ಹುಬ್ಬಳ್ಳಿಯಲ್ಲಿ ಅರೆಬೆತ್ತಲೆ ಕಳ್ಳರ ಹಾವಳಿ, ಜೈನ ಮಂದಿರಗಳೇ ಟಾರ್ಗೆಟ್: ಚಡ್ಡಿ ಗ್ಯಾಂಗ್ ಕೃತ್ಯದ ಶಂಕೆ

ಹುಬ್ಬಳ್ಳಿಯ ಹೊಸರು ಬಡಾವಣೆಯ ಜೈನ ಮಂದಿರದಲ್ಲಿ ಮಂಗಳವಾರ ರಾತ್ರಿ ಅರೆಬೆತ್ತಲೆ ಕಳ್ಳರ ತಂಡವೊಂದು 3 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿದೆ. ಸರಣಿ ಮಂದಿರ ಕಳ್ಳತನಗಳಿಂದ ಅವಳಿ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಇದು ‘ಚಡ್ಡಿ ಗ್ಯಾಂಗ್’ನವರ ಕೃತ್ಯ ಇರಬಹುದೆಂದು ಶಂಕಿಸಲಾಗಿದ್ದು, ಖದೀಮರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಅರೆಬೆತ್ತಲೆ ಕಳ್ಳರ ಹಾವಳಿ, ಜೈನ ಮಂದಿರಗಳೇ ಟಾರ್ಗೆಟ್: ಚಡ್ಡಿ ಗ್ಯಾಂಗ್ ಕೃತ್ಯದ ಶಂಕೆ
ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿ
Image Credit source: tv9
Edited By:

Updated on: May 13, 2026 | 2:28 PM

ಹುಬ್ಬಳ್ಳಿ, ಮೇ 13: ಹುಬ್ಬಳ್ಳಿ-ಧಾರವಾಡ (Hubballi Dharawad) ಅವಳಿ ನಗರದಲ್ಲಿ ಕಳೆದ ಕೆಲವು ತಿಂಗಳಿಂದ ಶಾಂತವಾಗಿದ್ದ ‘ಚಡ್ಡಿ ಗ್ಯಾಂಗ್ (Chaddi Gang)’ ಈಗ ಮತ್ತೆ ಸಕ್ರಿಯವಾಗಿರುವ ಆತಂಕ ಎದುರಾಗಿದೆ. ಅದರಲ್ಲೂ ವಿಶೇಷವಾಗಿ ಜೈನ ಮಂದಿರಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನಗಳು ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಮಂಗಳವಾರ ರಾತ್ರಿ ಹುಬ್ಬಳ್ಳಿಯ ಹೊಸರು ಬಡಾವಣೆಯಲ್ಲಿರುವ ಜೈನ ಮಂದಿರಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.

ಮುಖ್ಯಾಂಶಗಳು

  • ಹುಬ್ಬಳ್ಳಿಯ ಹೊಸರು ಜೈನ ಮಂದಿರದಲ್ಲಿ ಕಳ್ಳತನ
  • ಸುಮಾರು 3 ಕೆಜಿ ಬೆಳ್ಳಿ ಆಭರಣ ಹಾಗೂ ಹುಂಡಿ ಹಣ ಲೂಟಿ.
  • ಸಿಸಿಟಿವಿ ವೈರ್ ಕಟ್ ಮಾಡಿ ಚಾಣಾಕ್ಷತನ ಮೆರೆದ ಕಳ್ಳರು: ಚಡ್ಡಿ ಗ್ಯಾಂಗ್ ಕೃತ್ಯವಿರುವ ಬಗ್ಗೆ ಪೊಲೀಸರ ಶಂಕೆ.

ಜೈನ ಮಂದಿರಗಳೇ ಕಳ್ಳರ ಟಾರ್ಗೆಟ್

ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಕೆಲವು ದಿನಗಳಿಂದ ಜೈನ ಮಂದಿರಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಕಳೆದ ವಾರ ಧಾರವಾಡದ ಜೈನ ಮಂದಿರ ಹಾಗೂ ಈ ಹಿಂದೆ ಹುಬ್ಬಳ್ಳಿಯ ಗೊಬ್ಬೂರು ಬಳಿಯ ಮಂದಿರದಲ್ಲಿ ಕಳ್ಳತನವಾಗಿತ್ತು. ಈಗ ಹೊಸರು ಬಡಾವಣೆಯ ಮಂದಿರದಲ್ಲಿ ಅರೆಬೆತ್ತಲೆಯಾಗಿ ನುಗ್ಗಿದ ಮೂವರು ಕಳ್ಳರು ಗರ್ಭಗುಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ವಿಶೇಷವೆಂದರೆ, ಹುಂಡಿಯಲ್ಲಿದ್ದ ಕೇವಲ ನೋಟುಗಳನ್ನು ಮಾತ್ರ ತೆಗೆದುಕೊಂಡು ಹೋಗಿರುವ ಕಳ್ಳರು ಚಿಲ್ಲರೆ ಹಣವನ್ನು ಬಿಟ್ಟು ಹೋಗಿದ್ದಾರೆ.

ಚಡ್ಡಿ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ

ಮಂದಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನವಲನಗಳು ಸೆರೆಯಾಗಿವೆ. ಮುಖಕ್ಕೆ ಬಟ್ಟೆ ಕಟ್ಟಿ, ಮೈಮೇಲೆ ಎಣ್ಣೆ ಸವರಿಕೊಂಡು ಅರೆಬೆತ್ತಲೆಯಾಗಿರುವ ಕಳ್ಳರ ಪೈಖರಿ ನೋಡಿದರೆ ಇದು ಕುಖ್ಯಾತ ‘ಚಡ್ಡಿ ಗ್ಯಾಂಗ್’ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಸಿಸಿಟಿವಿ ಇರುವುದನ್ನು ಗಮನಿಸಿದ ಕಳ್ಳರು ಅದರ ವೈರ್ ಕಟ್ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಈ ಗ್ಯಾಂಗ್ ಗುಜರಾತ್ ಮೂಲದವರದ್ದಾಗಿರಬಹುದು ಎಂಬ ಅನುಮಾನವೂ ಕಾಡುತ್ತಿದೆ.

ಪೊಲೀಸ್ ತನಿಖೆ ಚುರುಕು

ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೈಮ್ ವಿಭಾಗದ ಡಿಸಿಪಿ ರವೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದು, ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:26 pm, Wed, 13 May 26

Follow Us