ಧಾರಾವಾಡ: ಆಲಿಕಲ್ಲು ಮಳೆಗೆ ಉದುರಿದ ಮಾವು; ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಂಗಾಲಾದ ಅನ್ನದಾತ!

ಧಾರಾವಾಡ ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದ 'ಆಲ್ಪಾನ್ಸೋ' ಮಾವು ಸಂಪೂರ್ಣ ನಾಶವಾಗಿದ್ದು, ಕಾಯಿಗಳು ನೆಲಪಾಲಾಗಿವೆ. ರೈತರು ಮಾಡಿದ ಖರ್ಚು ಕೂಡ ಕೈಗೆ ಬಾರದೆ ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಮಾವು ಬೆಳೆಗಾರರು ಆಗ್ರಹಿಸಿದ್ದಾರೆ.

ಧಾರಾವಾಡ: ಆಲಿಕಲ್ಲು ಮಳೆಗೆ ಉದುರಿದ ಮಾವು; ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಂಗಾಲಾದ ಅನ್ನದಾತ!
ಆಲಿಕಲ್ಲು ಮಳೆ
Edited By:

Updated on: Mar 28, 2026 | 9:26 PM

ಧಾರಾವಾಡ, ಮಾ.28: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲೇ ವರುಣನ ಅಟ್ಟಹಾಸ ಶುರುವಾಗಿದೆ. ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಧಾರಾವಾಡ ಜಿಲ್ಲೆಯ ಮಾವು ಬೆಳೆಗಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮರದಲ್ಲಿ ನಳನಳಿಸುತ್ತಿದ್ದ ಮಾವಿನ ಕಾಯಿಗಳು ಈಗ ನೆಲಪಾಲಾಗಿವೆ.

ಧಾರಾವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಮತ್ತು ಧಾರಾವಾಡ ತಾಲೂಕುಗಳಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಇಲ್ಲಿನ ಹೆಮ್ಮೆಯ ‘ಆಲ್ಪಾನ್ಸೋ’ (ಆಪೂಸ್) ಮಾವಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಕಳೆದ ವರ್ಷ ಫಸಲು ಬಾರದೆ ಕಂಗಾಲಾಗಿದ್ದ ರೈತರು, ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಆಲಿಕಲ್ಲು ಮಳೆ ರೈತರ ಆಸೆಯ ಮೇಲೆ ತಣ್ಣೀರು ಎರಚಿದೆ.

ಬಿರುಗಾಳಿಯ ಹೊಡೆತಕ್ಕೆ ಮಾವಿನ ಕಾಯಿಗಳು ಉದುರಿ ಬಿದ್ದಿದ್ದರೆ, ಆಲಿಕಲ್ಲು ಬಿದ್ದಿದ್ದರಿಂದ ಗಿಡದಲ್ಲಿ ಉಳಿದಿರುವ ಕಾಯಿಗಳೂ ಕಲೆಗಳಾಗಿ ಹಾಳಾಗುತ್ತಿವೆ. ಮಾಚಾಪುರ ಗ್ರಾಮದಂತಹ ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆಯ ತೀವ್ರತೆ ಎಷ್ಟಿತ್ತೆಂದರೆ, ಮರದಲ್ಲಿ ಕಾಯಿ ಹೋಗಲಿ, ಒಂದೇ ಒಂದು ಎಲೆಯೂ ಉಳಿಯದಂತೆ ಮರಗಳು ಬೋಳಾಗಿವೆ.

ಇದನ್ನೂ ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಹೂ ಬಿಡುವ ಹಂತದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಿದ್ದ ರೈತರಿಗೆ ಈಗ ಮಾಡಿದ ಖರ್ಚು ಕೂಡ ಕೈಗೆ ಬರದಂತಾಗಿದೆ. ಜಿಲ್ಲೆಯ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಸಂಪೂರ್ಣ ನಾಶವಾಗಿದೆ. ಸಂಕಷ್ಟದಲ್ಲಿರುವ ತಮಗೆ ಸರ್ಕಾರ ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:25 pm, Sat, 28 March 26

Follow Us