ಕ್ರಾಂತಿವೀರ ಬ್ರಿಗೇಡ್: ಈಶ್ವರಪ್ಪ ನೇತೃತ್ವದಲ್ಲಿ ಹೊಸ ಹೆಸರಿನೊಂದಿಗೆ ಮತ್ತೆ ಶುರುವಾದ ರಾಯಣ್ಣ ಬ್ರಿಗೇಡ್

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಹೊಸ ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆಯಾಗಿದೆ. 2025ರ ಫೆಬ್ರುವರಿ 4 ರಂದು ಬಸವನಬಾಗೇವಾಡಿಯಲ್ಲಿ ಉದ್ಘಾಟನೆಯಾಗಲಿದೆ. ಹಿಂದೂ ಧರ್ಮ ಮತ್ತು ಮಠ-ಮಂದಿರಗಳ ರಕ್ಷಣೆ ಬ್ರಿಗೇಡ್‌ನ ಮುಖ್ಯ ಉದ್ದೇಶವಾಗಿ. ಸಣ್ಣ ಮಠಗಳಿಗೆ ನ್ಯಾಯ ಒದಗಿಸುವುದು ಮತ್ತು ವಕ್ಫ್ ವಿಚಾರದಲ್ಲಿ ಜನರ ಭಯವನ್ನು ನಿವಾರಿಸುವುದು ಗುರಿಯಾಗಿದೆ.ಬ್ರಿಗೇಡ್ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಎಂದು ಸೋಮೇಶ್ವರ ಸ್ವಾಮೀಜಿ ಹೇಳಿದರು.

ಕ್ರಾಂತಿವೀರ ಬ್ರಿಗೇಡ್: ಈಶ್ವರಪ್ಪ ನೇತೃತ್ವದಲ್ಲಿ ಹೊಸ ಹೆಸರಿನೊಂದಿಗೆ ಮತ್ತೆ ಶುರುವಾದ ರಾಯಣ್ಣ ಬ್ರಿಗೇಡ್
ಕೆಎಸ್​ ಈಶ್ವರಪ್ಪ
Edited By:

Updated on: Dec 16, 2024 | 2:56 PM

ಹುಬ್ಬಳ್ಳಿ, ಡಿಸೆಂಬರ್​ 16: ಮಾಜಿ ಸಚಿವ ಕೆಎಸ್​​ ಈಶ್ವರಪ್ಪ (KS Eshwarappa) ನೇತೃತ್ವದಲ್ಲಿ ಕ್ರಾಂತಿವೀರ ಬ್ರಿಗೇಡ್ (Krantiveer Brigade) ಸ್ಥಾಪನೆಯಾಗಿದೆ. 2025ರ ಫೆಬ್ರವರಿ 4ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್​ಗೆ ಚಾಲನೆ ನೀಡಲಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಬಕನಾಪೂರ ಮಠದ ಸೋಮೇಶ್ವರ ಸ್ವಾಮೀಜಿ ಹೇಳಿದರು.

ಹುಬ್ಬಳ್ಳಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆಎಸ್​ ಈಶ್ವರಪ್ಪ, 1008 ಮಂದಿ ಸಾಧು ಸಂತರ ಪಾದ ಪೂಜೆ ಮಾಡಿ ಉದ್ಘಾಟನೆ ಮಾಡುತ್ತೇವೆ. ಡಿವಿ ಸದಾನಂದಗೌಡ ಮತ್ತು ಬಸವರಾಜ್​ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಹಣ ಬಿಡುಗಡೆ ಮಾಡಿದ್ದರು. ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಸಣ್ಣ ಮಠಗಳಿವೆ. ಕ್ರಾಂತವೀರ ಬ್ರಿಗೇಡ್​​ನಿಂದ ಸಣ್ಣ ಮಠಗಳಿಗೆ ನ್ಯಾಯ ಕೊಡಿಸುವ ಕೆಲಸವಾಗುತ್ತದೆ. ಹಿಂದೂ ಧರ್ಮದ ರಕ್ಷಣೆಗೆ ನಮ್ಮ ಹೋರಾಟ. ಮಠಾಧೀಶರು ಬ್ರಿಗೇಡ್ ಆರಂಭ ಮಾಡತ್ತಿದ್ದಾರೆ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಕೆಲವರು ಹೈಕಮಾಂಡ ನಾಯಕರಿಗೆ ದೂರು ಕೊಟ್ಟರು. ಕೆಲವರು ರಾಣಿ ಚೆನ್ನಮ್ಮ ಬ್ರಿಗೇಡ್ ಎಂದು ಹೇಳಿದರು. ಮೀಸಲಾತಿ ವಿಚಾರವಾಗಿ ನಾವು ಮಾತಾಡಲ್ಲ. ನಾನು ಮೀಸಲಾತಿ ಪರವೂ ಅಲ್ಲ, ವಿರೋಧವೂ ಅಲ್ಲ. ಹಿಂದೂ ಧರ್ಮದ ರಕ್ಷಣೆಗೆ ನಮ್ಮ ಹೋರಾಟ ಎಂದರು.

ಇದನ್ನೂ ಓದಿ: ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!

ಬಿಜೆಪಿ‌ ಪಕ್ಷ ನನಗೆ ತಾಯಿ ಇದ್ದಂತೆ. ತಾಯಿ ನನಗೆ ಅನ್ಯಾಯ ಮಾಡಿಲ್ಲ. ಯಾರೋ ಕೆಲ ದ್ರೋಹಿಗಳು ಅನ್ಯಾಯ ಮಾಡಿದ್ದಾರೆ. ತಾಯಿಗೆ ಮಗನ ಮೇಲೆ ಪ್ರೀತಿ ಇದೆ. ಮಗನಿಗೂ ತಾಯಿ ಮೇಲೆ ಪ್ರೀತಿ ಇದೆ. ಕೆಲ ದ್ರೋಹಿಗಳು ಹೀಗೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್​ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್​ ವಿಚಾರವಾಗಿ ಮಠಾಧೀಶರು ಹೆದರಿದ್ದಾರೆ: ಸ್ವಾಮೀಜಿ

ವಕ್ಫ್​ ವಿಚಾರದಿಂದಾಗಿ ಜನರು ಹೆದರಿದ್ದಾರೆ. ಹುಲಿ ಬಂದಾಗ, ಸಿಂಹ ಬಂದಾಗ ಜನರು ಹೇಗೆ ಹೆದರುತ್ತಾರೋ, ಹಾಗೇ ವಕ್ಫ್​ ಹೆಸರು ಬಂದಾಗ ಮಠಾಧೀಶರು ಕೂಡ ಹೆದರಿದ್ದಾರೆ. ಹಿಂದೂ ಧರ್ಮ, ಮಠ ಮಂದಿರ ರಕ್ಷಣೆಗೆ ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆ ಮಾಡಲಾಗಿದೆ. ವಕ್ಫ್​ ವಿಚಾರವಾಗಿ ಡಿಸೆಂಬರ್​ 20 ರಂದು ಕಲಬುರಗಿ ಬಂದ್​ಗೆ ಕರೆ ಕೊಟ್ಟಿದ್ದೇವೆ. ನಮಗೆ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸೋಮೇಶ್ವರ ಸ್ವಾಮೀಜಿ ಹೇಳಿದರು.
ನಮ್ಮ ಸಂಘಟನೆಗೆ ರಾಜಕೀಯ ಉದ್ದೇಶ ಇಲ್ಲ. ಯಾವ ಪಕ್ಷದವರು ಬಂದರೂ ಸ್ವಾಗತಿಸುತ್ತೇವೆ. ವಕ್ಫ ಅನ್ನೋದು ದೆವ್ವ ಇದ್ದ ಹಾಗೆ. ದೆವ್ವ ನಮ್ಮ ಮುಂದೆ ಬಂದು ನಿಂತಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ