Chennaveera Kanavi Death: ಚೆಂಬೆಳಕಿನ‌ ಖ್ಯಾತಿಯ ನಾಡೋಜ ಚೆನ್ನವೀರ ಕಣವಿ ಅಸ್ತಂಗತ

| Updated By: ಆಯೇಷಾ ಬಾನು

Updated on: Feb 16, 2022 | 10:16 AM

Chennaveera Kanavi Passes Away: ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ನಾಡೋಜ್ ಚೆನ್ನವೀರ ಕಣವಿ ಇಂದು ಕೊನೆಯುಸಿರೆಳೆದಿದ್ದಾರೆ.

Chennaveera Kanavi Death: ಚೆಂಬೆಳಕಿನ‌ ಖ್ಯಾತಿಯ ನಾಡೋಜ ಚೆನ್ನವೀರ ಕಣವಿ ಅಸ್ತಂಗತ
ನಾಡೋಜ ಚೆನ್ನವೀರ ಕಣವಿ
Follow us on

ಧಾರವಾಡ: ಚೆಂಬೆಳಕಿನ‌ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ(93)(Chennaveera Kanavi) ಅಸ್ತಂಗತರಾಗಿದ್ದಾರೆ. ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಧಾರವಾಡದ ಎಸ್​ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಣವಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆ ಈ ಹಿಂದೆ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಿತ್ತು. ಆ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಕಣವಿಯವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿತ್ತು. ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡಿತ್ತು. 

ಅಕ್ಯೂಟ್​ ರೆಸ್ಪಿರೇಟರಿ ಡಿಸ್ಟ್ರೆಸ್​ ಸಿಂಡ್ರೋಮ್​ನಿಂದ (ARDS) ಚೆನ್ನವೀರ ಕಣವಿ ಬಳಲುತ್ತಿದ್ದರು. ಸುಮಾರು ಒಂದು ತಿಂಗಳಿನಿಂದ ಎಸ್​ಡಿಎಂ ಆಸ್ಪತ್ರೆಯಲ್ಲಿ ಕಣವಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಮೊದಲು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ, ಮತ್ತೆ ಆರೋಗ್ಯ ಕ್ಷೀಣಿಸಿತ್ತು. ಕಣವಿಯವರಿಗೆ ಕೊರೊನಾ ಸೋಂಕು ಕೂಡ ದೃಢಪಟ್ಟಿತ್ತು.

ಚೆಂಬೆಳಕಿನ ಕವಿ ಎಂದೇ ಖ್ಯಾತಿ ಪಡೆದಿರುವ 93 ವರ್ಷದ ನಾಡೋಜ ಚೆನ್ನವೀರ ಕಣವಿ ಸುಮಾರು ಸುಮಾರು ಒಂದು ತಿಂಗಳಿನಿಂದ ಎಸ್​ಡಿಎಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿದ್ದರು. ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ. ಚೆನ್ನವೀರ ಕಣವಿ ಅವರು ಉಸಿರಾಟದ ತೊಂದರೆಯಿಂದ ಧಾರವಾಡದ ಎಸ್​ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಡಾ. ಚೆನ್ನವೀರ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಕೂಡ ಮಾಡಿದ್ದರು.

ನಾಡೋಜ ಚೆನ್ನವೀರ ಕಣವಿ ನಿಧನಕ್ಕೆ ಸಿಎಂ ಸಂತಾಪ
ನಾಡೋಜ ಚೆನ್ನವೀರ ಕಣವಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಸಜ್ಜನಿಕೆಗೆ ಸಾಕಾರಮೂರ್ತಿ ಚೆನ್ನವೀರ ಕಣವಿಯವರು ಮೃದು ಮಾತುಗಳಿಂದಲೇ ಮನಸ್ಸನ್ನು ಗೆಲ್ಲುತ್ತಿದ್ದರು. ಕಣವಿ ಅವರು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ರು. ಅವರು ಅವರ ಕುಟುಂಬ ನಮಗೆ ನಾಲ್ಕು ದಶಕಗಳಿಂದ ಆಪ್ತ. ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಶಸ್ತಿಗಳಿಗೇ ಅವರಿಂದ ಶೋಭೆ ಸಿಕ್ತಿತ್ತು. ಪ್ರಶಸ್ತಿಗೆ ಗೌರವ ತರುವಂತೆ ಅವರ ವ್ಯಕ್ತಿತ್ವ ಇರುತ್ತಿತ್ತು. ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಕನ್ನಡ ಸಾಹಿತ್ಯ ಒಬ್ಬೊಬ್ಬರನ್ನೇ ಕಳೆದುಕೊಳ್ತಿದೆ. ಕಳೆದುಕೊಂಡವರ ಪ್ರೇರಣೆ ಕನ್ನಡ ಸಾಹಿತ್ಯದವರು ಪಡೆಯಲಿ. ಆ ಮೂಲಕ ಮತ್ತಷ್ಟು‌ ಮೇರು ಸಾಹಿತಿಗಳು ಬರಲಿ. ನಾಡೋಜ ಚೆನ್ನವೀರ ಕಣವಿ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಚನ್ನವೀರ ಕಣವಿ ಜೀವನ
ಕಣವಿ ಅವರು 28-6-1928ರಂದು ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಜನಿಸಿದರು. ತಂದೆ-ಸಕ್ಕರೆಪ್ಪ ತಾಯಿ-ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆರಂಭದಲ್ಲಿ ಗದಗ ತಾಲೂಕಿನ ಶಿರುಂದದಲ್ಲಿ ಶಿಕ್ಷಕರಾಗಿದ್ದರು. ಹೀಗಾಗಿ ಶಿರುಂದದಲ್ಲಿಯೇ ಕಣವಿ ಅವರ ಬಾಲ್ಯ ಕಳೆದಿತ್ತು. ನಾಲ್ಕನೇ ತರಗತಿವರೆಗೆ ಶಿರುಂದದಲ್ಲಿಯೇ ಶಿಕ್ಷಣ ಪಡೆದು ಬಳಿಕ ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ 7ನೇ ತರಗತಿವರೆಗೆ ಶಿಕ್ಷಣ ಪಡೆದ್ರು. ಬಾಲ್ಯದಲ್ಲಿ ಗಾಂಧಿ ಟೋಪಿ ನಾಟಕದಲ್ಲಿ ಅಭಿನಯಿಸಿದ್ದ ಕಣವಿ ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ್ರು. ಧಾರವಾಡದ ಮುರುಘಾಮಠದಲ್ಲಿದ್ದುಕೊಂಡು ಹೈಸ್ಕೂಲ್ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜ್​ನಲ್ಲಿ ಬಿಎ ಶಿಕ್ಷಣ ಪಡೆದ್ರು. ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಣವಿಯವರ ಕವನಗಳನ್ನು ನೋಡಿ ಡಿವಿಜಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದರಂತೆ.

ಧಾರವಾಡದ ಮಾಳಮಡ್ಡಿಯಲ್ಲಿ ಕಾವ್ಯಾನುಭವ ಮಂಪಟ ಆರಂಭಿಸಿ ಕವಿತಾ ವಾಚನ ಅಭಿಯಾನ ನಡೆಸಿದ್ದ ಹಿರಿಯ ಕವಿ ಎಂಬ ಖ್ಯಾತಿಗೆ ಪಾತ್ರರಾಗುವ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದ್ರು. ಅದೇ ವಿವಿಯ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಆರಂಭಸಿದ್ದರು. ಬಳಿಕ 1956ರಲ್ಲಿ ಅದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದ್ರು. ಪತ್ನಿ ಶಾಂತಾದೇವಿ ಕೂಡ ಸಾಹಿತಿ, ಕನ್ನಡದ ಖ್ಯಾತಿ ಕತೆಗಾರ್ತಿ ಆಗಿದ್ದರು. ಇತ್ತೀಚೆಗೆ ನಿಧನರಾಗಿದ್ದಾರೆ. ಪತ್ನಿ ನಿಧನದ ಬಳಿಕ ಸ್ವಲ್ಪ ಲವಲವಿಕೆ ಕಳೆದುಕೊಂಡಿದ್ದ ಕಣವಿ ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ, ಜನಪ್ರಿಯ ಕಾವ್ಯಗಳು ಕವನ ಸಂಕಲನ ಮಾಡಿದ್ದಾರೆ. ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ ಸೇರಿ 15ಕ್ಕೂ ಹೆಚ್ಚು ಕವನ ಸಂಕಲನ ಪ್ರಕಟಗೊಂಡಿವೆ.

ವಿಮರ್ಶಾ ಕೃತಿಗಳು
ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ವಿಮರ್ಶಾತ್ಮಕ ಕೃತಿಗಳು

ಮಕ್ಕಳ ಕೃತಿ
ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಕವನ ಸಂಕಲನ

ಪ್ರಶಸ್ತಿ ಮತ್ತು ಪುರಸ್ಕಾರಗಳು
1981ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ
2008ರ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ
ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿವೆ.

ಇದನ್ನೂ ಓದಿ: Chennaveera Kanavi Death: ಚೆಂಬೆಳಕಿನ‌ ಖ್ಯಾತಿಯ ನಾಡೋಜ್ ಚೆನ್ನವೀರ ಕಣವಿ ಅಸ್ತಂಗತ

Published On - 9:49 am, Wed, 16 February 22