
ಹುಬ್ಬಳ್ಳಿ, ಏಪ್ರಿಲ್ 28: ಹುಬ್ಬಳ್ಳಿಯಲ್ಲಿ (Hubballi) ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ ಆರೋಪಿಯನ್ನು ಎನ್ಕೌಂಟರ್ (Hubballi Encounter) ಮಾಡಲಾಗಿದೆ. ಈ ಪ್ರಕರಣ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಒಂದಡೆ ಆರೋಪಿ ಶವ ಇನ್ನೂವರೆಗೂ ಅನಾಥವಾಗಿದ್ದರೆ ಇತ್ತ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ (Human Rights Commission) ಎಂಟ್ರಿ ಕೊಟ್ಟಿದ್ದು, ವಿಚಾರಣೆ ಆರಂಭಿಸಿದೆ. ಎನ್ಕೌಂಟರ್ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದ ಪೊಲೀಸರಿಗೆ ಇದೀಗ ತನಿಖೆ ಬಿಸಿ ಆರಂಭವಾಗಿದೆ.
ಎಪ್ರಿಲ್ 13 ರಂದು ಹುಬ್ಬಳ್ಳಿಯಲ್ಲಿ ಬಿಹಾರ್ ಮೂಲದ ರಿತೇಶ್ ಕುಮಾರ್ ಎಂಬಾತ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ್ದ. ರೇಪ್ ಆ್ಯಂಡ್ ಮರ್ಡರ್ ಪ್ರಕರಣ ಖಂಡಿಸಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಈ ಬಗ್ಗೆ ಹುಬ್ಬಳ್ಳಿ ನಗರದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ನಂತರ ವಿಚಾರಣೆಗೆ ಕರೆದುಕೊಂಡು ಹೋಗುವಾಗ ಆರೋಪಿ ತಪ್ಪಿಸಿಕೊಂಡು ಹೋಗಲು ಮುಂದಾದಾಗ ಪೊಲೀಸರು ಎನ್ಕೌಂಟರ್ ಮಾಡಿದ್ದರು. ಘಟನೆ ನಡೆದು 15 ದಿನವಾದರೂ ಇಲ್ಲಿವರಗೆ ಆರೋಪಿ ಕುಟುಂಬದವರು ಸಿಕ್ಕಿಲ್ಲ. ಹೀಗಾಗಿ ಆರೋಪಿ ಶವ ಕಿಮ್ಸ್ ಶವಾಗಾರದಲ್ಲಿ ಅನಾಥವಾಗಿದೆ.
ಇದೀಗ ಎರಡು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ ಕೊಟ್ಟಿದೆ. ಸೋಮವಾರ (ಏ.28) ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ್ ಭಟ್ ಮತ್ತು ಸದಸ್ಯ ವಂಟಗೋಡಿ ಹುಬ್ಬಳ್ಳಿಗೆ ಆಗಮಿಸಿ, ಕೊಲೆಯಾದ ಬಾಲಕಿ ಮನೆಗೆ ಬೇಟಿ ನೀಡಿ, ಕುಟುಂಬಕ್ಕೆ ಸಾಂತ್ವಾನ ಹೇಳಿ ನಂತರ ಮಾಹಿತಿ ಪಡೆದರು. ನಂತರ ಘಟನೆ ನಡೆದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಇದಾದ ನಂತರ ಎನ್ಕೌಂಟರ್ ನಡೆದ ಹುಬ್ಬಳ್ಳಿ ಹೊರವಲಯದ ರಾಯನಾಳ ಸೇತುವೆ ಬಳಿಯಿರುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಪರಿಶೀಲನೆ ನಂತರ ಮಾತನಾಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ್ ಭಟ್, ಎನ್ಕೌಂಟರ್ ಪ್ರಕರಣದ ಬಗ್ಗೆ ಪೊಲೀಸ ಕಮಿಷನರ್ ವರದಿ ನೀಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ ದೂರುಗಳು ಬಂದಾಗ, ಇಲ್ಲವೇ ನಾವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ. ಇದೀಗ ಹುಬ್ಬಳ್ಳಿ ಎನ್ಕೌಂಟರ್ ಪ್ರಕರಣ ಕೂಡ ದಾಖಲಾಗಿದ್ದು ಎರಡು ತಿಂಗಳಲ್ಲಿ ವಿಚಾರಣೆ ಮುಗಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಕರಣ: ವಿಚಾರಣೆಗೆ ಕೊನೆಗೂ ಕೂಡಿ ಬಂತು ಕಾಲ!
ರೇಪ್ ಆ್ಯಂಡ್ ಮರ್ಡರ್ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾನೆ. ಹುಬ್ಬಳ್ಳಿ ಪೊಲೀಸರ ಕಾರ್ಯಕ್ಕೆ ರಾಜ್ಯದ ಜನರು ಮೆಚ್ಚುಗೆ ಕೂಡಾ ಸೂಚಿಸಿದ್ದಾರೆ. ಆದರೆ, ಎನ್ಕೌಂಟರ್ ಮಾಡಿರುವ ಪೊಲೀಸರಿಗೆ ಇದೀಗ ತನಿಖೆ ಬಿಸಿ ತಾಗಲು ಆರಂಭಿಸಿದೆ. ಹುಬ್ಬಳ್ಳಿ ಎನ್ಕೌಂಟರ್ ಪ್ರಕರಣ ಇದೀಗ ಮಾನವ ಹಕ್ಕುಗಳ ಆಯೋಗದ ಅಂಗಳಕ್ಕೆ ತಲುಪಿದೆ. ಹೀಗಾಗಿ ಆಯೋಗ ಯಾವ ರೀತಿ ವರದಿ ನೀಡುತ್ತದೆ ಅನ್ನೋದು ತೀರ್ವ ಕುತೂಹಲ ಮೂಡಿಸಿದೆ.