ಧಾರವಾಡ: ಕೇಂದ್ರ ಗಣಿ ಸಚಿವ ಪ್ರಹ್ಲಾದ ಜೋಶಿ (Pralhad Joshi)ಯವರು ರೈಲ್ವೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಧಾರವಾಡ-ಬೆಂಗಳೂರು(Dharwad-Bangalore) ರೈಲು ಪ್ರಯಾಣ ನಾಲ್ಕುವರೆ ಗಂಟೆ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಚನ್ನಬಸವೇಶ್ವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಧಾರವಾಡ-ಬೆಂಗಳೂರು ಬ್ರಾಡ್ಗೇಜ್(broad gauge) ಮಾಡಲು 20 ವರ್ಷ ತಗೊಂಡಿದ್ದರು. ಈಗ ನಾವು 2023ರ ಒಳಗಾಗಿ ರೈಲು ಡಬ್ಲಿಂಗ್ ಪೂರ್ಣ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸಹ ರೈಲು ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ಧಾರವಾಡ-ಬೆಂಗಳೂರು ಅಂತರ ನಾಲ್ಕೂವರೆ ಗಂಟೆ ಮಾಡುತ್ತೇವೆ. ಎರಡ್ಮೂರು ವರ್ಷದಲ್ಲಿ ಈ ಕಾರ್ಯ ಆಗುತ್ತದೆ. ಈ ಬಗ್ಗೆ ನಾನು ಮತ್ತು ಸಿಎಂ ಬೊಮ್ಮಾಯಿ ಅವರು ಕೇಂದ್ರ ರೈಲ್ವೆ ಸಚಿವರ ಜೊತೆ ಮಾತನಾಡಿದ್ದೇವೆ. ಧಾರವಾಡ-ಬೆಂಗಳೂರು ಮಧ್ಯೆ ವಂದೇ ಮಾತರಂ ರೈಲು(vande mataram train) ಓಡಿಸಲಿದ್ದೇವೆ ಎಂದು ಭರವಸೆ ನೀಡಿದರು.
ದೇಶದಲ್ಲಿ ಹೊಸ ರಿತಿಯ ವಾತಾವರಣ ನಿರ್ಮಾಣ
ದೇಶದಲ್ಲಿ ಹೊಸ ರಿತಿಯ ವಾತಾವರಣ ನಿರ್ಮಾಣ ಆಗುತ್ತಿದ್ದು, ಸಂಕುಚಿತ ಮನೋಭಾವ ಹೋಗಲಾಡಿ, ಇವತ್ತು ಎಲ್ಲಾ ಹಂತದಲ್ಲೂ ಪರಿವರ್ತನೆಯಾಗುತ್ತಿದೆ ಎಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಧಾರವಾಡದ ಚನ್ನಬಸವೇಶ್ವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಕಾಶಿ ಬಗ್ಗೆ ಮಾತಾಡಿದರೆ ಸಂಕುಚಿತ ಮನೋಭಾವನೆ ಆಗುತ್ತಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಅಂಥ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಕಾಶಿ, ಮಥುರಾ, ಅಯೋಧ್ಯೆಯ ಬಗ್ಗೆ ಮಾತನಾಡಿದರೆ ಸಂಕುಚಿತ ಮನೋಭಾವನೆ ಆಗುತ್ತಿತ್ತು. ಜಾತ್ಯಾತೀತತೆ ವಿರುದ್ಧ ಎಂಬ ಮಾನಸಿಕತೆ ಇತ್ತು. ಆದರೆ ಈಗ ದೇಶದ ಪ್ರಧಾನಿ ಮೋದಿಯವರೇ ಕಾಶಿಗೆ ಹೋಗಿ ಅಭಿವೃದ್ಧಿ ಮಾಡಿದ್ದಾರೆ. ಹಿಂದೊಮ್ಮೆ ತಾಯಿ ಜೊತೆ ಗಂಗಾ ನದಿಗೆ ಹೋಗಿದ್ದೆ. ಆಗ ನಾವು ನೀರನ್ನು ಪ್ರೋಕ್ಷಿಸಿ ಬಂದಿದ್ದೆವು. ಈಗ ಪ್ರಧಾನಿಯವರು ಗಂಗಾ ನದಿಯನ್ನು ಶುದ್ಧೀಕರಿಸಿದ್ದಾರೆ. ಇದನ್ನು ಮೊದಲು ಯಾರಾದರೂ ಮಾಡಿದ್ದರೆ ಟೀಕೆ ಮಾಡುತ್ತಿದ್ದರು ಎಂದರು.
ನಮ್ಮ ಧರ್ಮದಲ್ಲಿ ವಿಶ್ವಾಸ ಇಡುವ ಪ್ರಧಾನಿ ಇವತ್ತು ಸಿಕ್ಕಿದ್ದಾರೆ. ಅದೇ ರೀತಿ ಅಯೋಧ್ಯಾದಲ್ಲಿ ಅದ್ಭುತವಾದ ಮಂದಿರ ನಿರ್ಮಾಣವಾಗುತ್ತಿದ್ದು, ಚಾರಧಾಮ್, ಬದರೀನಾಥ, ಕೇದಾರನಾಥ, ಗಂಗೋತ್ರಿ ಎಲ್ಲ ಅದ್ಭುತ ಪರಿವರ್ತನೆ ಆಗುತ್ತಿದೆ ಎಂದರು. ಅಲ್ಲದೆ, ಜಗತ್ತಿನ ಜಾಗತಿಕ ವಿದ್ಯಮಾನದಿಂದ ಕೆಲ ಸಮಸ್ಯೆಗಳು ದೇಶದಲ್ಲಿದೆ. ಸ್ವಲ್ಪ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಕೊವಿಡ್ ಬಳಿಕ ಇಡೀ ಜಗತ್ತಿನಲ್ಲೇ ನಮ್ಮ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದರು.
ಭಾರತ ಇಂದು ಎಲ್ಲಾ ಹಂತಗಳಲ್ಲಿ ಪರಿವರ್ತನೆಯಾಗುತ್ತಿದೆ. ಜಗತ್ತಿನ ಯಾವುದೇ ದೇಶಗಳು ನಮ್ಮ ಜೊತೆ ಮಾತನಾಡುತ್ತಿದ್ದಾರೆ. ರಷ್ಯಾ ಮತ್ತು ಯುಎಸ್ ನಡುವೆ ಜಗಳ ಇದೆ. ಆದರೂ ಇಬ್ಬರಿಗೂ ನಮ್ಮ ಜೊತೆ ಮಾತನಾಡುವ ಸ್ಥಿತಿ ನಿರ್ಮಾಣ ಆಗಿದೆ. ಇತ್ತ ಉಕ್ರೇನ್ ಅಧ್ಯಕ್ಷರೂ ಮಾತನಾಡುತ್ತಾರೆ. ಯುದ್ಧವನ್ನು ನಿಲ್ಲಿಸಿ ನಮ್ಮ ವಿದ್ಯಾರ್ಥಿಗಳನ್ನು ಕರೆತಂದ ಕೀರ್ತಿ ನಮಗಿದೆ. ಇಂಥ ಕಠಿಣ ನಿರ್ಧಾರವನ್ನು ಕೈಗೊಂಡ ಇನ್ನೊಂದು ದೇಶ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ
ಬಸವರಾಜ ಬೊಮ್ಮಾಯಿ ಅವರು ಕಾಮನ್ ಮ್ಯಾನ್ ಸಿಎಂ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಧಾರವಾಡದ ಚನ್ನಬಸವೇಶ್ವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದಿನವರಿಗಿಂತ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ. ಆಗಿನ ವ್ಯವಸ್ಥೆಗಳ ಕಾರಣದಿಂದ ಭಾರಿ ಭದ್ರತೆ ಇರುತ್ತಿತ್ತು. ಬೊಮ್ಮಾಯಿವರು ಬಂದ ಮೇಲೆ ಅದೆಲ್ಲವೂ ಬಂದ್ ಆಗಿದೆ. ಬೊಮ್ಮಾಯಿಯವರು ಹೇಳಿದರು ಎಂಬ ಕಾರಣಕ್ಕೆ ಬಂದ್ ಮಾಡಿದ್ದಾರೆ. ಈಗ ದಾರಿ ಮಧ್ಯೆ ಬರುವಾಗ ಓರ್ವ ನಿಲ್ಲಿಸಿ ಕೈಕುಲುಕಿ ಹೋದ. ಇದೆಲ್ಲಾ ಮೊದಲ್ಲೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎಂದರು.