ಅದು ವಿರಳ ಕಾಯಿಲೆ: ಹೃದಯದ ಮೇಲೆ ಬೃಹದಾಕಾರದ ಗಡ್ಡೆ, ಹುಬ್ಬಳ್ಳಿ ಕಿಮ್ಸ್ ವೈದ್ಯರಿಂದಾಗಿ ಪ್ರಾಣಾಪಾಯದಿಂದ ಪಾರಾದ ಬಡ ಮಹಿಳೆ

Pericardial Cyst: ನೀಲವ್ವ ಒಂದು ವರ್ಷದಿಂದ ಪೆರಿಕಾರ್ಡಿಯಲ್ ಸಿಸ್ಟ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯದ ಮೆಲೆ ಗಡ್ಡೆಯಾದ ಪರಿಣಾಮ ನೀಲವ್ವನಿಗೆ ಉಸಿರಾಟದ ತೊಂದರೆ ಆಗ್ತಿತ್ತು. ಕೆಲ ಕ್ಷಣ ಉಸಿರಾಟವೇ ನಿಂತು ಹೋದಂಗೆ ಆಗ್ತಿತ್ತು.

ಅದು ವಿರಳ ಕಾಯಿಲೆ: ಹೃದಯದ ಮೇಲೆ ಬೃಹದಾಕಾರದ ಗಡ್ಡೆ, ಹುಬ್ಬಳ್ಳಿ ಕಿಮ್ಸ್ ವೈದ್ಯರಿಂದಾಗಿ ಪ್ರಾಣಾಪಾಯದಿಂದ ಪಾರಾದ ಬಡ ಮಹಿಳೆ
ಹುಬ್ಬಳ್ಳಿ ಕಿಮ್ಸ್ ವೈದ್ಯರಿಂದಾಗಿ ಪ್ರಾಣಾಪಾಯದಿಂದ ಪಾರಾದ ಬಡ ಮಹಿಳೆ
Follow us
|

Updated on:Feb 22, 2023 | 2:49 PM

ಅದು ಸಾಮಾನ್ಯ ಕಾಯಿಲೆ ಅಲ್ಲ.. ಆ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವಿನ ಕದ ತಟ್ಟಿದ್ರು. ಕೆಲ ಕ್ಷಣ ಉಸಿರಾಟವೇ ನಿಂತು ಹೋಗ್ತಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಕಾಯಿಲೆ ವಾಸಿ ಮಾಡಲು‌ ಲಕ್ಷ ಲಕ್ಷ ಕೇಳಿದ್ರು. ಹಣ ಇಲ್ದೆ ಆ ಮಹಿಳೆ (Woman) ಕಿಮ್ಸ್ ಗೆ ದಾಖಲಾಗಿದ್ದರು. ಇದೀಗ 10 ಲಕ್ಷ ಜನರಲ್ಲಿ ಕಾಣಸಿಗೋ ಆ ಕಾಯಿಲೆಯನ್ನ ಕಿಮ್ಸ್ ಆಸ್ಪತ್ರೆ ವೈದ್ಯರು (KIMS Doctor) ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಪ್ರಾಣ ಉಳಿಸಿದ್ದಾರೆ. 10 ಲಕ್ಷ ಜನರಲ್ಲಿ ಕಾಣಸಿಗೋ ಈ ವಿರಳ ಕಾಯಿಲೆಗೆ ಅವರು ತುತ್ತಾಗಿದ್ದಾದರೂ ಹೇಗೆ? ಅವರಿಗೆ ಆಗಿದ್ದಾದರೂ ಏನು ಅಂತೀರಾ? ಈ ಸ್ಟೋರಿ ಓದಿ. ಒಂದು ಕಡೆ ಮಹಿಳೆ ಹೃದಯದ ಮೇಲೆ ಬೆಳೆದಿರೋ ಬೃಹದಾಕಾರದ ಗಡ್ಡೆ… ಇನ್ನೊಂದು ಕಡೆ ಸತತ ಎರಡು ಗಂಟೆ ಕಾಲ ಆಪರೇಶನ್ ಮಾಡಿದ ಗಡ್ಡೆಯನ್ನು ತಗೆದಿರುವ ವೈದ್ಯರು. ಇನ್ನೊಂದು ಕಡೆ ಪ್ರಾಣಾಪಾಯದಿಂದ ಪಾರಾದ ಮಹಿಳೆ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ (Hubballi) ಕಿಮ್ಸ್ ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಒಂದು ಪ್ರಾಣ ಉಳಿಸಿದ್ದಾರೆ. ಈ ಮಹಿಳೆಯ ಹೆಸರು ನೀಲವ್ವ ನಾಗರಳ್ಳಿ, ವಯಸ್ಸು 54. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ನಿವಾಸಿ…

ನೀಲವ್ವ ಕಳೆದ ಒಂದು ವರ್ಷದಿಂದ ಪೆರಿಕಾರ್ಡಿಯಲ್ ಸಿಸ್ಟ್ ( ಹೃದಯದ ಮೇಲೆ ಗಡ್ಡೆ Pericardial Cyst) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯದ ಗಡ್ಡೆಯಾದ ಪರಿಣಾಮ ನೀಲವ್ವನಿಗೆ ಉಸಿರಾಟದ ತೊಂದರೆ ಆಗ್ತಿತ್ತು. ಇದರಿಂದ ನೀಲವ್ವನ ಉಸಿರಾಟ ತೊಂದರೆ, ಮುಖ ಬಾವು ಬರೋದು ಆಗ್ತಿತ್ತು. ಕೆಲ ಕ್ಷಣ ಉಸಿರಾಟವೇ ನಿಂತು ಹೋದಂಗೆ ಆಗ್ತಿತ್ತು.

ಈ ಕಾಯಿಲೆ ಸಾಮಾನ್ಯವಾಗಿ 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಸಿಗತ್ತೆ ಅನ್ನೋದು ವೈದ್ಯರ ಮಾತು. ಇಂತಹ ಕಾಯಿಲೆಯಿಂದ ಒಂದು ವರ್ಷದಿಂದ ಬಳಲುತ್ತಿದ್ದ ನೀಲವ್ವರನ್ನ ಕುಟುಂಬಸ್ಥರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿದ್ದರು. ಈ ಆಪರೇಶನ್ ಗೆ ಸರಿಸುಮಾರು ಐದು ಲಕ್ಷ ಕೇಳಿದರು. ಆದ್ರೆ ಅಷ್ಟೊಂದು ಹಣವಿಲ್ಲದ ಕಾರಣ ಕುಟುಂಬಸ್ಥರು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿದ್ದರು. ಮಹಿಳೆಯನ್ನು ತಪಾಸಣೆ ಮಾಡಿ ಚಿಕಿತ್ಸೆ ಮಾಡಿದ ವೈದ್ಯರು, ಇದೀಗ ಪೆರಿಕಾರ್ಡಿಯಲ್ ಸಿಸ್ಟ್ ಕಾಯಿಲೆಯನ್ನು ವಾಸಿ ಮಾಡಿದ್ದಾರೆ. ಹೃದಯದ ಮೇಲೆ ಗಡ್ಡೆಯನ್ನು ಸಂಪೂರ್ಣವಾಗಿ ರಿಮೂವ್ ಮಾಡಿದ್ದು, ಇದೀಗ ನೀಲವ್ವ ಮೊದಲಿನ ತರ ಆರಾಮಾಗಿದ್ದಾರೆ.

ಇಂತಹ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಿರೋ ವೈದ್ಯರಾದ ಎಂ ಕಟ್ಟಿಮನಿ ಹೇಳೋದು ಹೀಗೆ – ಪೆರಿಕಾರ್ಡಿಯಲ್ ಸಿಸ್ಟ್ ಖಾಯಿಲೆ ಸಾಮಾನ್ಯವಾಗಿ ಕಾಣ ಸಿಗೋ ಕಾಯಿಲೆ ಅಲ್ಲ. ಇದು 10 ಲಕ್ಷ ಜನರಲ್ಲಿ ಮಾತ್ರ ಕಾಣಸಿಗತ್ತೆ. ಅಪರೂಪದ ಕಾಯಿಲೆಯಲ್ಲಿ ಜೀವ ಹೋಗೋ ಲಕ್ಷಣಗಳೇ ಜಾಸ್ತಿ. ಅಲ್ಲದೆ ಇದು ವೈದ್ಯರಿಗೂ ಕಠಿಣವಾದ ಕೆಲಸ.. ಯಾಕಂದ್ರೆ ಅಪ್ಪಿತಪ್ಪಿ ಏನಾದ್ರೂ ಮಾಡೋಕೆ ಹೋದ್ರೆ ಹೃದಯಕ್ಕೆ ಹಾನಿಯಾಗೋದು ಗ್ಯಾರಂಟಿ. ಇಂತಹ ಕಾಯಿಲೆ ಇರುವವರ ಹೃದಯಕ್ಕೆ ರಕ್ತ ಬರ್ತಿರುವುದಿಲ್ಲ.

ಹೀಗಾಗಿ ಅವರಿಗೆ ಉಸಿರಾಟದ ಸಮಸ್ಯೆ ಆಗುತ್ತೆ. ನೀಲವ್ವ ಎಂಬ ಮಹಿಳೆ ಇಂತಹ ಅಪರೂಪದ ಕಾಯಿಲೆಗೆ ತುತ್ತಾಗಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ರು. ಹೃದಯದ ಕವಚದ ಮೇಲೆ ದೊಡ್ಡ ಗಂಟಾಗಿ, ಉಸಿರಾಟದ ಸಮಸ್ಯೆ ಉಂಟು ‌ಮಾಡೋ‌ ಕಾಯಿಲೆಗೆ ಪೆರಿಕಾರ್ಡಿಯಲ್ ಸಿಸ್ಟ್ ಎಂದು‌ ಕರೆಯುತ್ತಾರೆ. ಇಂತಹ ಅಪರೂಪದ ಕಾಯಿಲೆ ನೀಲವ್ವನಿಗೆ ಕಾಣಿಸಿಕೊಂಡಿತ್ತು.

ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ತೋರಿಸೋಕೆ ಹಣ ಇಲ್ದೆ ಪರದಾಡೋವಾಗ ಕುಂದಗೋಳ ಶಾಸಕಿ‌ ಕುಸುಮಾವತಿ ಶಿವಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಮಹಿಳೆಗೆ ಚಿಕಿತ್ಸೆಗೆ ನೆರವಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 4 ಲಕ್ಷ ರೂಪಾಯಿ ಖರ್ಚಾಗ್ತಿದ್ದ ಆಪರೇಶನ್ ಗೆ ಕಿಮ್ಸ್ ಆಸ್ಪತ್ರೆ ವೈದ್ಯರು ಉಚಿತವಾಗಿ ಮಾಡಿ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಇದೀಗ ಮಹಿಳೆ ಹಾಗೂ ಕುಟುಂಬಸ್ಥರು ವೈದ್ಯರಿಗೆ ಧನ್ಯವಾದ ಹೇಳ್ತೀದಾರೆ.

ಒಟ್ಟಾರೆ ಆಪರೇಶನ್ ಗೆ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಕಿಮ್ಸ್ ವೈದ್ಯರು ದೇವರಾಗಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ನೀಲವ್ವ ಇದೀಗ ಮತ್ತೆ ಎಂದಿನಂತೆ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಕಿಮ್ಸ್ ಅಂದ್ರೆ ಹಾಗೇ ಹೀಗೆ ಅಂತಾ ಮಾತಾಡೋದು ಕಾಮನ್, ಅದ್ರ ಮಧ್ಯೆಯೂ ವೈದ್ಯೋ ನಾರಾಯಣ ಹರಿ ಅನ್ನೋದಿಕ್ಕೆ ಇಂತಹ ಪ್ರಕರಣಗಳು ಉದಾಹರಣೆಯಾಗಿ ಕಾಣಿಸಿಕೊಳ್ಳುತ್ತವೆ.

ವರದಿ: ಶಿವಕುಮಾರ್ ಪತ್ತಾರ್, ಟಿವಿ 9, ಹುಬ್ಬಳ್ಳಿ

Published On - 11:26 am, Wed, 22 February 23