ಹುಚ್ಚು ನಾಯಿ ಕಚ್ಚಿರುವ ವಿಚಾರ ಮುಚ್ಚಿಟ್ಟ ಅಜ್ಜಿ -ಮೊಮ್ಮಗಳು ಬಲಿ, ಮದುವೆ ಮನೆಯಲ್ಲಿ ಚಿಕನ್ ಪೀಸ್ ಗಾಗಿ ಜಗಳ -ಒಬ್ಬನ ಸಾವು

| Updated By: ಸಾಧು ಶ್ರೀನಾಥ್​

Updated on: Mar 09, 2022 | 6:22 PM

ಸೊಸೆ ಮೇಲಿನ ಕೋಪದಿಂದ ಅತ್ತೆ ಜಯಮ್ಮ ಇಂತಹ ಅನಾಹುತಕಾರಿ ವಿಚಾರ ಹೇಳಿಲ್ಲ ಎನ್ನಲಾಗಿದೆ. ರಕ್ತ ವಾಂತಿ ಮಾಡಿಕೊಂಡು ನಿನ್ನೆ ರಾತ್ರಿ ತ್ರಿಷಾ ಅಸುನೀಗಿದ್ದಾಳೆ. ಪುಟ್ಟರಾಜು ಜೊತೆಗೆ ಎರಡು ವರ್ಷದ ಹಿಂದೆ ಚಿಕ್ಕಮ್ಮನ ವಿವಾಹವಾಗಿತ್ತು. ಆದರೆ ಮಗ ಚಿಕ್ಕಮ್ಮಳನ್ನು ವಿವಾಹವಾಗಿದ್ದು ತಾಯಿ ಜಯಮ್ಮಗೆ ಅಸಮಾಧಾನ ತಂದಿತ್ತು.

ಹುಚ್ಚು ನಾಯಿ ಕಚ್ಚಿರುವ ವಿಚಾರ ಮುಚ್ಚಿಟ್ಟ ಅಜ್ಜಿ -ಮೊಮ್ಮಗಳು ಬಲಿ, ಮದುವೆ ಮನೆಯಲ್ಲಿ ಚಿಕನ್ ಪೀಸ್ ಗಾಗಿ ಜಗಳ -ಒಬ್ಬನ ಸಾವು
ಪ್ರಾತಿನಿಧಿಕ ಚಿತ್ರ
Follow us on

ತುಮಕೂರು/ಧಾರವಾಡ: ಎರಡು ವರ್ಷದ ಮೊಮ್ಮಗಳಿಗೆ ಹುಚ್ಚು ನಾಯಿ ಕಚ್ಚಿರುವ ವಿಚಾರವನ್ನು ಅಜ್ಜಿ‌ ಮುಚ್ಚಿಟ್ಟ ಕಾರಣ ಆ ಪುಟ್ಟ ಮಗು ಸಾವಿಗೀಡಾಗಿದ್ದಾಳೆ. ಇಷ್ಟಕ್ಕೂ ಯಾಕಪ್ಪಾ ಅಜ್ಜಿ ತನ್ನದೇ ಮಗುವಿನ ಬಗ್ಗೆ ಹೀಗೆ ಅಸಡ್ಡೆ ತೋರಿದಳು ಅಂದರೆ ಅದಕ್ಕೆ ಕಾರಣವಾಗಿರುವುದು ಸೊಸೆಯ ಮೇಲಿನ ಮುನಿಸು! ಹೌದು ಸೊಸೆ ಮೇಲೆ ಅತ್ತೆಗೆ ಇದ್ದ ಕೋಪಕ್ಕೆ ಮೊಮ್ಮಗಳು ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.

ಹುಚ್ಚು ನಾಯಿ ಕಡಿದು ಚಿಕಿತ್ಸೆ ಫಲಕಾರಿಯಾಗದೆ 2 ವರ್ಷದ ಮಗು ತ್ರಿಷಾ ಮೃತಪಟ್ಟಿದ್ದಾಳೆ. ಹುಚ್ಚು ನಾಯಿ ಕಚ್ಚಿ 1 ತಿಂಗಳು 10 ದಿನದ ನಂತರ ಮಗು ಕೊನೆಯುಸಿರೆಳೆದಿದ್ದಾಳೆ. ಮಗು ತ್ರಿಷಾ, ಅಜ್ಜಿಯ ಜೊತೆಗೆ ಹೊಲದ ಬಳಿ ಹೋಗಿದ್ದಾಗ ಈ ಅನಾಹಿತ ನಡೆದಿತ್ತು. ಹಸು ಮೇಯಿಸುವ ಸಂದರ್ಭದಲ್ಲಿ ಹುಚ್ಚು ನಾಯಿ ಹಸು ಹಾಗೂ ಮಗುವಿಗೆ ಇಬ್ಬರಿಗೂ ಕಚ್ಚಿತ್ತು. ಆದರೆ ಹುಚ್ಚು ನಾಯಿ ಕಚ್ಚಿರುವ ವಿಚಾರವನ್ನು ಅಜ್ಜಿ‌ ಜಯಮ್ಮ ಮುಚ್ಚಿಟ್ಟಿದ್ದಾಳೆ.

ಸೊಸೆ ಮೇಲಿನ ಕೋಪದಿಂದ ಅತ್ತೆ ಜಯಮ್ಮ ಇಂತಹ ಅನಾಹುತಕಾರಿ ವಿಚಾರ ಹೇಳಿಲ್ಲ ಎನ್ನಲಾಗಿದೆ. ರಕ್ತ ವಾಂತಿ ಮಾಡಿಕೊಂಡು ನಿನ್ನೆ ರಾತ್ರಿ ತ್ರಿಷಾ ಅಸುನೀಗಿದ್ದಾಳೆ. ಪುಟ್ಟರಾಜು ಜೊತೆಗೆ ಎರಡು ವರ್ಷದ ಹಿಂದೆ ಚಿಕ್ಕಮ್ಮನ ವಿವಾಹವಾಗಿತ್ತು. ಆದರೆ ಮಗ ಚಿಕ್ಕಮ್ಮಳನ್ನು ವಿವಾಹವಾಗಿದ್ದು ತಾಯಿ ಜಯಮ್ಮಗೆ ಅಸಮಾಧಾನ ತಂದಿತ್ತು.

ಮದುವೆ ಮನೆಯಲ್ಲಿ ಚಿಕನ್ ಪೀಸ್ ಗಾಗಿ ಇಬ್ಬರ ಮಧ್ಯೆ ಜಗಳ, ಸಾವು:
ಇನ್ನು ಅತ್ತ ಧಾರವಾಡದಲ್ಲಿ ಮದುವೆ ಮನೆಯಲ್ಲಿ ಚಿಕನ್ ಪೀಸ್ ಗಾಗಿ ಇಬ್ಬರ ಮಧ್ಯೆ ಜಗಳವಾಗಿದ್ದು ಒಬ್ಬ ಇಹಲೋಕ ತ್ಯಜಿಸಿದ್ದಾನೆ. ಧಾರವಾಡದ ಪೆಂಡಾರಗಲ್ಲಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮದುವೆ ಮನೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಚಿಕನ್ ಪೀಸ್ ಗಾಗಿ ಕಾದಾಡಿದ ಸಾದಿಕ್ ಮತ್ತು ರಿಜ್ವಾನ್ ವಿಕೋಪಕ್ಕೆ ಹೋಗಿದ್ದಾರೆ. ಇಬ್ಬರ ಜಗಳದಲ್ಲಿ ಸಾದಿಕ್ ಬಿಟ್ನಾಳ (30) ಎಂಬುವವರು ಸಾವಿಗೀಡಾಗಿದ್ದಾರೆ. ಮೃತ ಸಾದಿಕ್, ಧಾರವಾಡದ ಲಕ್ಷ್ಮಿ ಸಿಂಗನಕೇರಿ ನಿವಾಸಿ.

ಚಿಕನ್ ಪೀಸ್ ಗಾಗಿ ಇಬ್ಬರ ಮಧ್ಯೆ ಜಗಳವಾದಾಗ ಸಾದಿಕ್ ನನ್ನು ರಿಜ್ವಾನ್ ತಳ್ಳಿದ್ದಾನೆ. ಕೆಳಗಡೆ ಬಿದ್ದ ಸಾದಿಕ್‌ ತಲೆಗೆ ತೀವ್ರವಾಗು ಪೆಟ್ಟು ಬಿದ್ದಿದೆ. ದೂರು ನೀಡಲು ಸಾದಿಕ್ ನ ಮನೆಯವರು ಮೊದಲು ಒಪ್ಪಲಿಲ್ಲ. ಆದರೆ ಕೊನೆಗೆ ಧಾರವಾಡ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ರಿಜ್ವಾನನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:
ನನ್ನ ವಾಸ್ತವ್ಯ ಏನಿದ್ರೂ ನನ್ನ ಜಮೀನಿನಲ್ಲಿ, ಇನ್ಮುಂದೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಹೋಗುವುದಿಲ್ಲ ಎಂದ ಹೆಚ್ಡಿ ಕುಮಾರಸ್ವಾಮಿ

ಇದನ್ನೂ ಓದಿ:
ಪಾರ್ಟಿ ಮಾಡಿ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ, ಕೆರೆಯಲ್ಲಿ ತೆಪ್ಪ ಮುಗುಚಿ ಮೂವರು ಯುವಕರು ಜಲಸಮಾಧಿ

Published On - 6:19 pm, Wed, 9 March 22