ಗಣೇಶ, ಅಯ್ಯಪ್ಪ, ಶಿವ-ಪಾರ್ವತಿ ಬಗ್ಗೆ ಲೇವಡಿ: ವಿವಾದದ ಕಿಡಿ ಹೊತ್ತಿಸಿದ ಲಲಿತಾ ನಾಯಕ್

ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ್ ಅವರು ಮತ್ತೆ ಹಿಂದೂ ದೇವರುಗಳ ಬಗ್ಗೆ ಲೇವಡಿಯಾಗಿ ಮಾತನಾಡಿದ ವಿವಾದಕ್ಕೀಡಾಗಿದ್ದಾರೆ. ಧಾರವಾಡದಲ್ಲಿ ನಡೆದ 'ಧರೆಗೆ ದೊಡ್ಡವರು' ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಬಿ.ಟಿ. ಲಲಿತಾ ನಾಯಕ್ ಅವರು ಗಣೇಶ ಸೇರಿದಂತೆ ಇತರೆ ದೇವರುಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಧಾರವಾಡ, (ನವೆಂಬರ್ 20): ಬಿ.ಟಿ. ಲಲಿತಾ ನಾಯಕ್ ಅವರು ಮತ್ತೆ ಹಿಂದೂ ದೇವರುಗಳ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶ, ಶಿವ, ಪಾರ್ವತಿ ಮತ್ತು ಅಯ್ಯಪ್ಪನ ಬಗ್ಗೆ ಲೇವಡಿ ಮಾಡಿದ್ದಾರೆ. ಗಣೇಶ, ಶಿವ, ಪಾರ್ವತಿ ಮತ್ತು ಅಯ್ಯಪ್ಪನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅಲ್ಲದೇ  ಭಾರತಾಂಬೆ ದೇವಿ ಪೂಜಿಸೋಣ ಬಾರಾ ಎಂದು ಕುವೆಂಪು ಹೇಳಿರುವುದನ್ನು ತಪ್ಪು ಎಂದಿದ್ದಾರೆ.

ಗಣೇಶ ಅನ್ನೋದು ಒಂದು ಜ್ಞಾನ. ಆ ಜ್ಞಾನಕ್ಕೆ ಒಂದು ಆಕಾರ ಕೊಟ್ಟಿದ್ದಾರೆ. ಅದಕ್ಕೆ ಒಂದು ಸೊಂಡಿಲು, ತಲೆ ಇದೆ. ಈಶ್ವರ ಅನ್ನುವಂತಹ ಅಪ್ಪ ಇದ್ದಾನೆ. ದೇವರು ಯಾರನ್ನಾದರೂ ಕೊಲ್ಲುತ್ತಾನಾ? ಧರೆಯಿಂದ ಆಕಾಶದೆತ್ತರಕ್ಕೆ ಬೆಳೆದವನು ದೇವರು. ಅಣುರೇಣು ತೃಣಕಾಷ್ಠದಲ್ಲಿಯೂ ದೇವರಿದ್ದಾನಂತೆ. ಹಾಗಾದ್ರೆ ಪಾರ್ವತಿಯ ಬಚ್ಚಲು ಮನೆಯಲ್ಲಿ ದೇವರು ಇರೋಲ್ವಾ? ಹುಡುಗ ಅಡ್ಡ ನಿಂತಿದ್ದಾನಂತ ಕೊಂದು ಹೋಗುವವನ್ನು ದೇವರು ಅನ್ನೋದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಅವರೆಲ್ಲ ದೇವರಲ್ಲ, ಮನುಷ್ಯರು. ಆ ಮನುಷ್ಯ ಮಾಡಿರೋ ತಪ್ಪನ್ನು ನಾವು ಮಾಡಬಾರದು. ಅಯ್ಯಪ್ಪ ಭಕ್ತರು ಅಂತಾ ಕೆಲವರು ಬಹಳ ಮಾಡುತ್ತಿರುತ್ತಾರೆ. ಆದರೆ ಅಯ್ಯಪ್ಪ ಕಾಡಿನಲ್ಲಿ ಇಲ್ಲ. ಅಯ್ಯಪ್ಪ ಎಲ್ಲ ಕಡೆ ಅನಾಥವಾಗಿ ಇದ್ದಾನೆ. ಅನೇಕ ಅನಾಥ ಮಕ್ಕಳಿದ್ದಾರೆ. ಅವರಿಗೆ ತಂದೆ-ತಾಯಿ ಇಲ್ಲ. ಅವರನ್ನು ನೋಡಿಕೊಳ್ಳುವ ಕೆಲಸ ಆಗಬೇಕು. ಅದನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಅಲ್ಲಿ ಕಾಡು ಕಡಿದು ಪುರೋಹಿತಶಾಹಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲೆಲ್ಲ ತಲೆಯ ಮೇಲೆ ಏನೇನೋ ಹೊತ್ತುಕೊಂಡು ಹೋಗ್ತಾರೆ. ಜಯಮಾಲಾ ಏನೋ ಮುಟ್ಟಿದ್ರಂತೆ. ಮಟ್ಟಿದ ಕೂಡಲೇ ಮೈಲಿಗೆ ಆಯ್ತು ಅಂದ್ರು. ಕುಳಿತಿರೋ ಮೂರ್ತಿಗೆ ಯಾರು ಮುಟ್ಟಿದ್ರು ಒಂದೇ ಮುಟ್ಟದಿದ್ದರೂ ಒಂದೇ. ಸಂಕೇತಗಳು ಯಾವತ್ತೂ ಸತ್ಯವಲ್ಲ. ಸಂಕೇತಗಳು ಸಂಕೇತ ಅಷ್ಟೆ ಎಂದು ವ್ಯಂಗ್ಯವಾಡಿದರು.

ದೇಶದ ಬಾವುಟವನ್ನು ನಾವು ಗೌರವಿಸುತ್ತೇವೆ. ಆದರೆ ಆ ಬಾವುಟ ದೇಶವಲ್ಲ. ಅದು ದೇಶದ ಜನಗಳ ಪ್ರತೀಕ. ಬಾವುಟ ಹಾಕಿಕೊಂಡು ಒಂದ ವರ್ಷ ಪೂಜೆ ಮಾಡಿ ಏನಾದರೂ ಆಗುತ್ತದೆಯಾ? ಏನೂ ಆಗುವುದಿಲ್ಲ. ಈ ಪರಿಸರವೇ ದೇವರು. ಭಾರತಾಂಬೆ ದೇವಿ ಪೂಜಿಸೋಣ ಬಾರಾ ಎಂದು ಕುವೆಂಪು ಹೇಳಿದ್ದರು. ಅದು ಕೂಡ ಈಗ ತಪ್ಪಾಗಿದೆ. ಒಂದು ಕಿರೀಟ ಹಾಕಿರೋ ದೇವರು, ನಾಲ್ಕು ಕೈ ಅದಕ್ಕೆ ಪೂಜೆ ಮಾಡಿ ಕುವೆಂಪು ಮಾತು ಪಾಲಿಸುತ್ತೇವೆ ಅಂತಾರೆ. ಅದೂ ತಪ್ಪು ಎಂದರು.

ಸೀತೆಯನ್ನು ಬೆಂಕಿಗೆ ದೂಡಿದರು. ಬದುಕಿದ್ಳು, ದೈವಿ ಸ್ವರೂಪ ಅಂತಾರೆ. ಅದು ಹಾಗಲ್ಲ. ಸೀತೆ ಬೆಂಕಿಯಲ್ಲಿ ಸುಟ್ಟು ಹೋಗಿದ್ದಳು. ಬಳಿಕ ಮಣ್ಣು ಮಾಡಿದರು. ಅದನ್ನೇ ಭೂತಾಯಿ ಕೈ ಹಿಡಿದು ಎತ್ತಿತ್ತು ಅಂತಾರೆ. ಅದೆಲ್ಲ ಏನೂ ಅಲ್ಲ. ಅವರೆಲ್ಲ‌ ಮನುಷ್ಯರೇ ಎಂದು ಹೇಳಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us