದೇಶದ ಪ್ರತಿ.
  • ಅಟಲ್ ಜೀ ಜನಸ್ನೇಹಿ ಕೇಂದ್ರದ ನಿಗದಿತ ಅರ್ಜಿ ನಮೂನೆ.
  • ಅರ್ಜಿದಾರರ ಆಧಾರ್ ಕಾರ್ಡ್.
  • ಪಿಂಚಣಿ ಹಣ ಜಮೆಯಾಗಲು ಬ್ಯಾಂಕ್ ಅಥವಾ ಅಂಚೆ ಕಚೇರಿಯ (Post Office) ಖಾತೆ ವಿವರಗಳು.

ಆರ್ಥಿಕ ನಷ್ಟ ಹಾಗೂ ಕುಟುಂಬದ ಯಜಮಾನನನ್ನು ಕಳೆದುಕೊಂಡು ಕಂಗಾಲಾಗಿರುವ ರೈತ ಮಹಿಳೆಯರಿಗೆ ನೆರವಾಗಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹರು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸರ್ಕಾರ ಕೋರಿದೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Fri, 22 May 26

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us