
ಧಾರವಾಡ, ಜೂನ್ 10: ಮಹದಾಯಿ (Mahadayi) ನದಿ ನೀರಿಗಾಗಿ ಹೋರಾಟ ಮತ್ತೆ ಆರಂಭವಾಗಿದೆ. ಮಹದಾಯಿ ಹೋರಾಟಕ್ಕೆ ಧಾರವಾಡದಲ್ಲಿ (Dharwad) ರೈತರು ಚಾಲನೆ ನೀಡಿದರು. ಕಡಾಪ ಮೈದಾನದಿಂದ ಪ್ರತಿಭಟನಾ ರ್ಯಾಲಿ ಆರಂಭವಾಗಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಿತು. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ರೈತರು, ಹೋರಾಟಗಾರರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮಹದಾಯಿಗೆ ಶೀಘ್ರ ಚಾಲನೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಪ್ರತಿಭಟನಾ ರ್ಯಾಲಿ ನಡೆಯುತ್ತಿರುವುದರಿಂದ ಧಾರವಾಡ ಜ್ಯೂಬಿಲಿ ಸರ್ಕಲ್ ಬಂದ್ ಮಾಡಲಾಗಿದೆ. ಜ್ಯೂಬಿಲಿ ಸರ್ಕಲ್ ವೃತ್ತದಲ್ಲಿ ವಾಹನ ಸಂಚಾರವನ್ನು ತಡೆಯಾಗಲಿದ್ದು, ಹೋರಾಟಗಾರರು ಮಾನವ ಸರಪಳಿ ನಿರ್ಮಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾಲ್ಕು ದಶಕಗಳಿಂದ ಮಹದಾಯಿ ಕಳಸಾ ಬಂಡೂರಿ ಯೋಜನೆ ಹೋರಾಟ ನಡೆಯುತ್ತಿದೆ. ಕಳಸಾ ಬಂಡೂರಿ ಯೋಜನೆ ನದಿ ನೀರು ಗೋವಾ ಗಡಿಯಿಂದ ಕರ್ನಾಟಕಕ್ಕೆ ತರಬೇಕು ಎಂದು ನಾಲ್ಕು ದಶಕಗಳಿಂದ ಹೋರಾಟ ನಡೆದಿದೆ. ಆದರೆ, ಇವತ್ತಿನವರೆಗೆ ಒಂದೇ ಒಂದು ಹನಿ ನೀರು ಮಾತ್ರ ಬಂದಿಲ್ಲ. ಮಹದಾಯಿ ಕಳಸಾ ಬಂಡೂರಿ ಹೋರಾಟ ದಶಕಗಳಿಂದ ನಡೆಯುತ್ತಿದ್ದರೂ 2015ರ ಜುಲೈ 15 ರಿಂದ ತೀವ್ರಗೊಂಡಿತು.
ಬಂಡಾಯ ಭೂಮಿ ಎನಿಸಿದ ನರಗುಂದದಲ್ಲಿ ಅಂದು ಆರಂಭಗೊಂಡ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಈ ನಿರಂತರ ಆಂದೋಲನದಲ್ಲಿ ಭಾಗವಹಿಸಿದವರು ಪೊಲೀಸರ ಲಾಠಿ ಏಟು ಸಹಿತ ತಿಂದಿದ್ದಾರೆ. ಮನೆ ಕಡೆಯ ಕೆಲಸ ಕಾರ್ಯ, ಕಾರ್ಯಕ್ರಮಗಳನ್ನು ಮರೆತು ಹೋರಾಟದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಹುದ್ದೆಗಳನ್ನು ಕಡಿತ ಮಾಡಿದ NWKRTC: ನೌಕರಿ ಆಸೆಯಲ್ಲಿದ್ದವರ ಕನಸಿಗೆ ತಣ್ಣೀರೆರಚಿದ ನಿಗಮ
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ನೀರು ಹಂಚಿಕೆ ವಿವಾದಗನ್ನು ಪರಿಹರಿಸಲು ರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಸೆಕ್ಷನ್ 4ರ ಅನ್ವಯ ಮಹದಾಯಿ ನ್ಯಾಯಮಂಡಳಿ ಸ್ಥಾಪಿಸಲಾಗಿದೆ. ನ್ಯಾಯಮಂಡಳಿಯು 2018ರ ಅಗಸ್ಟ್ನಲ್ಲಿ ವರದಿ ಸಲ್ಲಿಸಿದೆ. ಈ ವರದಿಯ ಬಗ್ಗೆ 2020ರ ಫೆಬ್ರವರಿ 20 ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಮಹದಾಯಿ ನೀರು ಇನ್ನೂವರೆಗೂ ಬಂದಿಲ್ಲ. ಮಹದಾಯಿ ಕಳಸಾ ಬಂಡೂರಿ ಯೋಜನೆ ಹೋರಾಟ ಮೂರು ರಾಜಕೀಯ ಪಕ್ಷಗಳಿಗೆ ಚುನಾವಣಾ ಅಸ್ತವಾಗಿ ಪರಿಣಮಿಸಿದ್ದು ಮಾತ್ರ ಸುಳ್ಳಲ್ಲ.
Published On - 3:33 pm, Tue, 10 June 25