ಸಿದ್ದರಾಮಯ್ಯ ಮನೆಗೆ ಹೋಗಲೆಂದು ಕಾಂಗ್ರೆಸ್​ನಲ್ಲೇ ಕಾಯುತ್ತಿದ್ದಾರೆ: ಪ್ರಲ್ಹಾದ್ ಜೋಶಿ

ಮುಡಾ ಹಗರಣ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕರ್ನಾಟಕ ಕಾಂಗ್ರೆಸ್​ಗೆ ಜನರ ಕಲ್ಯಾಣ ಬೇಕಿಲ್ಲ. ಅಧಿಕಾರ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ ಎಂದರು. ಜತೆಗೆ, ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ ಎಂದರು.

ಸಿದ್ದರಾಮಯ್ಯ ಮನೆಗೆ ಹೋಗಲೆಂದು ಕಾಂಗ್ರೆಸ್​ನಲ್ಲೇ ಕಾಯುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us
| Updated By: ಗಣಪತಿ ಶರ್ಮ

Updated on: Aug 31, 2024 | 4:32 PM

ಹುಬ್ಬಳ್ಳಿ, ಆಗಸ್ಟ್ 31: ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಹೋಗಬೇಕೆಂದು ಕಾಂಗ್ರೆಸ್ ಪಕ್ಷದಲ್ಲೇ ಅನೇಕ ಜನ ಕಾಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು. ಹುಬ್ಬಳ್ಳಿಯಲ್ಲಿ ಶನಿವಾರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ರಾಜಭವನ ಚಲೋ ಅಕ್ಷಮ್ಯ ಅಪರಾಧ. ಸೈಟ್ ತಗೊಂಡಿದ್ದು ತಪ್ಪಾಯ್ತು ಎಂದು ‘ಮುಡಾ ಚಲೋ’ ಮಾಡಿ. ಮುಡಾಕ್ಕೆ ಕೈಮುಗಿದು ಮುಡಾ ಚಲೋ ಮಾಡಿ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತನಿಖೆಗೆ ಯಾಕೆ ಹೆದರುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ನಮ್ಮ ಪ್ರಶ್ನೆಗೆ ಇನ್ನೂ ಉತ್ತರ ಕೊಟ್ಟಿಲ್ಲ. ಈಗ ರಾಜ್ಯಪಾಲರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​​ನವರ ಬೆದರಿಕೆಗೆ ಯಾರೂ ಬಗ್ಗಲ್ಲ ಎಂದರು.

ರಾಜ್ಯಪಾಲ ಗೆಹ್ಲೋಟ್​​ರು ದಲಿತರು, ಅವರ ಬಗ್ಗೆ ಮಾತನಾಡಿದ್ದೀರಿ. ರಾಜ್ಯಪಾಲರು ತನಿಖೆ ಮಾಡಿ ಎಂದು ಹೇಳಿದ್ದಾರೆ. ದೆಹಲಿ ಸಿಎಂ ಕೇಜ್ರಿವಾಲ್ ತರಹ ನಿಮಗೂ ನಾಚಿಕೆ, ಮಾನ, ಮರ್ಯಾದೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಟಾಲಂಗೆ ಅಧಿಕಾರ ಮುಖ್ಯ. ರಾಹುಲ್ ಗಾಂಧಿಯವರೇ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ನೋಡಿ. ನೀವು ಭ್ರಷ್ಟಾಚಾರ ಮಾಡಿದವರಿಗೆ ಪ್ರಮೋಷನ್ ಕೊಟ್ಟಿದೀರಿ. ಮುಡಾ ಮಾಜಿ ಆಯುಕ್ತರನ್ನು ಕುಲಸಚಿವರನ್ನಾಗಿ ಮಾಡಿದ್ದಾರೆ. ತನಿಖೆ ನಡೆಯುವಾಗ ಅಧಿಕಾರದಲ್ಲಿ ಇರಬೇಕೆಂಬ ನಿರ್ಲಜ್ಜತನ ಇವರಲ್ಲಿದೆ. ಅಧಿಕಾರದಲ್ಲಿ ಇದ್ದವರೇ ಮುಡಾ ಹಗರಣದ ದಾಖಲೆ ಕೊಟ್ಟಿದ್ದು. ದಾಖಲೆ ಕೊಟ್ಟಿದ್ದು ಕಾಂಗ್ರೆಸ್​ನವರೇ ಎಂದು ಜೋಶಿ ಪುನರುಚ್ಚರಿಸಿದರು. ಸಂತೋಷ್ ಲಾಡ್ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಮನೆಗೆ ಹೋಗಲೆಂದು ಕಾಂಗ್ರೆಸ್​ನಲ್ಲೇ ಕಾಯುತ್ತಿದ್ದಾರೆ ಎಂದು ಜೋಸಿ ಟೀಕಿಸಿದರು.

‘ಕಾಂಗ್ರೆಸ್​​ನವರು ಬರೀ ರಾಜಕೀಯ ಮಾಡುತ್ತಿದ್ದಾರೆ’

ಉದ್ದು ಮತ್ತು ಸೋಯಾಬಿನ್ ಖರೀದಿಸಲು ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅನುಮತಿ ನೀಡಲಾಗಿದೆ. ಅನುಮತಿಗೆ ಮನವಿ ಮಾಡಿದ 2-3 ದಿನಗಳಲ್ಲೇ ಕೇಂದ್ರ ಅನುಮತಿ ನೀಡಿದೆ. ಆದರೆ, ಕಾಂಗ್ರೆಸ್​​ನವರು ಬರೀ ರಾಜಕೀಯ ಮಾಡುತ್ತಿದ್ದಾರೆ ಎಂದು ಜೋಶಿ ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಕಾಂಗ್ರೆಸ್ ನಾಯಕರ ಬಳಿ ರಾಜ್ಯಪಾಲರಿಂದ ಅಚ್ಚರಿಯ ಹೇಳಿಕೆ

ನಿನ್ನೆಯೊಬ್ಬರು ಕರೆ ಮಾಡಿ ಮಳೆಗೆ ಮನೆ ಬಿದ್ದಿದೆ ಎಂದರು. ರಾಜ್ಯದ ಜನರ ಕಲ್ಯಾಣಕ್ಕೆ ಜನ ಕಾಂಗ್ರೆಸ್​ಗೆ 136 ಸೀಟು ಕೊಟ್ಟಿದ್ದಾರೆ. ಆದರೆ, ಇವರು ಬರೀ ಕುರ್ಚಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದರು.

ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಅಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್​ಡಿ ಕುಮಾರಸ್ವಾಮಿ ಕೂಡ ಚುನಾವಣೆ ವಿಚಾರದಲ್ಲಿ ಮುಕ್ತವಾಗಿದ್ದೇನೆ ಎಂದಿದ್ದಾರೆ. 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್​ಡಿಎ ಗೆಲ್ಲಬೇಕು ಎಂದಿದ್ದಾರೆ. ಬಿಜೆಪಿ ಜೆಡಿಎಸ್ ಒಟ್ಟಾಗಿ ಉಪಚುನಾವಣೆ ಎದುರಿಸಲಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ