ಬಾಡಿಗೆ ಕೊಡದ ಏರ್‌ಸೆಲ್ ಹಾಗೂ JTL ಕಂಪನಿಗೆ 50 ಸಾವಿರ ರೂ ದಂಡ ವಿಧಿಸಿದ ಗ್ರಾಹಕರ ಆಯೋಗ

ಬಾಡಿಗೆ ಕೊಡದ ಏರ್‌ಸೆಲ್ ಹಾಗೂ ಜಿ. ಟಿ. ಎಲ್ ಕಂಪನಿಗೆ ಧಾರವಾಡ ಗ್ರಾಹಕರ ಆಯೋಗ ದಂಡ ವಿಧಿಸಿದ್ದು, ಪರಿಹಾರ ಕೊಡಲು ಆದೇಶ ನೀಡಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಬಾಕಿ ಇರುವ ರೂ. 7,92,798/- ಬಾಡಿಗೆ ಮತ್ತು ತೀರ್ಪು ನೀಡಿದ ದಿನಾಂಕದಿಂದ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ.

ಬಾಡಿಗೆ ಕೊಡದ ಏರ್‌ಸೆಲ್ ಹಾಗೂ JTL ಕಂಪನಿಗೆ 50 ಸಾವಿರ ರೂ ದಂಡ ವಿಧಿಸಿದ ಗ್ರಾಹಕರ ಆಯೋಗ
ಪ್ರಾತಿನಿಧಿಕ ಚಿತ್ರ
Edited By:

Updated on: Dec 13, 2023 | 7:09 PM

ಧಾರವಾಡ, ಡಿಸೆಂಬರ್​​ 13: ಅಕ್ಷಯ ಕಾಲನಿಯ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ಧಾರವಾಡದ ಹಳೆ ಹುಲ್ಲಿನ ಮಾರುಕಟ್ಟೆಯಲ್ಲಿರೋ ತಮ್ಮ ಮಾಲೀಕತ್ವದ 700 ಚ. ಅಡಿ ಜಾಗವನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಏರ್‌ಸೆಲ್ ಕಂಪನಿ (Aircel Company) ಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು. ಜೂನ್-2009 ರಿಂದ ಜೂನ್‌ 2024 ರವರೆಗೆ ಕರಾರು ಅವಧಿ ಇತ್ತು. ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಕೊಡುವಂತೆ ಕರಾರು ಇತ್ತು. ನವೆಂಬರ್-2017ರವರೆಗೆ ಬಾಡಿಗೆ ಕೊಡುತ್ತಾ ಬಂದ ಏರ್‌ಸೆಲ್ ಕಂಪನಿಯವರು ನಂತರದ ಅವಧಿಗೆ ಬಾಡಿಗೆ ಕೊಡುವುದನ್ನು ನಿಲ್ಲಿಸಿದ್ದರು. ಈ ನಡುವೆ ಏರ್‌ಸೆಲ್ ಕಂಪನಿ ಜಿ.ಟಿ.ಎಲ್. ಕಂಪನಿಯಲ್ಲಿ ಲೀನವಾಗಿದೆ ಅಂತಾ ಹೇಳಿದ್ದರು. ಹಲವಾರು ಬಾರಿ ಬಾಡಿಗೆ ಕೊಡುವಂತೆ ಕೇಳಿಕೊಂಡರೂ ಕಂಪನಿಯವರು ಬಾಡಿಗೆ ಕೊಟ್ಟಿರಲಿಲ್ಲ. ತಮಗೆ ಕಂಪನಿಯವರು ಮೋಸ ಮಾಡಿದ್ದಾರೆ ಅಂತಾ ಇಬ್ಬರೂ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಇಬ್ಬರ ನಡುವೆ ಆಗಿರೋ ಬಾಡಿಗೆ ಕರಾರಿನ ಪ್ರಕಾರ ಪ್ರತಿ ತಿಂಗಳು ಬಾಡಿಗೆ ಕೊಡಬೇಕಾಗಿದೆ.

ಇದನ್ನೂ ಓದಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಮಾ ಕಂಪನಿಗೆ ದಂಡ! ಕಾರಣವೇನು?

ಡಿಸೆಂಬರ್-2017 ರಿಂದ ದೂರು ದಾಖಲಾದ ಎಪ್ರಿಲ್-2023 ರವರೆಗೆ ಸುಮಾರು 6 ವರ್ಷದ ಬಾಡಿಗೆ ರೂ. 7,92,798/- ಆಗುತ್ತದೆ. ಹಲವು ಬಾರಿ ಕೇಳಿದರೂ ಏರ್‌ಸೆಲ್ ಕಂಪನಿಯವರು ಬಾಡಿಗೆ ಕೊಡದೇ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಇದನ್ನೂ ಓದಿ: ಸೇವಾ ನ್ಯೂನ್ಯತೆ: ಕೊವಿಡ್‌ ನೆಪ ಹೇಳಿ ಮದುವೆಗೆ ಶಾಮಿಯಾನ ಹಾಕದ ಹುಬ್ಬಳ್ಳಿಯ ಶಾಮಿಯಾನ ಮಾಲಿಕನಿಗೆ ದಂಡ

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಬಾಕಿ ಇರುವ ರೂ. 7,92,798/- ಬಾಡಿಗೆ ಮತ್ತು ತೀರ್ಪು ನೀಡಿದ ದಿನಾಂಕದಿಂದ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ. ಬಾಡಿಗೆ ಕರಾರಿನ ಷರತ್ತನ್ನು ಏರ್‌ಸೆಲ್ ಕಂಪನಿಯವರು ಉಲ್ಲಂಘಿಸಿರುವುದರಿಂದ ಟಾವರ್ ಹಾಕಿದ ಸಲಕರಣೆಗಳನ್ನು ಕಿತ್ತುಕೊಂಡು ಖುಲ್ಲಾ ಜಾಗೆಯ ಸ್ವಾಧೀನತೆಯನ್ನು ದೂರುದಾರರಿಗೆ ಕೊಡುವಂತೆ ಆಯೋಗ ಕಂಪನಿಗೆ ನಿರ್ದೇಶಿಸಿದೆ.

ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ. 50,000/- ಪರಿಹಾರ ಮತ್ತು ರೂ. 2,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಏರ್‌ಸೆಲ್ ಕಂಪನಿಗೆ ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us