ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ ಆವರಣ; ಇನ್ಮುಂದೆ ಪರಶುರಾಮ-ಬಸವೇಶ್ವರ ಅಕ್ಷಯ ಕ್ಷೇತ್ರ

ದೇಶದಲ್ಲಿರೋ 23 ಐಐಟಿಗಳಲ್ಲಿ ಏಕೈಕ ಹಸಿರು ಕ್ಯಾಂಪಸ್ ಹೊಂದಿರುವ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆವರಣ, ಇನ್ನು ಮುಂದೆ ಪರಶುರಾಮ-ಬಸವೇಶ್ವರ ಅಕ್ಷಯ ಕ್ಷೇತ್ರವಾಗಿ ಗುರುತಿಸಿಕೊಳ್ಳಲಿದೆ. ಹೊಸ ಬಗೆಯ ಪರಿಕಲ್ಪನೆ ಸಾಕಾರಗೊಳಿಸಲು ಇದೀಗ ಹೊಸದೊಂದು ಯೋಜನೆಯನ್ನು ರೂಪಿಸಲಾಗುತ್ತಿದೆ. ಇದೇನಿದು ತಂತ್ರಜ್ಞಾನ ಕಲಿಸೋ ಕ್ಯಾಂಪಸ್, ಇದ್ಯಾವ ಕ್ಷೇತ್ರ ಆಗೋಕೆ ಹೊರಟಿತು ಎಂದು ಆಶ್ಚರ್ಯ ಆಯ್ತಾ? ಅದಕ್ಕೆ ಈ ಸ್ಟೋರಿ ಓದಿ.

ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ ಆವರಣ; ಇನ್ಮುಂದೆ ಪರಶುರಾಮ-ಬಸವೇಶ್ವರ ಅಕ್ಷಯ ಕ್ಷೇತ್ರ
ಪ್ರೊ. ವೆಂಕಪ್ಪಯ್ಯ ದೇಸಾಯಿ, ಐಐಟಿ ನಿರ್ದೇಶಕ
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 28, 2024 | 4:33 PM

ಧಾರವಾಡ, ಜು.28: ವಿದ್ಯಾಕಾಶಿ ಧಾರವಾಡದ ಹೊರವಲಯದ ಚಿಕ್ಕಮಲ್ಲಿಗವಾಡ ಗ್ರಾಮದ ಸುಮಾರು 470 ಎಕರೆ ಜಮೀನಿನಲ್ಲಿ ಧಾರವಾಡ ಐಐಟಿ ಕ್ಯಾಂಪಸ್ ಇದ್ದು, ಸಂಪೂರ್ಣ ಹಸಿರು ಪರಿಸರ ಹೊಂದಿದೆ. ಇದಕ್ಕಾಗಿ ರೈತರು ಕೊಟ್ಟಿರೋ  ಜಮೀನಲ್ಲಿದ್ದ ಮಾವು ಇತರೆ ತೋಟ, ಮರ ಗಿಡ ಹಾಗೂ ಐದಾರು ಕೆರೆಗಳನ್ನು ಹಾಗೆಯೇ ಉಳಿಸಿಕೊಂಡು, ಅಕಾಡೆಮಿಯ ಕಟ್ಟಡ ಹಾಗೂ ಹಾಸ್ಟೆಲ್​ಗಳನ್ನು ನಿರ್ಮಿಸಲಾಗಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಬಳಿಕ ಈ ಹೊಸ ಕ್ಯಾಂಪಸ್ ಆರಂಭಗೊಂಡಿದೆ.

ಇನ್ಮುಂದೆ ಪರಶುರಾಮ-ಬಸವೇಶ್ವರ ಅಕ್ಷಯ ಕ್ಷೇತ್ರ

ಇಡೀ ಕ್ಯಾಂಪಸ್ ಹಸಿರುಮಯವಾಗಿರುವ ಕಾರಣಕ್ಕೆ 2030ರ ವೇಳೆಗೆ ಇಡೀ ಐಐಟಿ ಸ್ವಂತ ಬಲದ ಮೇಲೆ ನಿಲ್ಲುವ ಸುಸ್ಥಿರ ಸ್ವಾವಲಂಬಿ ಕ್ಯಾಂಪಸ್ ಗುರಿ ನೀಡಲಾಗಿದೆಯಂತೆ. ಈ ಕಾರ್ಯವನ್ನೇ ಬಸವೇಶ್ವರ ಮತ್ತು ಪರಶುರಾಮರ ಹೆಸರಿನಲ್ಲಿ ಮಾಡಲಿದ್ದು, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿ ಜೊತೆಗೆ ಅರ್ಥಿಕ ಅಭಿವೃದ್ಧಿ ಹೊಂದುವುದೇ ಮೂಲ ಮಂತ್ರವಾಗಿದೆ. ಇಲ್ಲಿ ಹೊರಗಡೆಯಿಂದ ಯಾವುದೇ ನೀರು ತರಿಸುವಂತಿಲ್ಲ. ಸೌರಶಕ್ತಿ ಸೇರಿ, ಇತರೆ ಇಂಧನವನ್ನೂ ಸ್ವಂತ ಉತ್ಪಾದನೆ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಇಲ್ಲಿರುವ ತ್ಯಾಜ್ಯವನ್ನೂ ಪುನರ್ ಬಳಕೆ ಮಾಡೋ ಜಿರೋ ಡೆಬ್ರಿಸ್ ಕನ್​ಸ್ಟ್ರಕ್ಷನ್ ಹೊಂದಿದ್ದಾರೆ. ಇದೆಲ್ಲವನ್ನೂ ಸಾಧಿಸೋ ಮೂಲಕ ಇಡೀ ಕ್ಯಾಂಪಸ್ ಅನ್ನು ಪರಶುರಾಮ-ಬಸವೇಶ್ವರ ಅಕ್ಷಯ ಕ್ಷೇತ್ರವನ್ನಾಗಿ ಮಾಡಲಿದ್ದಾರಂತೆ.

ಇದನ್ನೂ ಓದಿ:ವಿದ್ಯಾಕಾಶಿ ಧಾರವಾಡದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಬಂಪರ್ ಗಿಫ್ಟ್; 15 ಹಾಸ್ಟೆಲ್​ಗಳ ನಿರ್ಮಾಣಕ್ಕೆ ಆದೇಶ

ಪರಶುರಾಮ ಮತ್ತು ಬಸವೇಶ್ವರ ಇಬ್ಬರೂ ಸಹ ಅಕ್ಷಯ ತೃತೀಯ ದಿನವೇ ಜನಿಸಿದವರು. ಮೇಲಾಗಿ ಇದೇ ಭಾಗದಲ್ಲಿ ಅವರು ಜನರ ಮನಸ್ಸಿನಲ್ಲಿದ್ದಾರೆ. ಹೀಗಾಗಿ ಅವರಿಬ್ಬರ ಹೆಸರಿನಲ್ಲಿಯೇ ಇಡೀ ಕ್ಯಾಂಪಸ್ ಅನ್ನು ನಾವು ಹಸಿರು ವಲಯದ ಜೊತೆಗೆ ಸುಸ್ಥಿರ ಸ್ವಾವಲಂಭಿಯನ್ನಾಗಿ ಮಾಡುತ್ತೇವೆ ಎಂದು ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಅವರು ಹೇಳಿದ್ದಾರೆ. ಇನ್ನು ಇಲ್ಲಿರುವ ಕೆರೆಗಳನ್ನು ಹಾಗೆಯೇ ಇಟ್ಟುಕೊಂಡಿರುವ ಕಾರಣಕ್ಕೆ ಮಳೆ ನೀರು ಕೊಯ್ಲು ಸಹ ಮಾಡಿದ್ದಾರೆ. ಐಐಟಿಗೆ ಸಮೀಪವೇ ಇರುವ ಟಾಟಾ ಕಂಪನಿಯ ಯುನಿಟ್ ಈಗಾಗಲೇ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್​ನಿಂದ ಪ್ಲಾಟಿನ್ಂ ಮಾನ್ಯತೆ ಪಡೆದಿರುವ ಹಸಿರು ಘಟಕ ಆಗಿದೆ. ಅದನ್ನೇ ಪ್ರೇರಣೆಯಾಗಿಟ್ಟುಕೊಂಡು, ಐಐಟಿಯನ್ನೂ ಹಾಗೆ ಮಾಡಿದಲ್ಲಿ, ವಿಶ್ವದಲ್ಲಿಯೇ ಅಪರೂಪದ ಕ್ಯಾಂಪಸ್ ಎಂಬ ಹೆಗ್ಗಳಿಕೆಯೂ ಪಾತ್ರವಾಗಲಿದೆಯಂತೆ.

ಆರಂಭದಿಂದಲೇ ಈ ಕ್ಯಾಂಪಸ್​ನಲ್ಲಿ ಸಂಸ್ಕೃತ ಮತ್ತು ಭಾರತೀಯತೆಯ ಮಹತ್ವ ನೀಡುತ್ತಲೇ ಬರಲಾಗಿದೆ. ಇಲ್ಲಿರುವ ಘೋಷವಾಕ್ಯಗಳಲ್ಲಿಯೂ ದೇಸಿಯತೆ ಎದ್ದು ಕಾಣುತ್ತದೆ. ಹೀಗಾಗಿ ಇಕೋ ಫ್ರೆಂಡ್ಲಿ, ಇಲ್ಲವೇ ಗ್ರೀನ್ ಕ್ಯಾಂಪಸ್ ಎಂದು ಹೇಳಿಕೊಳ್ಳೋದನ್ನೇ ಪರಶುರಾಮ-ಬಸವೇಶ್ವರರಂಥ ಮಹಾನ್ ಪುರುಷರ ಅಕ್ಷಯ ಕ್ಷೇತ್ರ ಎಂದು ಹೇಳಿಕೊಳ್ಳಲು ಮುಂದಾಗಿರೋದು ಈಗ ಪ್ರಶಂಸೆಗೆ ಪಾತ್ರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us