ಹುಬ್ಬಳ್ಳಿ: ತನ್ನೊಂದಿಗೆ ಮಾತನಾಡದ ಹುಡುಗಿಯರೇ ಇವನ ಟಾರ್ಗೆಟ್; ಆರೋಪಿ ಬಗ್ಗೆ ಸ್ಫೋಟಕ ಅಂಶ ಬಿಚ್ಚಿಟ್ಟ ಪೊಲೀಸ್​ ಆಯುಕ್ತ

| Updated By: ಆಯೇಷಾ ಬಾನು

Updated on: Aug 09, 2023 | 3:33 PM

ಇನ್​ಸ್ಟಾಗ್ರಾಮ್​​ನಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ‌ ಪೋಸ್ಟ್​​ ಹಾಕಿದ ಆರೋಪಿಯನ್ನು ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ: ತನ್ನೊಂದಿಗೆ ಮಾತನಾಡದ ಹುಡುಗಿಯರೇ ಇವನ ಟಾರ್ಗೆಟ್; ಆರೋಪಿ ಬಗ್ಗೆ ಸ್ಫೋಟಕ ಅಂಶ ಬಿಚ್ಚಿಟ್ಟ ಪೊಲೀಸ್​ ಆಯುಕ್ತ
ವೈರಲ್​ ಪೋಸ್ಟ್​
Follow us on

ಹುಬ್ಬಳ್ಳಿ: ಇನ್​ಸ್ಟಾಗ್ರಾಮ್​​ನಲ್ಲಿ (Instagram) ಖಾಸಗಿ ಕಾಲೇಜಿನ (Private) ವಿದ್ಯಾರ್ಥಿನಿಯರ (Students) ಅಶ್ಲೀಲ ಫೋಟೋ‌ ಪೋಸ್ಟ್​​ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಜನಿಕಾಂತ್ ಬಂಧಿತ ಆರೋಪಿ. ಆರೋಪಿ ಇದೇ ಖಾಸಗಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾನೆ. ಕಳೆದ ವರ್ಷ ತರಗತಿಗೆ ಈತನ ಹಾಜರಾತಿ ಕಡಿಮೆ ಇದ್ದಿದ್ದರ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಪರೀಕ್ಷೆಗೆ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಕಾಲೇಜ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಜನೀಕಾಂತ್ Kashmira1990_0 ಹೆಸರಿನ ಫೇಕ್ ಅಕೌಂಟ್ ಕ್ರೀಯೇಟ್ ಮಾಡಿದ್ದಾನೆ.

ನಂತರ ತನ್ನದೆ ಕಾಲೇಜಿನ ವಿದ್ಯಾರ್ಥಿನಿಯ ಫೊಟೋಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದಾನೆ. ಇಷ್ಟೆ ಅಲ್ಲದೇ ತಾಕತ್​​ ಇದ್ದರೇ ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ಸವಾಲ್ ಹಾಕಿದ್ದ. ಸದ್ಯ ಈಗ ಹುಬ್ಬಳ್ಳಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಸಮರ್ಥ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋ ಎಡಿಟ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಮಾಡಲಾಗಿತ್ತು. ವಿದ್ಯಾರ್ಥಿನಿಯರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಅದೇ ಕಾಲೇಜಿ​​ನ ಹಳೇ ವಿದ್ಯಾರ್ಥಿ 21 ವರ್ಷದ ರಜನಿಕಾಂತ್​​ನನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ಸಂತೋಷ್ ಬಾಬು ಹೇಳಿದ್ದಾರೆ.

ಈ ಕೃತ್ಯವನ್ನು ಕೇವಲ ಒಬ್ಬ ಯುವಕ ಮಾಡಿಲ್ಲ, ಇನ್ನು ಕೆಲವರು ಸೇರಿಕೊಂಡಿರುವ ಅನುಮಾನ ಇದೆ.  ಕಾಲೇಜನಲ್ಲಿಯೇ ಕೆಲ ವಿದ್ಯಾರ್ಥಿಗಳು ರಜನಿಕಾಂತ ಜೊತೆ ಮಾತನಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ರಜನೀಕಾಂತ್ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿದ್ದನು. ಕಡಿಮೆ ಹಾಜರಾತಿ ಇರುವ ಕಾರಣದಿಂದ ಈ ಬಾರಿ ಅವನಿಗೆ ಕಾಲೇಜ್​ ಅಲ್ಲಿ ಅಡ್ಮಿಶನ್ ಕೊಟ್ಟಿರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಿಆರ್‌ಟಿಎಸ್‌ ಬಸ್‌ ಕಾರ್ಯಾಚರಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲು ‘ಚಿಗರಿ ಮಿತ್ರ’ ಅಭಿಯಾನ ಪ್ರಾರಂಭ

ಬ್ರೇನ್‌ ಮ್ಯಾಪಿಂಗ್​ಗಾಗಿ ನಾವು FSIL ಗೆ ಪತ್ರ ಬರೆದಿದ್ದೇವೆ.  ಮೂರು ದಿನಗಳ ಹಿಂದೇಯೇ ಆರೋಪಿಯನ್ನು ಬಂಧಿಸಿದ್ದೇವು. ಅವನ ಜೊತೆ ಇನ್ನೂ ಕೆಲವು ಹುಡಗುರು ಶಾಮಿಲಾಗಿರಬಹುದು ಎಂದು ತನಿಖೆ ಮಾಡುತ್ತಿದ್ದೇವೆ.  ಅವನ ಟಾರ್ಗೆಟ್ ಕಾಲೇಜ್ ಅಲ್ಲ, ವಿದ್ಯಾರ್ಥಿನಿಯರು. ತರಗತಿಯಲ್ಲಿ ಯಾವ ವಿದ್ಯಾರ್ಥಿನಿಗೆ ಬಾಯ್ ಫ್ರೆಂಡ್ ಇದ್ದಾರೆ ಅಂತವರನ್ನು ಟಾರ್ಗೆಟ್ ಮಾಡಿ, ಅವರ ಭಾವಚಿತ್ರ ಎಡಿಟ್​ ಮಾಡಿ ಪೋಸ್ಟ್​ ಮಾಡುತ್ತಿದ್ದನು ಎಂದು ತಿಳಿಸಿದ್ದಾರೆ.

ಏನಿದು ಘಟನೆ

ಅಗಸ್ಟ್​​ 4 ರಂದು ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿಯರ ಫೋಟೋಗಳನ್ನು ಎಡಿಟ್​ ಮಾಡಿ ಇನ್​​ಸ್ಟಾಗ್ರಮ್​ನಲ್ಲಿ ಹರಿಬಿಡಲಾಗಿತ್ತು. ಈ ಪೋಸ್ಟ್​ಗಳು ವೈರಲ್​​ ಆಗುತ್ತಿದ್ದಂತೆ ಅಲರ್ಟ್ ಆದ ವಿದ್ಯಾನಗರ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ್ದರು. ಡಿಸಿಪಿ ಗೋಪಾಲ ಬ್ಯಾಕೋಡ್ ಅವರು ಕೂಡ ಕಾಲೇಜ್​​ಗೆ ಭೇಟಿ ನೀಡಿ ಪ್ರಾಂಶುಪಾಲರಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು.

ಮೊದಲೆ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳದ ಕಾಲೇಜ್ ಆಡಳಿತ ಮಂಡಳಿ

ಫೋಟೋಗಳು ವೈರಲ್​ ಆಗುತ್ತಿದ್ದಂತೆ ವಿದ್ಯಾರ್ಥಿನಿಯರು ಜೂನ್ 20 ರಂದೇ ಕಾಲೇಜ್ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಆದರೂ ಕಾಲೇಜ್ ಆಡಳಿತ ಮಂಡಳಿ ದೂರು ದಾಖಲಿಸದೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗಿತ್ತಿದ್ದಂತೆ ಅಲರ್ಟ್ ಆದ ಆರೋಪಿ ಇನ್​ಸ್ಟಾಗ್ರಾಮ್​​ನಲ್ಲಿ ಹಾಕಿದ್ದ ಪೋಸ್ಟ್​​ಗಳನ್ನು ಡಿಲೀಟ್ ಮಾಡಿದ್ದನು.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ರಾಜಕಾರಣಿಗಳ ಫೋಟೊ ಬಳಸಿ ಟಿಪ್ಪು ಸುಲ್ತಾನ್‌ಗೆ ನಮಸ್ಕರಿಸುವ ವಿಡಿಯೋ ಹರಿಬಿಟ್ಟಿದ್ದನು. ಹಿಂದೂ ಮುಖಂಡ ಪ್ರಮೋದ ಮುತಾಲಿಕ್ ಅವರು ಟಿಪ್ಪುವಿನ ಭಾವಚಿತ್ರ ಹಿಡಿದಿರುವ ಪೋಟೋ ಮತ್ತು ನೋಟುಗಳ ಮೇಲೆ ಟಿಪ್ಪುವಿನ ಭಾವಚಿತ್ರ ಹಾಕಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Wed, 9 August 23