AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಪೊಲೀಸರ ಮೇಲೆ ಹಲ್ಲೆ, ಆರೋಪಿಗಳ ಕಾಲಿಗೆ ಗುಂಡೇಟು

ಹುಬ್ಬಳ್ಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದೆ. ಇಬ್ಬರು ರೌಡಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಯುವಕನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಹೀಗಾಗಿ ಕಾಲಿಗೆ ಫೈರ್​​ ಮಾಡಿ​ ಬಂಧಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಪೊಲೀಸರ ಮೇಲೆ ಹಲ್ಲೆ, ಆರೋಪಿಗಳ ಕಾಲಿಗೆ ಗುಂಡೇಟು
ಬಂಧಿತ ಆರೋಪಿಗಳು
ಸಂಜಯ್ಯಾ ಚಿಕ್ಕಮಠ
| Edited By: |

Updated on: Nov 16, 2025 | 3:13 PM

Share

ಹುಬ್ಬಳ್ಳಿ, ನವೆಂಬರ್​ 16: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ (Firing) ಸದ್ದು ಕೇಳಿದೆ. ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ ಇಬ್ಬರು ರೌಡಿಗಳ ಕಾಲಿಗೆ ಗುಂಡು ಹೊಡೆದು ಪೊಲೀಸರು ಆರೋಪಿಗಳನ್ನು ಪಂಚರ್ ಮಾಡಿದ್ದಾರೆ. ಮೊನ್ನೆ ಜನನಿಬಿಡ ಪ್ರದೇಶದಲ್ಲಿ ರೌಡಿಗಳು ಅಟ್ಟಹಾಸ ಮೆರದಿದ್ದರು. ಯುವಕನೋರ್ವನ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದು ಕೊಲೆ (Murder) ಮಾಡಿದ್ದರು. ಕೊಲೆ ಆರೋಪಿಗಳಿಗೆ ಇದೀಗ ಪೊಲೀಸರು ಗುಂಡು ಹಾರಿಸುವ ಮೂಲಕ ಬಿಸಿ ಮುಟ್ಟಿಸಿದ್ದು, ಆಸ್ಪತ್ರೆಗೆ ಸೇರಿಸಿದ್ದಾರೆ.

ಹುಬ್ಬಳ್ಳಿ ನಗರದ ಮಂಟೂರು ರೋಡ್ ನಿವಾಸಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯಾ ಹಾಗೂ ಮಹ್ಮದ್ ಶೇಖ್​​​ ಕಾಲಿಗೆ ಪೊಲೀಸರು ಫೈರಿಂಗ್​​ ಮಾಡಿದ್ದಾರೆ. ತಾವಾಯ್ತು, ತಮ್ಮ ಕೆಲಸವಾಯಿತು ಅಂತಿದ್ದರೆ ಈ ರೌಡಿಗಳಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಆದರೆ ಏರಿಯಾದಲ್ಲಿ ಹವಾ ಮಾಡಲು, ಎದುರಾಳಿ ಗ್ಯಾಂಗ್​​ನ್ನು ಹೆಡೆಮುರಿ ಕಟ್ಟಲು ಯತ್ನಿಸಿದ್ದರ ಫಲವಾಗಿ ಇವರು ಇದೀಗ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ.

ಹುಬ್ಬಳ್ಳಿಯಲ್ಲಿ ರೌಡಿಗಳ ಅಟ್ಟಹಾಸ 

ಇಂದು ಮುಂಜಾನೆ 6 ಗಂಟೆ ಸಮಯಕ್ಕೆ ಹುಬ್ಬಳ್ಳಿ ನಗರದ ಹೊರವಲಯದ ಮಂಟೂರು ರಸ್ತೆಯಲ್ಲಿ ಪೊಲೀಸರು ತಮ್ಮ ಸರ್ವಿಸ್ ರಿವಾಲ್ವರ್​ಗೆ ಅನಿವಾರ್ಯವಾಗಿ ಕೆಲಸ ನೀಡಿದ್ದಾರೆ. ರೌಡಿಗಳು ತಮ್ಮ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಮುಂದಾದಾಗ, ಗುಂಡು ಹಾರಿಸಿದ್ದಾರೆ. ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಆರೋಪಿಗಳಿಗೆ ವಾರ್ನಿಂಗ್ ನೀಡಿದ್ದರು ಕೂಡ ಕೇಳದೆ ಇದ್ದಾಗ, ಬೆಂಡಿಗೇರಿ ಠಾಣೆಯ ಇನ್ಸಪೆಕ್ಟರ್ ಎಸ್ ಆರ್ ನಾಯಕ್, ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಬಂಗಾರ ಬಾಲ್ಯಾ ಮತ್ತು ಮಹ್ಮದ್ ಶೇಖ್ ಕಾಲಿಗೆ ಗುಂಡು ತಗುಲಿವೆ.

ಇದನ್ನೂ ಓದಿ: ಧೂಮ್​ ಸಿನಿಮಾ ಪ್ರೇರಣೆ, ಶ್ರೀಮಂತರ ಮನೆಗಳೇ ಟಾರ್ಗೆಟ್​​: ಬೆಳಗಾವಿಯಲ್ಲೊಬ್ಬ ಖತರ್ನಾಕ್​ ಕಳ್ಳ

ಗಾಯಗೊಂಡಿರುವ ಮಹ್ಮದ್ ಶೇಖ್ ಮತ್ತು ಬಂಗಾರ ಬಾಲ್ಯಾನನ್ನು ಕಿಮ್ಸ್​ಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಸಿಪಿಐ ಎಸ್ ಆರ್ ನಾಯಕ್ ಮತ್ತು ಇನ್ನಿಬ್ಬರು ಕಾನ್ಸಟೇಬಲ್​​​ಗಳನ್ನ​​ ಕೂಡ ಕಿಮ್ಸ್​ಗೆ ದಾಖಲಿಸಲಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಕಿಮ್ಸ್​ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮತ್ತೊಂದಡೆ ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಗುಂಡೇಟು ತಿಂದಿರುವ ಇಬ್ಬರು ಕೂಡ ಯುವಕನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.

ಯುವಕನ ಬರ್ಬರ ಕೊಲೆ

ಇದೇ ನವಂಬರ್ 13 ರಂದು ರಾತ್ರಿ ಎಂಟು ಗಂಟೆ ಸಮಯಕ್ಕೆ ಹುಬ್ಬಳ್ಳಿ ನಗರದ ಮಂಟೂರು ರಸ್ತೆಯಲ್ಲಿ ಯುವಕನೋರ್ವನ ಬರ್ಬರ ಕೊಲೆಯಾಗಿತ್ತು. ಮಂಟೂರು ರೋಡ್ ನಿವಾಸಿಯಾಗಿದ್ದ 26 ವರ್ಷದ ಮಹಮ್ಮದ್ ಮಲ್ಲಿಕ್ ನನ್ನು ರೌಡಿಗಳ ಗ್ಯಾಂಗ್ ಬರ್ಬರವಾಗಿ ಕೊಲೆ ಮಾಡಿತ್ತು. ಶೇವಿಂಗ್ ಮಾಡಿಸಿಕೊಳ್ಳಲು ಮನೆ ಸಮೀಪವೇ ಇದ್ದ ಕಟಿಂಗ್ ಶಾಪ್ ಮುಂದೆ ನಿಂತಾಗ, ಬೈಕ್​​ನಲ್ಲಿ ಬಂದಿದ್ದ ರೌಡಿಗಳು ನೋಡನೋಡುತ್ತಿದ್ದಂತೆ ಸಿನಿಮಾ ಶೈಲಿಯಲ್ಲಿ ಮಲ್ಲಿಕ್​​ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.

ನಂತರ ಮಲ್ಲಿಕ್ ನನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದ. ಏರಿಯಾದಲ್ಲಿರುವ ಎರಡು ರೌಡಿ ಗ್ಯಾಂಗ್​​ ನಡುವಿನ ಜಿದ್ದಾಜಿದ್ದಿಯೇ ಕೊಲೆಗೆ ಕಾರಣವಾಗಿತ್ತು. ಇನ್ನು ಘಟನೆ ನಂತರ ಮಲ್ಲಿಕ್ ಸಂಬಂಧಿಗಳು ಮತ್ತು ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನಗರದ ಅಂಬೇಡ್ಕರ್ ವೃತ್ತದ ಬಳಿ ಶವವಿಟ್ಟು ಪ್ರತಿಭಟನೆ ಮಾಡಿದ್ದರು.

ಇನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾದಾಗ ನಿನ್ನೆ ಸಂಜೆ ಕೊಲೆಯ ಪ್ರಮುಖ ಆರೋಪಿ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯಾ ಬೆಂಡಿಗೇರಿ ಠಾಣೆಗೆ ಖುದ್ದಾಗಿ ಬಂದು ಪೊಲೀಸರ ಮುಂದೆ ಶರಣಾಗಿದ್ದ. ಮಲ್ಲಿಕ್ ಕೊಲೆಯನ್ನು ನಾನೊಬ್ಬನೇ ಮಾಡಿದ್ದೇನೆ ಅಂತ ಪೊಲೀಸರ ಮುಂದೆ ಹೇಳಿದ್ದನಂತೆ. ಆದರೆ ಕೊಲೆಯ ಸಿಸಿಟಿವಿ ದೃಶ್ಯಗಳು ಸೇರಿದಂತೆ ಬೇರೆ ಬೇರೆ ಮಾಹಿತಿಗಳಿಂದ ಪೊಲೀಸರು ಮಲ್ಲಿಕ್ ಕೊಲೆಯನ್ನು ಬಾಲ್ಯಾ ಒಬ್ಬನೇ ಮಾಡಿಲ್ಲ, ಎಂಟತ್ತು ಜನರು ಸೇರಿ ಮಾಡಿರೋದು ಗೊತ್ತಾಗಿತ್ತು. ಆದರೆ ಉಳಿದವರ ಹೆಸರು ಹೇಳಿದರೆ, ತನ್ನ ಜೀವಕ್ಕೆ ಅವರು ಅಪಾಯ ಮಾಡ್ತಾರೆ ಅಂತ ಬಾಲ್ಯಾ ಹೇಳಿದ್ದನಂತೆ.

ಉಳಿದ ಆರೋಪಿಗಳ ಬಗ್ಗೆ ಬಾಯಿಬಿಟ್ಟಿದ್ದ ಬಂಗಾರ ಬಾಲ್ಯಾ 

ಪೊಲೀಸರು ಬೆಂಡೆತ್ತಿದಾಗ ಉಳಿದ ಆರೋಪಿಗಳ ಬಗ್ಗೆ ಬಾಯಿಬಿಟ್ಟಿದ್ದ. ಉಳಿದ ಆರೋಪಿಗಳು ಮಂಟೂರು ರೋಡ್ ಹೊರವಲಯದ ಶೆಡ್​​ನಲ್ಲಿ ಇರೋದಾಗಿ ಬಾಲ್ಯಾ ಹೇಳಿದ್ದನಂತೆ. ಹೀಗಾಗಿ ಇಂದು ಮುಂಜಾನೆ ಬಾಲ್ಯಾನ ಕರೆದುಕೊಂಡು ಶೆಡ್ ನಲ್ಲಿದ್ದ ಆರೋಪಿಗಳ ಬಂಧನಕ್ಕೆ ಪೊಲೀಸರು ಹೋಗಿದ್ದರು. ಆಗ ಬಾಲ್ಯಾ ಮತ್ತು ಇನ್ನುಳಿದವರು, ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ಅನಿವಾರ್ಯವಾಗಿ ಪೊಲೀಸರು ಬಾಲ್ಯಾ ಮತ್ತು ಮಹ್ಮದ್ ಶೇಖ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಇನ್ನು ಪೊಲೀಸರು ಬರ್ತಿದ್ದಂತೆ ಕೆಲ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಿದ್ದಾರಂತೆ. ಇನ್ನು ಗುಂಡೇಟು ತಿಂದಿರುವ ಬಾಲ್ಯಾ ಮತ್ತು ಮಹ್ಮದ್ ಶೇಖ್ ಇಬ್ಬರು ರೌಡಿಶೀಟರ್​ಗಳಾಗಿದ್ದು, ಇಬ್ಬರ ಮೇಲೆ ಬೆಂಡಿಗೇರಿ, ಟೌನ್ ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳಿವೆ.

ಇದನ್ನೂ ಓದಿ: ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ

ಸದ್ಯ ಮಲ್ಲಿಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಬಂಗಾರ ಬಾಲ್ಯಾ ಹಾಗೂ ಮಹ್ಮದ್ ಶೇಖ್ ಬಂಧನವಾಗಿದೆ. ಕೆಲ ಆರೋಪಿಗಳು ತಪ್ಪಿಸಿಕೊಂಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಹಪ್ತಾ ವಸೂಲಿ, ಹವಾ ಮೆಂಟೆನ್ ಮಾಡಲು ರೌಡಿಗಳ ಗ್ಯಾಂಗ್​ ನಡುವೆ ಮಾರಾಮಾರಿ, ಕೊಲೆ ಯತ್ನ, ಕೊಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದು, ಪೊಲೀಸರು ಇನ್ನಷ್ಟು ಕ್ರಮಗಳನ್ನು ಕೈಗೊಂಡು ರೌಡಿಗಳ ಹೆಡೆಮುರಿ ಕಟ್ಟಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Sanjayya Chikkamath
Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More