ಕರ್ನಾಟಕ ರೇಷ್ಮೆ ಬೆಳೆಗೆ ಹೆಚ್ಚಲಿದೆ ಬೇಡಿಕೆ: ಆಗ್ನೇಯ ಏಷ್ಯಾ ದೇಶಗಳಿಗೆ ರೇಷ್ಮೆ ಗೂಡು ರಫ್ತಿಗೆ ಕ್ರಮ

ಭಾರತದ ರೇಷ್ಮೆ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕರ್ನಾಟಕದಿಂದ ಈಗ ಆಗ್ನೇಯ ಏಷ್ಯಾ ಮತ್ತು ಈಶಾನ್ಯ ರಾಜ್ಯಗಳಿಗೆ ರೇಷ್ಮೆ ಗೂಡುಗಳ ರಫ್ತು ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ. ರೇಷ್ಮೆ ಗೂಡುಗಳನ್ನು ರಫ್ತು ಮಾಡುವುದರ ಮೂಲಕ ರಫ್ತು ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ. ರೇಷ್ಮೆ ಗೂಡುಗಳಲ್ಲಿರುವ ಪ್ರೋಟೀನ್‌ ಮತ್ತು ಪೌಷ್ಟಿಕಾಂಶದಿಂದಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನಲಾಗಿದೆ.

ಕರ್ನಾಟಕ ರೇಷ್ಮೆ ಬೆಳೆಗೆ ಹೆಚ್ಚಲಿದೆ ಬೇಡಿಕೆ: ಆಗ್ನೇಯ ಏಷ್ಯಾ ದೇಶಗಳಿಗೆ ರೇಷ್ಮೆ ಗೂಡು ರಫ್ತಿಗೆ ಕ್ರಮ
ರೇಷ್ಮೆ (ಸಾಂದರ್ಭಿಕ ಚಿತ್ರ)
Updated By: ವಿವೇಕ ಬಿರಾದಾರ

Updated on: May 05, 2025 | 6:33 PM

ಬೆಂಗಳೂರು, ಮೇ 5: ರೇಷ್ಮೆ ಸೀರೆ ಮತ್ತು ಇತರ ರೇಷ್ಮೆ ವಸ್ತುಗಳ (Silk Production) ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕ (Karnataka) ಇದೀಗ ಈಶಾನ್ಯ ರಾಜ್ಯಗಳು ಹಾಗೂ ಆಗ್ನೇಯ ಏಷ್ಯಾದ ದೇಶಗಳಿಗೆ ರೇಷ್ಮೆ ಗೂಡುಗಳನ್ನು ರಫ್ತು ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. ಪ್ರವಾಸೋದ್ಯಮ ಪ್ರಾಥಮಿಕ ಆದಾಯದ ಮೂಲವಾಗಿರುವ ಸಿಂಗಾಪುರ ಮತ್ತು ಇತರ ಆಗ್ನೇಯ ಏಷ್ಯಾದ ದೇಶಗಳಿಂದ ರೇಷ್ಮೆ ಗೂಡುಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಭಾರತ ಕಂಡುಕೊಂಡಿದ್ದು, ರಫ್ತು ಹೆಚ್ಚಳಕ್ಕೆ ಚಿಂತನೆ ನಡೆಸಿದೆ. ಈ ದೇಶಗಳಿಗೆ ರಫ್ತಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಲಿದೆ ಎಂದು ವರದಿಯಾಗಿದೆ.

‘ರೇಷ್ಮೆ ಗೂಡುಗಳನ್ನು ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಭಾರತ ಒಂದಾಗಿದೆ. ರಾಜ್ಯಗಳ ವಿಚಾರಕ್ಕೆ ಬಂದರೆ, ಕರ್ನಾಟಕವು ಮುಂಚೂಣಿಯಲ್ಲಿದೆ. ಇಲ್ಲಿಂದ ರೇಷ್ಮೆ ಗೂಡುಗಳಿಗೆ ಬೇಡಿಕೆ ಹೆಚ್ಚಿರುವ ಇತರ ದೇಶಗಳಿಗೆ ರಫ್ತು ಮಾಡಬಹದು. ರೇಷ್ಮೆಯನ್ನು ಹಿಡಿದ ನಂತರ ಅವುಗಳನ್ನು ಜೀವಂತವಾಗಿ ರಫ್ತು ಮಾಡುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಎಂದು ಸೆಂಟ್ರಲ್ ಸಿಲ್ಕ್ ಬೋರ್ಡ್ ಕಾರ್ಯದರ್ಶಿ ಮತ್ತು ಸಿಇಒ ಶಿವಕುಮಾರ್ ಪೆರಿಯಸಾಮಿ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಸತ್ತ ರೇಷ್ಮೆ ಹುಳವನ್ನು ಒಣಗಿಸಿ, ಪುಡಿ ಮಾಡಿ ಈಗಾಗಲೇ ರಫ್ತು ಮಾಡಲಾಗುತ್ತದೆ. ಇದನ್ನು ಪ್ರೋಟೀನ್​ಗೆ ಪೂರಕವಾಗಿ ನಾಯಿಗಳಿಗೆ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ರೇಷ್ಮೆ ಹುಳಕ್ಕೆ ಈಶಾನ್ಯ ರಾಜ್ಯಗಳಲ್ಲಿ ಭಾರಿ ಬೇಡಿಕೆ

ರೇಷ್ಮೆ ಹುಳವನ್ನು ಜೀವಂತವಾಗಿಡಲು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಜೀವಂತ ರೇಷ್ಮೆ ಹುಳದಿಂದ ರೇಷ್ಮೆ ಹೊರತೆಗೆಯುವ ವಿಧಾನಗಳ ಕುರಿತು ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ, ಎರಿ ರೇಷ್ಮೆ ಹುಳವನ್ನು ಸೇವಿಸಲಾಗುತ್ತದೆ ಮತ್ತು ನಾಗಾಲ್ಯಾಂಡ್‌ನ ದಿಮಾಪುರದಂತಹ ನಗರಗಳಲ್ಲಿ ಇದನ್ನು ಕೆಜಿಗೆ 700 ರೂ.ನಿಂದ 1,200 ರೂ. ವರೆಗೆ ಮಾರಾಟ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ
ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ
ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಬೆಂಗಳೂರು ಅಪಾರ್ಟ್​ಮೆಂಟ್ ಹೊಸ ಪ್ರಯೋಗ
ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೇ 11ರವರೆಗೂ ಮಳೆ
ಜನಿವಾರ ವಿವಾದ: ಸರ್ಕಾರವನ್ನು ಹೊಣೆ ಮಾಡಲು ಆಗಲ್ಲ, ಸತೀಶ್ ಜಾರಕಿಹೊಳಿ

ಇತರ ದೇಶಗಳಲ್ಲಿ ರೇಷ್ಮೆ ಸೇವನೆ ಕಾನೂನುಬದ್ಧವಾಗಿದೆ ಮತ್ತು ಈಶಾನ್ಯ ಭಾರತದಲ್ಲಿ ಇದು ಸಾಂಪ್ರದಾಯಿಕ ಆಹಾರ ಪದ್ಧತಿಯಾಗಿದೆ. ಮಲ್ಬೆರಿ ರೇಷ್ಮೆ ಗೂಡುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವುಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವರದಿ ಉಲ್ಲೇಖಿಸಿದೆ.

ರೇಷ್ಮೆ ಪ್ರೋಟೀನ್ ಭರಿತ ಸೌಂದರ್ಯವರ್ಧಕಗಳಿಗೆ ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಭಾರಿ ಬೇಡಿಕೆಯಿದೆ. ಔಷಧಗಳು ಸೇರಿದಂತೆ ರೇಷ್ಮೆ ಉಪಉತ್ಪನ್ನ ವಲಯವನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ಇಲ್ಲಿ, ಸಂಶೋಧಕರು ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಪೆರಿಯಸಾಮಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಹೊಸ ಪ್ರಯೋಗ ಆರಂಭಿಸಿದ ಬೆಂಗಳೂರು ಅಪಾರ್ಟ್​ಮೆಂಟ್

ರೇಷ್ಮೆ ಗೂಡುಗಳಲ್ಲಿ ಅಮೈನೋ ಆಮ್ಲಗಳು, ಆರೋಗ್ಯಕರ ಕೊಬ್ಬುಗಳು, ಒಮೆಗಾ-3, ಖನಿಜಗಳು ಮತ್ತು ವಿಟಮಿನ್‌ಗಳು ಸಮೃದ್ಧವಾಗಿರುವುದನ್ನು ಅಂತರರಾಷ್ಟ್ರೀಯ ಅಧ್ಯಯನಗಳು ಪತ್ತೆಹಚ್ಚಿವೆ. ಚೀನಾ, ವಿಯೆಟ್ನಾಂ ಮತ್ತು ಜಪಾನ್‌ನಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಚೀನಾ ಕೂಡ ದೊಡ್ಡ ರೇಷ್ಮೆ ಉತ್ಪಾದಕ ರಾಷ್ಟ್ರವಾಗಿದ್ದು, ಅದಕ್ಕೆ ತೀವ್ರ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಕೆಲಸ ಮಾಡುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:42 am, Mon, 5 May 25