ಹುಬ್ಬಳ್ಳಿಯಲ್ಲಿ ಮತ್ತೊಂದು ಗ್ಯಾಂಗ್​ವಾರ್​ಗೆ ನಡೆದಿದ್ಯಾ ತಯಾರಿ? ಕೊಲೆ ಸಂಚು ಆರೋಪದಡಿ ಕೇಸ್ ಬುಕ್

| Updated By: ಆಯೇಷಾ ಬಾನು

Updated on: Jun 30, 2024 | 2:08 PM

ಹುಬ್ಬಳ್ಳಿಯ ಸೆಟ್ಲಮೆಂಟ್ ನಿವಾಸಿಯಾಗಿರುವ ಅಭಿಷೇಕ್ ಜಾಧವ್ ಎಂಬುವವರ ಮೇಲೆ 8 ಜನರ ಗುಂಪು ದಾಳಿ ಮಾಡಲು ಯತ್ನಿಸಿದೆ. ಆರೋಪಿಗಳು ಅಭಿಷೇಕ್ ಅವರನ್ನು ಅಡ್ಡಗಟ್ಟಿ ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ. ಸದ್ಯ ಘಟನೆ ಸಂಬಂಧ ದೂರು-ಪ್ರತಿ ದೂರು ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ಮತ್ತೊಂದು ಗ್ಯಾಂಗ್​ವಾರ್​ಗೆ ನಡೆದಿದ್ಯಾ ತಯಾರಿ? ಕೊಲೆ ಸಂಚು ಆರೋಪದಡಿ ಕೇಸ್ ಬುಕ್
ಫಿಲೋಮಿನ್ ಪೌಲ್, ಸುಂದರ್ ಪೌಲ್, ಅಭಿಷೇಕ್ ಜಾಧವ್
Follow us on

ಹುಬ್ಬಳ್ಳಿ, ಜೂನ್.30: ಹುಬ್ಬಳ್ಳಿಯಲ್ಲಿ ಮತ್ತೊಂದು ಗ್ಯಾಂಗ್​ವಾರ್​ಗೆ (Gang War) ನಡೆದಿದ್ಯಾ ತಯಾರಿ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ ಕೊಲೆ ಸಂಚು ಆರೋಪದಡಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಗನ್ (Gun)ತೋರಿಸಿ‌ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಸುಂದರ್ ಪೌಲ್ & ಗ್ಯಾಂಗ್​ ವಿರುದ್ಧ ಅಭಿಷೇಕ್ ಜಾಧವ್ ಎಂಬುವವರು ದೂರು ದಾಖಲಿಸಿದ್ದಾರೆ.

ಹುಬ್ಬಳ್ಳಿಯ ಸೆಟ್ಲಮೆಂಟ್ ನಿವಾಸಿಯಾಗಿರುವ ಅಭಿಷೇಕ್ ಜಾಧವ್ ಅವರು ಸುಂದರ್ ಪೌಲ್, ಫಿಲೋಮಿನ್ ಪೌಲ್, ಚಂದ್ರ ಪೌಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಜೂನ್​ 5ರ ತಡರಾತ್ರಿ ಸನಾದಿ ಅಪ್ಪಣ್ಣ ಸರ್ಕಲ್ ಬಳಿ 8 ಜನರ ಗ್ಯಾಂಗ್ ಗನ್ ತೋರಿಸಿ ಧಮ್ಕಿ ಹಾಕಿದ್ದರು. ಕಾರಲ್ಲಿ ಬಂದಿದ್ದ 8 ಜ‌ನರ ಗ್ಯಾಂಗ್ ಅಭಿಷೇಕ್ ಅವರಿಗೆ ಅವಾಚ್ಯವಾಗಿ ನಿಂದಿಸಿ ಧಮ್ಕಿ ಹಾಕಿದ್ದರು. ಹುಬ್ಬಳ್ಳಿಗೆ ನಾವೇ ಡಾನ್​ಗಳೆಂದು ಅಭಿಷೇಕ್​ಗೆ ಬೆದರಿಸಿದ್ದರು. ನಮ್ಮ ಬಳಿ ಗನ್​ಗಳಿವೆ, ನೀನು ಹೊರಗಡೆ ಓಡಾಡು ನೋಡ್ಕೋತೀವಿ ಎಂದು ಅಭಿಷೇಕ್​ಗೆ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಅಭಿಷೇಕ್ ಜೂ.27ರಂದು ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು.

ಸದ್ಯ ಅಭಿಷೇಕ್ ಜಾಧವ್ ದೂರಿನಡಿ IPC 1860, 109, 120B, 504, 506 ಹಾಗೂ 109ರ ಸೆಕ್ಷನ್ ಅಡಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಇತ್ತ ವಿದ್ಯಾನಗರ ಠಾಣೆಯಲ್ಲಿ ಅಭಿಷೇಕ್‌ ಜಾಧವ್ ಸೇರಿ ನಾಲ್ವರ ವಿರುದ್ಧವೂ ಕೇಸ್ ದಾಖಲಾಗಿದೆ. ಸುಂದರ್ ಪೌಲ್ ಎಂಬುವರ ದೂರಿನ ಅನ್ವಯ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಸಾಲಗಾರರಿಂದ ಬೆದರಿಕೆ: ಸಿಸಿಬಿ ಪೊಲೀಸರಿಗೆ ನಿರ್ಮಾಪಕ ಪುಷ್ಕರ್ ದೂರು

ಮಿನಿಬಸ್-ಕಾರಿನ ಮಧ್ಯೆ ಡಿಕ್ಕಿ.. ಚಾಲಕ ಸಾವು

ಮಿನಿಬಸ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ, ಕಾರು ಚಾಲಕ ಮೃತಪಟ್ಟಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಗೆಜ್ಜಗದಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬಸ್​ನಲ್ಲಿದ್ದ 25 ಜನರ ಪೈಕಿ 5ಜನ ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಕಳಿ ಗೋಲ್ಡನ್ ಸಿಮ್ಸ್ ಗಾರ್ಮೆಂಟ್​ನಿಂದ ಬರುತ್ತಿದ್ದ ಮಿನಿ ಬಸ್, ಗೆಜ್ಜಗದಹಳ್ಳಿ ಗ್ರಾಮದ ಬಳಿ ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ನವೀನ್ ಎಂಬಾತ ಮೃತಪಟ್ಟಿದ್ದಾನೆ.

ಕಡಲ್ಕೊರೆತಕ್ಕೆ ನೆಲಕ್ಕುರುಳಿದ ಮನೆ, ಮರಗಳು

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಕಡಲ ಅಬ್ಬರಕ್ಕೆ ಅಂಕೋಲ ತಾಲೂಕಿನ ಹಾರವಾಡದಲ್ಲಿ ಕಡಲ ಕೊರೆತ ಉಂಟಾಗಿದ್ದು, ಕಡಲಕೊರೆತಕ್ಕೆ ತೆಂಗಿನ ಮರಗಳು ನೆಲಕ್ಕುರುಳಿವೆ. ಇದಲ್ದೇ ತರಂಗ ಮೇಟ್ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಸದ್ಯ ಕಡಲಕೊರೆತದಿಂದ ಸಮುದ್ರ ಭಾಗದ ಜನರಿಗೆ ಆತಂಕ ಎದುರಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು  ಇದರ ಮೇಲೆ ಕ್ಕಿಕ್ ಮಾಡಿ