ದುಪ್ಪಟ್ಟು ಹಣ ಕೊಡುತ್ತೇವೆಂದು ಹೇಳಿ ಠೇವಣಿ ಪಡೆದ ಪಂಜಾಬ್ ಮೂಲದ ಸಂಸ್ಥೆಗೆ ದಂಡ

ತೀರ್ಪು ನೀಡಿದ 1 ತಿಂಗಳ ಒಳಗಾಗಿ ಠೇವಣಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಒಟ್ಟು 9 ಜನ ಠೇವಣಿದಾರರಿಗೂ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ಗರೀಮಾ ಹೋಮ್ಸ್‌ನವರು ತಲಾ 1 ಲಕ್ಷ ರೂ ಪರಿಹಾರ ಮತ್ತು ಪ್ರಕರಣದ ಖರ್ಚು ತಲಾ ರೂ. 10 ಸಾವಿರ ಸೇರಿ ಒಟ್ಟು ರೂ. 41.65 ಲಕ್ಷ ದಂಡ ಮತ್ತು ಪರಿಹಾರ ನೀಡಲು ಆದೇಶಿಸಿದೆ.

ದುಪ್ಪಟ್ಟು ಹಣ ಕೊಡುತ್ತೇವೆಂದು ಹೇಳಿ ಠೇವಣಿ ಪಡೆದ ಪಂಜಾಬ್ ಮೂಲದ ಸಂಸ್ಥೆಗೆ ದಂಡ
ದುಪ್ಪಟ್ಟು ಹಣ ಕೊಡುತ್ತೇವೆಂದು ಹೇಳಿ ಠೇವಣಿ ಪಡೆದ ಪಂಜಾಬ್ ಮೂಲದ ಸಂಸ್ಥೆಗೆ ದಂಡ
Edited By: ಸಾಧು ಶ್ರೀನಾಥ್​

Updated on: Dec 01, 2023 | 5:02 PM

ದುಪ್ಪಟ್ಟು ಹಣ (money) ಕೊಡುತ್ತೇವೆಂದು ಹೇಳಿ ಠೇವಣಿ (deposit) ಇಡಿಸಿಕೊಂಡು ಮೋಸ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಕಲಬುರ್ಗಿ ಪ್ಲಾಜಾದಲ್ಲಿ ಪಂಜಾಬ್‌ನ ಮೊಹಾಲಿಯ ಗರೀಮಾ ಹೋಮ್ಸ್ ಮತ್ತು ಫಾರ್ಮ್ ಹೌಸ್‌ಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಸರಿಯಾದ ದಂಡ ಹಾಗೂ ನೊಂದವರಿಗೆ ಪರಿಹಾರ (compensation) ನೀಡಲು ಆದೇಶಿಸಿದೆ.

ಧಾರವಾಡ ಜಿಲ್ಲೆಯ ಹಾಗೂ ಅಕ್ಕ ಪಕ್ಕದ ಜಿಲ್ಲೆಯ ಹಳ್ಳಿಗಳಿಗೆ ತಮ್ಮ ಸಿಬ್ಬಂದಿ ಕಳುಹಿಸಿ ಹಣ ವಿನಿಯೋಗ ಮಾಡಿದ ಆರು ವರ್ಷಗಳಲ್ಲಿ ದುಪ್ಪಟ್ಟು ಅಥವಾ ಆ ದುಪ್ಪಟ್ಟು ಮೌಲ್ಯದ ಸೈಟ್ ಕೊಡುವುದಾಗಿ ಹೇಳಿ ಮೊಹಾಲಿಯ ಗರೀಮಾ ಹೋಮ್ಸ್‌ ಮತ್ತು ಫಾರ್ಮ್ ಹೌಸ್‌ ಸಂಸ್ಥೆಯು ಪ್ರಚಾರ ಮಾಡಿಸುತ್ತಿದ್ದರು. ಆ ಪ್ರಚಾರಕ್ಕೆ ಒಳಗಾದ ಹುಬ್ಬಳ್ಳಿಯ ಗೋಕುಲದ ಸುರೇಖಾ ಗಂಜಿಗಟ್ಟಿ ರೂ. 2.50 ಲಕ್ಷ, ಕಲಘಟಗಿ ಹುಲ್ಲಂಬಿಯ ಅನುಸೂಯಾ ಪಾಟೀಲ ರೂ. 5 ಲಕ್ಷ, ಬೇಗೂರಿನ ಭಾಗ್ಯಶ್ರೀ ನಾಯಕರ್ ರೂ. 53 ಸಾವಿರ ಮತ್ತು ನಾಗವ್ವ ಚಲಮಟ್ಟಿ ರೂ.2 ಲಕ್ಷ ಹಾಗೂ ಹುಬ್ಬಳ್ಳಿಯ ಗೋಕುಲದ ಪದ್ಮಾವತಿ ತಳವಾರ ರೂ. 6 ಲಕ್ಷ ಹಣವನ್ನು ಸಂಸ್ಥೆಯಲ್ಲಿ ಆರು ವರ್ಷದ ಅವಧಿಗೆ ಠೇವಣಿ ಇಟ್ಟಿದ್ದರು. ಇದಕ್ಕೆ ಸಂಸ್ಥೆಯು ಸರ್ಟಿಫಿಕೇಟ್‌ ಸಹ ನೀಡಿತ್ತು.

ಆರು ವರ್ಷದ ಠೇವಣಿ ಅವಧಿ ಮುಗಿದ ಮೇಲೆ ಆ ಎಲ್ಲ ಠೇವಣಿದಾರರು ತಮ್ಮ ಹಣ ಅಥವಾ ಸೈಟ್‌ಗಾಗಿ ಎದುರುದಾರರ ಗರೀಮಾ ಹೋಮ್ಸ್ ಸಂಸ್ಥೆಗೆ ಭೇಟಿ ಕೊಟ್ಟು ವಿಚಾರಿಸಿದರು. ದುಪ್ಪಟ್ಟು ಹಣವನ್ನು ಪಂಜಾಬ್‌ನ ಮೊಹಾಲಿಯ ಮುಖ್ಯ ಕಚೇರಿಯಿಂದ ತರಿಸಿ ಕೊಡುವುದಾಗಿ ಹುಬ್ಬಳ್ಳಿ ಕಛೇರಿಯ ಗರೀಮಾ ಹೋಮ್ಸ್ ಎಲ್ಲ ಠೇವಣಿದಾರರ ಅಸಲು ಠೇವಣಿ ಸರ್ಟಿಫಿಕೇಟಗಳನ್ನು ವಾಪಸ್ಸು ಪಡೆದುಕೊಂಡಿದ್ದರು. ಈ ಮಧ್ಯದಲ್ಲಿ ಕೊವಿಡ್-19 ಬಂದಿದ್ದರಿಂದ ಸಂಸ್ಥೆ ಬಾಗಿಲು ಮುಚ್ಚಿತ್ತು. ಈ ಕುರಿತು ಹಣ ಕಳೆದುಕೊಂಡವರು 2021ರಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.

ಇದನ್ನೂ ಓದಿ: ಪಿಂಚಣಿಯನ್ನು ತಪ್ಪು ಲೆಕ್ಕ ಹಾಕಿದ ಹುಬ್ಬಳ್ಳಿ PF ಇಲಾಖೆಗೆ 6.42 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಗರೀಮಾ ಹೋಮ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ನೀಡಲಾಗಿತ್ತು. ಆ ನೋಟಿಸು ಜಾರಿ ಮಾಡಿದರೂ ಗರೀಮಾ ಹೋ್ಸ್‌ನವರು ಆಯೋಗದ ಮುಂದೆ ಹಾಜರಾಗಲಿಲ್ಲ. ಮತ್ತೊಂದು ನೋಟಿಸ್‌ ನಂತರ ಸಂಸ್ಥೆ ಪರವಾಗಿ ಒಬ್ಬರು ಹಾಜರಾಗಿದ್ದು, ಸಂಸ್ಥೆ ಪರವಾಗಿ ಅವರಿಗೆ ಗ್ರಾಹಕರ ಆಯೋಗ ಆದೇಶ ಮಾಡಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಠೇವಣಿ ಹಣ ಹಿಂದಿರುಗಿಸುವತೆ ಆಯೋಗ ಆದೇಶಿಸಿದೆ. ಒಟ್ಟು 9 ಜನ ಠೇವಣಿದಾರರು ಅವರೆಲ್ಲರಿಗೂ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ಗರೀಮಾ ಹೋಮ್ಸ್‌ನವರು ತಲಾ 1 ಲಕ್ಷ ರೂಪಾಯಿ ಪರಿಹಾರ ಮತ್ತು ಪ್ರಕರಣದ ಖರ್ಚು ತಲಾ 10 ಸಾವಿರ ಸೇರಿ ಒಟ್ಟು ರೂ. 41.65 ಲಕ್ಷ ದಂಡ ಮತ್ತು ಪರಿಹಾರ ನೀಡಲು ಆದೇಶಿಸಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us