ಕೆಲಸಕ್ಕೆ ಒಂದು ದಿನವೂ ರಜೆ ಹಾಕದೆ ವಿಶ್ವ ದಾಖಲೆ ಬರೆದ ಧಾರವಾಡದ ನಿವೃತ್ತ ಬ್ಯಾಂಕ್​ ನೌಕರ

ಮೂರೂವರೆ ದಶಕಗಳ ಕಾಲ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದರೂ ಒಂದು ದಿನವೂ ರಜೆ ಪಡೆಯದೇ ಅಶೋಕ ಬಾಬರ್ ಕೆಲಸ ಮಾಡಿದ್ದಾರೆ. ತಂದೆ ತೀರಿಕೊಂಡಾಗಲೂ ಬ್ಯಾಂಕ್ ಕೆಲಸದ ಅವಧಿ ಮುಗಿಸಿದ ಬಳಿಕವೇ ಹೋಗಿ ಅಂತ್ಯಕ್ರಿಯೆ ಮಾಡಿದ್ದರು.

ಕೆಲಸಕ್ಕೆ ಒಂದು ದಿನವೂ ರಜೆ ಹಾಕದೆ ವಿಶ್ವ ದಾಖಲೆ ಬರೆದ ಧಾರವಾಡದ ನಿವೃತ್ತ ಬ್ಯಾಂಕ್​ ನೌಕರ
ಅಶೋಕ ಬಾಬರ್
Updated By: sandhya thejappa

Updated on: Apr 18, 2021 | 11:35 AM

ಧಾರವಾಡ: ಸರ್ಕಾರಿ ನೌಕರಿ ಸಿಕ್ಕರೆ ಸಾಕು ಅನೇಕರು ಸೋಮಾರಿಗಳಾಗಿ ಬಿಡುತ್ತಾರೆ. ಇನ್ನು ಯಾರ ಮಾತು ಕೇಳದಂತೆ ವರ್ತಿಸುವ ಅನೇಕ ಮಂದಿ ಸರ್ಕಾರಿ ನೌಕರಿಯಲ್ಲಿ ಇದ್ದಾರೆ. ಆದರೆ ಧಾರವಾಡದ ಬ್ಯಾಂಕಿನಲ್ಲಿ ಕೆಲಸ ಮಾಡುವ ವ್ಯಕ್ತಿ ಒಬ್ಬರು ಎಲ್ಲರಿಗಿಂತ ಭಿನ್ನವಾಗಿದ್ದು, ಇವರ ಕಾರ್ಯಕ್ಕೆ ಸದ್ಯ ವಿಶ್ವ ದಾಖಲೆ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆ. 62 ವರ್ಷದ ಅಶೋಕ ಬಾಬರ್ ಧಾರವಾಡದ ವಿಜಯಾ ಬ್ಯಾಂಕ್​ನಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದಾರೆ.

35 ವರ್ಷ 6 ತಿಂಗಳ ಕಾಲ ಬ್ಯಾಂಕ್​ನಲ್ಲಿ ಸೇವೆ ಸಲ್ಲಿಸಿದ  ಅಶೋಕ ಬಾಬರ್  ವಿಶೇಷತೆ ಎಂದರೆ ಇವರು ಒಂದು ದಿನವೂ ಕೂಡ ಕೆಲಸಕ್ಕೆ ರಜೆಯನ್ನೇ ಹಾಕಿಲ್ಲ. ಎಲ್ಲ ನೌಕರರಿಗೆ ಇರುವಂತೆ ಇವರಿಗೂ ರಜೆಗಳ ಸೌಲಭ್ಯ ಇತ್ತು. ಆದರೆ ಈ ದೀರ್ಘಾವಧಿ ಸೇವೆಯ ಸಂದರ್ಭದಲ್ಲಿ ಅಶೋಕ ಬಾಬರ್ ಒಂದೇ ಒಂದು ರಜೆಯನ್ನು ಪಡೆದಿಲ್ಲ. ಎಂಥ ಸಂದರ್ಭ ಬಂದರೂ ರಜೆ ಪಡೆಯದೇ ಸೇವೆ ನೀಡಿದ ಇವರ ಹೆಸರು ಇದೀಗ ಗೋಲ್ಡನ್ ಬುಕ್ ಆಫ್​ ವರ್ಲ್ಡ್ ರೆಕಾರ್ಡ್​ನಲ್ಲಿ ಸೇರಿದೆ.

ಅಶೋಕ ಬಾಬರ್ ಮುಂಚೆಯಿಂದಲೂ ವಿಚಿತ್ರ ಸ್ವಭಾವದ ವ್ಯಕ್ತಿ. ತಮಗೆ ವಹಿಸಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡುವುದರ ಜೊತೆಗೆ ಬ್ಯಾಂಕಿಗೆ ಬರುವ ಗ್ರಾಹಕರಿಗೂ ಕೂಡ ಅತ್ಯುತ್ತಮ ಸೇವೆ ನೀಡುತ್ತಾ ಬಂದಿದ್ದಾರೆ. ಮೂರೂವರೆ ದಶಕಗಳ ಕಾಲ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದರೂ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ತಂದೆ ತೀರಿಕೊಂಡಾಗಲೂ ಬ್ಯಾಂಕ್ ಕೆಲಸದ ಅವಧಿ ಮುಗಿಸಿದ ಬಳಿಕ ಹೋಗಿ ಅಂತ್ಯಕ್ರಿಯೆ ಮಾಡಿದ್ದರು.

ಅಶೋಕ ಬಾಬರ್ ಮತ್ತು ಅವರ ಪತ್ನಿ

ಇನ್ನು ಒಂದು ಬಾರಿ ಮಂಗವೊಂದು ಇವರಿಗೆ ಕಚ್ಚಿತ್ತು. ಆಗಲೂ ಕೂಡ ಚಿಕಿತ್ಸೆ ಪಡೆದವರೇ ಕೆಲಸಕ್ಕೆ ಹಾಜರಾಗಿದ್ದರು. ಇದೆಲ್ಲಕ್ಕಿಂತ ದೊಡ್ಡ ಸಂಗತಿ ಅಂದರೆ, ಒಂದು ಬಾರಿ ಅಶೋಕ ಬಾಬರ್ ಅಪಘಾತಕ್ಕೆ ಒಳಗಾಗಿದ್ದರು. ಬ್ಯಾಂಕ್ ನವರು ಕೆಲಸಕ್ಕೆ ಬರಲೇ ಬೇಡಿ ಎಂದು ಹೇಳಿದರೂ ವೈದ್ಯರ ಚಿಕಿತ್ಸೆ ಪಡೆದು ಕೆಲಸಕ್ಕೆ ಹಾಜರಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈ ನಿಟ್ಟಿನಲ್ಲಿ ಅಶೋಕ ಬಾಬರ್ ಅವ​ರಿಗೆ ಈ ಹಿಂದೆ ಏಶಿಯಾ ಬುಕ್ ಆಫ್ ರಿಕಾರ್ಡ್, ಇಂಡಿಯಾ ಬುಕ್ ಆಫ್ ರಿಕಾರ್ಡ್ ದಾಖಲೆಗಳು ಬಂದಿದ್ದು, ಈಗ ಹೊಸದೊಂದು ಪ್ರಶಸ್ತಿ ಬಂದಿದೆ.

ಸಾಮಾನ್ಯವಾಗಿ ನೌಕರರು ತಮ್ಮ ಯಾವುದೇ ರಜೆಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದು ಸರ್ಕಾರಿ ನೌಕರಿ ಇರಬಹುದು ಅಥವಾ ಖಾಸಗಿ ನೌಕರಿ ಇರಬಹುದು. ಅದರಲ್ಲೂ ಸರ್ಕಾರಿ ನೌಕರರಂತೂ ಯಾವುದೇ ರಜೆಯನ್ನು ಕಳೆದುಕೊಳ್ಳದೇ ಎಂಜಾಯ್ ಮಾಡಲು ನೋಡುತ್ತಿರುತ್ತಾರೆ. ಅಂಥವರ ನಡುವೆ ಈ ವಿಜಯ ತುಂಬಾನೇ ವಿಭಿನ್ನವಾಗಿ ಕಂಡು ಬರುತ್ತಾರೆ. ಇಂಥ ವ್ಯಕ್ತಿಗೆ ಗಿನ್ನಿಸ್ ದಾಖಲೆಯ ಗರಿ ಸಿಕ್ಕಿದ್ದು, ಅವರ ಶ್ರದ್ಧೆ, ಪ್ರಾಮಾಣಿಕತೆ ಸಂದ ಗೌರವವೇ ಸರಿ.

ಇದನ್ನೂ ಓದಿ:

ನಿವೃತ್ತಿ ಅಂಚಿನಲ್ಲಿದ್ದರೂ ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರು! ಮುಷ್ಕರದ ಮಧ್ಯೆ ಕರ್ತವ್ಯ ನಿಷ್ಠೆ ಮೆರೆದ ಇಬ್ಬರಿಗೆ ಸನ್ಮಾನ

ನಿವೃತ್ತ ಕಂದಾಯ ಅಧಿಕಾರಿಯ ಹಸಿರು ಪ್ರೇಮ; ಮನೆಯ ಮಹಡಿಯ ಮೇಲೆ ನಿರ್ಮಾಣವಾಗಿದೆ ಮಿನಿ ಲಾಲ್​ಬಾಗ್

(Dharwad retired bank employee hasnt taken single day leave in his work time)