ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆ ರಗಳೆ: ಸ್ಮಶಾನದಲ್ಲಿ ಜೀವಂತವಾದ ಮಗು, ಕೊನೆಗೂ ಮನೆಯಲ್ಲಿ ಕೊನೆಯುಸಿರೆಳೆಯಿತು

| Updated By: ಸಾಧು ಶ್ರೀನಾಥ್​

Updated on: Aug 18, 2023 | 1:04 PM

ಬಾಲಕ ಆಕಾಶ್ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಗದಗ ಹಾಗೂ ಧಾರವಾಡ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಗು ಅದು. ಕಳೆದ ಕೆಲ ದಿನಗಳ ಹಿಂದೆ ಆಕಾಶನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ನಿನ್ನೆ ಗುರುವಾರ ಸಂಜೆ ಕಿಮ್ಸ್ ವೈದ್ಯರು ಹೃದಯ ಬಡಿತ ನಿಂತಿದೆ ಎಂದಿದ್ರು. ಆದ್ರೆ ಮಗು ಸ್ಮಶಾನದಲ್ಲಿ ಜೀವಂತವಾಗಿತ್ತು. ಬಾಲಕನ ಮೇಲೆ ನೀರು ಹಾಕೋವಾಗ ಅದು ಉಸಿರಾಡತೊಡಗಿತ್ತು.

ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆ ರಗಳೆ: ಸ್ಮಶಾನದಲ್ಲಿ ಜೀವಂತವಾದ ಮಗು, ಕೊನೆಗೂ ಮನೆಯಲ್ಲಿ ಕೊನೆಯುಸಿರೆಳೆಯಿತು
ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು ಸ್ಮಶಾನದಲ್ಲಿ ಜೀವಂತ!
Follow us on

ಹುಬ್ಬಳ್ಳಿ, ಆಗಸ್ಟ್​ 18: ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು (child) ಸ್ಮಶಾನಕ್ಕೆ (graveyard) ಹೋಗುವ ವೇಳೆಗೆ ಜೀವಂತವಾಗಿ ಎದ್ದುಕೂತಿದೆ!! ಹೌದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (Hubballi  Kims Hospital) ಮೃತಪಟ್ಟಿದ್ದ ಮಗು ಸ್ಮಶಾನದಲ್ಲಿ ಉಸಿರಾಡತೊಡಗಿದೆ. ಧಾರವಾಡ ಜಿಲ್ಲೆಯ ಬಸಾಪೂರದ ಒಂದೂವರೆ ವರ್ಷದ ಮಗು ಆಕಾಶ್ ಬಸವರಾಜ್ ಪೂಜಾರ ಹೀಗೆ ಪವಾಡಸದೃಷವಾಗಿ ಬದುಕುಳಿದ ಬಾಲಕ! ಬಾಲಕ ಆಕಾಶ್ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಗದಗ ಹಾಗೂ ಧಾರವಾಡ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಗು ಅದು. ಕಳೆದ ಕೆಲ ದಿನಗಳ ಹಿಂದೆ ಆಕಾಶನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು.

ನಿನ್ನೆ ಗುರುವಾರ ಸಂಜೆ ಕಿಮ್ಸ್ ವೈದ್ಯರು ಹೃದಯ ಬಡಿತ ನಿಂತಿದೆ ಎಂದಿದ್ರು. ಆದ್ರೆ ಮಗು ಸ್ಮಶಾನದಲ್ಲಿ ಜೀವಂತವಾಗಿತ್ತು. ಬಾಲಕನ ಮೇಲೆ ನೀರು ಹಾಕೋವಾಗ ಅದು ಉಸಿರಾಡತೊಡಗಿತ್ತು. ಮಗು ಬದುಕುಳಿದ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಮತ್ತೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನಿಗೆ ಸದ್ಯ ಕಿಮ್ಸ್ ನ ICU ನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೊನೆಗೂ ಕೊನೆಯುಸಿರೆಳೆದ ಬಾಲಕ:

ಹೈಡ್ರೋ ಸೆಫಲಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಆಕಾಶ್ ಬಸವರಾಜ್ ಪೂಜಾರ ಎಂಬ ಒಂದೂವರೆ ವರ್ಷದ ಮಗು ಕೊನೆಗೂ ಉಸಿರು ಚೆಲ್ಲಿದೆ. ಅಣ್ಣಿಗೇರಿ ತಾಲ್ಲೂಕಿನ ಬಸಾಪುರ ಗ್ರಾಮದ ಮಗು ಆಗಸ್ಟ್ 13 ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ನಿನ್ನೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವ ವೇಳೆ ಮಗು ಜೀವಂತವಿರೋದು ಗೊತ್ತಾಗಿತ್ತು. ನಂತರ ಪಾಲಕರು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಮಗು ಬದುಕೋದು ಅನುಮಾನ ಎಂದು ಕಿಮ್ಸ್ ನ ವೈದ್ಯರು ತಿಳಿಸಿದ್ದರು. ಪಾಲಕರು ಬಾಲಕನನ್ನು ನಿನ್ನೆ ಗುರುವಾರ ತಡರಾತ್ರಿ ಮರಳಿ ಮನೆಗೆ ಕರೆತಂದಿದ್ದರು. ಇದೀಗ ಆಕಾಶ ಕೊನೆಯುಸಿರೆಳೆದಿದ್ದಾನೆ. ಕುಟುಂಬಸ್ಥರು ಇದೀಗ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಮಗು ಸ್ಮಶಾನದಲ್ಲಿ ಜೀವಂತ! ಕಿಮ್ಸ್ ಆಸ್ಪತ್ರೆ ವಿವರಣೆ-ಸ್ಪಷ್ಟನೆ ಹೀಗಿದೆ:

ಶವ ಸಂಸ್ಕಾರದ ವೇಳೆ ಬಾಲಕ ಬದುಕಿ ಎದ್ದು ಬಂದ ಪ್ರಕರಣದ ಬಗ್ಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವಿವರಣೆ ನೀಡಿದೆ – ಆಸ್ಪತ್ರೆಯಲ್ಲಿ ಬಾಲಕ ಸಾವಿನಪ್ಪಿರುವ ಬಗ್ಗೆ ನಾವು ಹೇಳಿಲ್ಲ. ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬಾಲಕ ಇನ್ನೂ ಬದುಕೇ ಇದ್ದ ಎಂದು ಕಿಮ್ಸ್ ನಿರ್ದೇಶಕ ಡಾ ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ.

ಆದರೆ ಬಾಲಕನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು. ಬಾಲಕ ಚಿಕಿತ್ಸೆಗೆ ಸ್ಪಂದನ ಮಾಡುತ್ತಿರಲಿಲ್ಲ. ನಾವು ಬಾಲಕನ ಪರಿಸ್ಥಿತಿ ವಿವರಣೆ ಮಾಡಿ ಬದುಕುವುದು ಕಷ್ಟ ಅಂತ ಹೇಳಿದ್ದೆವು. ಹೀಗಾಗಿ ಸ್ವ ಇಚ್ಛೆಯಿಂದ ಬಾಲಕನ ಪಾಲಕರು ಆಸ್ಪತ್ರೆಯಿಂದ ಕರೆದುಕೊಂಡು ಹೋಗಿದ್ದರು.

ಕಿಮ್ಸ್ ಆಸ್ಪತ್ರೆಯಿಂದ ಬಾಲಕ ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ. ಮನೆಗೆ ಹೋಗಿ ಕೆಲವು ಗಂಟೆಗಳ ಬಳಿಕ ಬಾಲಕನನ್ನು ಮತ್ತೆ ಕರೆದುಕೊಂಡು ಬಂದರು. ನಾವು ಅಡ್ಮಿಟ್ ಮಾಡುವಂತೆ ಹೇಳಿದ್ದೆವು. ಆದರೆ ಅವರು ಬೇಡ ಅಂತ ಮತ್ತೆ ವಾಪಸು ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿರಿಲ್ಲ. ಸುಮ್ಮನೆ ಮಧ್ಯೆ ಇರೋರು ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ವಿವರಣೆ ನೀಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Fri, 18 August 23