ಹುಬ್ಬಳ್ಳಿ ಎನ್ಕೌಂಟರ್ ಕೇಸ್: ಪಿಎಸ್ಐ ಅನ್ನಪೂರ್ಣಗೆ ಮೆಚ್ಚುಗೆಯ ಮಹಾಪೂರ, ಯಾರೀ ಲೇಡಿ ಸಿಂಗಂ?
ಹುಬ್ಬಳ್ಳಿಯ ಬಾಲಕಿಯ ಹತ್ಯೆ ಆರೋಪಿಯನ್ನು ಎನ್ಕೌಂಟರ್ ಪ್ರಕರಣ ಸದ್ಯ ದೇಶಾದ್ಯಂತ ಸಾಕಷ್ಟು ಚರ್ಚೆ ಆಗುತ್ತಿದೆ. ಗಟ್ಟಿಗಿತ್ತಿ ಪಿಎಸ್ಐ ಅನ್ನಪೂರ್ಣ ಮಾಡಿದ ಸಾಹಸಕ್ಕೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರ್ತಿದೆ. ಆರೋಪಿಯ ಕತೆ ಮುಗಿಸಿದ ಈ ಲೇಡಿ ಪಿಎಸ್ಐ ಯಾರು ಎಂದು ಜನರು ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಉತ್ತರ ಇಲ್ಲಿದೆ.

ಹುಬ್ಬಳ್ಳಿ, ಏಪ್ರಿಲ್ 14: ಏನೂ ಅರಿಯದ 5 ವರ್ಷದ ಪುಟ್ಟ ಕಂದನನ್ನು ಅತ್ಯಾಚಾರ ಮಾಡಿ ಕೊಲೆ ಪ್ರಕರಣ ಜನರನ್ನು ಸಾಕಷ್ಟು ಘಾಸಿಗೊಳಿಸಿತ್ತು. ಹುಬ್ಬಳ್ಳಿ (hubballi) ಜನರು ಆರೋಪಿ ರಿತೇಶ್ನನ್ನು ತಮ್ಮ ಕೈಗೊಪ್ಪಿಸುವಂತೆ ಒತ್ತಾಯಿಸಿದ್ದರು. ಬಳಿಕ ಸ್ಥಳ: ಪರಿಶೀಲನೆ ವೇಳೆ ಪೊಲೀಸರ ಮೇಲೆಯೇ ದಾಳೆಗೆ ಮುಂದಾದ ಆರೋಪಿಗೆ ಪಿಎಸ್ಐ ಅನ್ನಪೂರ್ಣ (Psi Annapurna) ಗುಂಡು ಹಾರಿಸಿದ್ದರು. ಯಾವಾಗ ಅನ್ನಪೂರ್ಣ ಅಂತಿಮ ತೀರ್ಪು ನೀಡಿದರೋ ಜನರು ಬಹುಪರಾಕ್ ಕೂಗಿದರು. ಹಾಗಾದರೆ ಈ ಲೇಡಿ ಸಿಂಗಂ ಅನ್ನಪೂರ್ಣ ಯಾರು ಗೊತ್ತಾ? ಇಲ್ಲಿದೆ ಉತ್ತರ.
ಯಾರು ಈ ಲೇಡಿ ಸಿಂಗಂ?
ಬಾಲಕಿಯ ಹತ್ಯೆ ಆರೋಪಿಯ ಎನ್ಕೌಂಟರ್ ಪ್ರಕರಣ ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಮಹಿಳಾ ಪಿಎಸ್ಐ, ಲೇಡಿ ಸಿಂಗಂ ಅನ್ನಪೂರ್ಣಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಅನ್ನಪೂರ್ಣ ಆರ್.ಮುಕ್ಕಣ್ಣವರ ಎಂಎಸ್ಸಿ ಪದವೀಧರೆ. 2018ನೇ ಬ್ಯಾಚ್ನ ಪೊಲೀಸ್ ಅಧಿಕಾರಿ. ಹುಟ್ಟಿದ್ದು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗುಜನಟ್ಟಿ ಗ್ರಾಮದಲ್ಲಿ.
ಇದನ್ನೂ ಓದಿ: ಹುಬ್ಬಳ್ಳಿ: ಬಾಲಕಿಯನ್ನು ಕೊಲೆಗೈದಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನ, ಪೊಲೀಸ್ ಗುಂಡಿಗೆ ಬಲಿ
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದ ಅನ್ನಪೂರ್ಣ, ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿ ಪಡೆದುಕೊಂಡರು. ಬಳಿಕ ಎಂಎಸ್ಸಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದರು. ಬಾಲ್ಯದಲ್ಲೇ ತಂದೆಯನ್ನ ಕಳೆದುಕೊಂಡ ಅನ್ನಪೂರ್ಣ, ತಾಯಿ ನೆರಳಿನಲ್ಲಿ ಬೆಳೆದು ಪಿಎಸ್ಐ ಆಗಿದ್ದಾರೆ. ಸದ್ಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ದೇಶದ ಜನರ ಮನ ಗೆದ್ದಿರುವ ಅನ್ನಪೂರ್ಣ ಅವರಿಗೆ ಅಭಿನಂದನೆಗಳ ಸುರಿ ಮಳೆ ಶುರುವಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐ ಅನ್ನಪೂರ್ಣ ಸದ್ಯ ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PSIಗೆ ಸಚಿವ ಸಂತೋಷ್ ಲಾಡ್ ಸೆಲ್ಯೂಟ್
ಹಂತಕನಿಗೆ ಗುಂಡು ಹೊಡೆದ PSIಗೆ ಸಚಿವ ಸಂತೋಷ್ ಲಾಡ್ ಸೆಲ್ಯೂಟ್ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಲಾಡ್, ಫೈರಿಂಗ್ನಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಈ ಸಮಯದಲ್ಲಿ ಗುಂಡೇಟು ಹೊಡೆದ ಹುಬ್ಬಳ್ಳಿಯ ಅಶೋಕನಗರ ಠಾಣೆ ಪಿಎಸ್ಐ ಅನ್ನಪೂರ್ಣಗೆ ಸೆಲ್ಯೂಟ್ ಹೊಡೆದರು. ಶೇಕ್ ಹ್ಯಾಂಡ್ ಮಾಡಿ ಗೆಟ್ವೆಲ್ ಸೂನ್ ಎಂದರು.
ಪಂಚಭೂತಗಳಲ್ಲಿ ಕರಗಿದ ಐದರ ಪುಟ್ಟ ಹಸುಗೂಸು!
ಇತ್ತ ಆರೋಪಿಯ ಕ್ರೌರ್ಯಕ್ಕೆ ಬಲಿಯಾದ ಬಾಲಕಿಯ ಅಂತ್ಯಕ್ರಿಯೆ ನಡೆಯಿತು. ಪುಟಾಣಿಯ ಮೃತದೇಹ ನೋಡ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆತ್ತವರ ನೋವು ಹೇಳತೀರದಾಗಿತ್ತು. ಹುಬ್ಬಳ್ಳಿ ನಗರದ ದೇವಾಂಗಪೇಟ್ನ ರುದ್ರಭೂಮಿಯಲ್ಲಿ ಕಂದಮ್ಮನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸರ್ಕಾರ ಮೃತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:38 pm, Mon, 14 April 25