ವಿಜಯಪುರ, ಬಾಗಲಕೋಟೆ ಆಯ್ತು ಈಗ ಕನ್ನೇರಿ ಶ್ರೀಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೂ ನಿರ್ಬಂಧ
ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗಾಯತ ಮಠಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ರಾಷ್ಟ್ರವ್ಯಾಪಿ ಸುದ್ಧಿಯಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶಿಸದಂತೆ ಸ್ವಾಮೀಜಿ ಮೇಲೆ ನಿರ್ದಂಧ ಹೇರಲಾಗಿದೆ. ಅದರಂತೆ ಇದೀಗ ಧಾರವಾಡ ಜಿಲ್ಲೆಗೂ ಸ್ವಾಮೀಜಿ ಬರದಂತೆ ನಿಷೇಧಿಸಲಾಗಿದೆ.

ಧಾರವಾಡ, (ನವೆಂಬರ್ 05): ಲಿಂಗಾಯತ ಸ್ವಾಮೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ಸಂಬಂಧ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ (Kanneri Mutt Kadasiddeshwara Swamiji) ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶಿಸದಂತೆ ಇದೀಗ ಧಾರವಾಡ (Dharwad) ಜಿಲ್ಲಾ ಪ್ರವೇಶಕ್ಕೂ ನಿರ್ಬಂಧಿಸಲಾಗಿದೆ. ಕನ್ನೇರಿ ಶ್ರೀಗಳಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ. ನವೆಂಬರ್ 7ರಂದು ಅಣ್ಣಿಗೇರಿಯ ಕಾರ್ಯಕ್ರಮ ಸಂಬಂಧ ಕನ್ನೇರಿ ಶ್ರೀಗಳು ಧಾರವಾಡಕ್ಕೆ ಆಗಮಿಸಬೇಕಿತ್ತು. ಆದ್ರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಡಿಸಿ ಈ ಕ್ರಮ ಕೈಗೊಂಡಿದ್ದಾರೆ.
ನವೆಂಬರ್ 7ರಂದು ಅಣ್ಣಿಗೇರಿಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರಶ್ರೀ ಪಾಲ್ಗೊಳ್ಳಬೇಕಿತ್ತು. ಈ ಸಂಬಂಧ ಪ್ರತಿಬಂಧಕಾಜ್ಞೆ ಆದೇಶ ಹೊರಡಿಸಿಸಲು ಒತ್ತಾಯಿಸಿ ಧಾರವಾಡ ಜಿಲ್ಲೆಯ ಬಸವಪರ ಸಂಘಟನೆಗಳು ಮತ್ತು ಲಿಂಗಾಯತರು ಜಿಲ್ಲಾಧಿಕಾರಿ ಹಾಗೂ ಅಣ್ಣಿಗೇರಿ ತಾಲೂಕು ತಹಶೀಲ್ದಾರರಿಗೂ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಶೀಲಿಸಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಕನ್ನೇರಿ ಶ್ರೀ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಲಿಂಗಾಯತರ ಬಗ್ಗೆ ಅವಹೇಳನಕಾರಿ ಮಾತು: ಕನೇರಿ ಸ್ವಾಮೀಜಿ ಮತ್ತೊಂದು ಶಾಕ್ ಕೊಟ್ಟ ಕೋರ್ಟ್
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನವೆಂಬರ್ 5ರಿಂದ 7ರವರೆಗೆ ಸಹಜಾನಂದ ಸಪ್ತಾಹ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ನವೆಂಬರ್ 7ರಂದು ನಡೆಯುವ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಕನ್ನೇರಿ ಮಠದ ಸ್ವಾಮೀಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಬಸವಪರ ಸಂಘಟನೆಗಳು ಮತ್ತಷ್ಟು ಕೆಂಡಾಮಂಡಲವಾಗಿವೆ. ಈಗಾಗಲೇ ಕಳೆದ ಅಕ್ಟೋಬರ್ 30ರಂದು ಬಸವಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಬೆನ್ನಲ್ಲೇ ನವೆಂಬರ್ 1ರಂದು ಅಣ್ಣಿಗೇರಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಲಿಂಗಾಯತ ಸ್ವಾಮೀಜಿಗಳು, ʼಕನ್ನೇರಿ ಸ್ವಾಮೀಜಿ ಅಣ್ಣಿಗೇರಿ ತಾಲೂಕಿಗೆ ಬರುವುದನ್ನೂ ತಡೆಹಿಡಿಯಬೇಕುʼ ಎಂದು ಅಗ್ರಹಿಸಿದ್ದರು.
ಇದನ್ನೂ ಓದಿ: ವಿಜಯಪುರ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೂ ಕನ್ಹೇರಿ ಶ್ರೀಗೆ ನಿರ್ಬಂಧ: ಮಠ ತೊರೆಯುವಂತೆ ನೋಟಿಸ್
ತಾಲೂಕಿನ ಹಳ್ಳಿಕೇರಿ ಗ್ರಾಮಕ್ಕೆ ಕಳೆದ 8 ವರ್ಷಗಳ ಹಿಂದೆ ಪ್ರಮೋದ್ ಮುತಾಲಿಕ್ ಅವರು ಬಂದುಹೋದ ನಂತರ ಮೂವರು ಕೊಲೆಯಾಗಿದ್ದಾರೆ. ಅಂದಿನಿಂದ ಈ ಗ್ರಾಮವನ್ನು ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಅಶ್ಲೀಲ, ಅವಹೇಳನಕಾರಿ ಹಾಗೂ ಸಂವಿಧಾನಬಾಹಿರ ಹೇಳಿಕೆ ನೀಡಿರುವ ಕನ್ನೇರಿ ಸ್ವಾಮೀಜಿ ವಿರುದ್ಧ ಲಿಂಗಾಯತರು ಆಕ್ರೋಶಗೊಂಡಿದ್ದಾರೆ. ಸ್ವಾಮೀಜಿ ಬಂದರೆ ಅಶಾಂತಿ ಉಂಟಾಗಬಹುದು. ಹೀಗಾಗಿ ಶ್ರೀಗಳಿಗೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




