ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ ಭೂ ಗ್ಯಾರಂಟಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್​

ವಿಧಾನಸೌಧದಲ್ಲಿಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧಿಕಾರಿಗಳು ಜೊತೆಗೆ ಸಿಎಂ ಡಿಕೆ ಶಿವಕುಮಾರ್​ ಮಹತ್ವದ ಸಭೆ ಮಾಡಿದರು. ಸಭೆಯಲ್ಲಿ ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಬಳಿಕ ಸರ್ಕಾರದ 6ನೇ ಗ್ಯಾರಂಟಿಯಾದ ಭೂ ಗ್ಯಾರಂಟಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಇಲ್ಲಿದೆ ಮಾಹಿತಿ.

ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ ಭೂ ಗ್ಯಾರಂಟಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್​
ಭೂ ಗ್ಯಾರಂಟಿ
Image Credit source: CMofKarnataka

Updated on: Aug 31, 2026 | 6:13 PM

ಬೆಂಗಳೂರು, ಆಗಸ್ಟ್​ 31: ‘ರಾಜ್ಯದ ಅಭಿವೃದ್ಧಿಗಾಗಿ ಮತ್ತು ಸರ್ಕಾರಿ ಯೋಜನೆಗಳಿಗಾಗಿ ತಮ್ಮ ಜಮೀನು ಬಿಟ್ಟುಕೊಡುವ ಭೂಮಾಲೀಕರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಆರನೇ ಗ್ಯಾರಂಟಿ ಭೂ ಗ್ಯಾರಂಟಿಯನ್ನು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ (DK Shivakumar) ಹೇಳಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

ವಿಧಾನಸೌಧದಲ್ಲಿಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಂ. ರೇವಣ್ಣ ಸಿಎಂ ಡಿಕೆ ಶಿವಕುಮಾರ್​ರನ್ನು ಭೇಟಿ ಮಾಡಿ, ಸಮಾಲೋಚನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತಮಾಡಿದ ಸಿಎಂ ಡಿಕೆ ಶಿವಕುಮಾರ್​, ‘ಸರ್ಕಾರಕ್ಕಾಗಿ ಭೂಮಿ ತ್ಯಾಗ ಮಾಡುವ ಪ್ರತಿಯೊಬ್ಬ ನಾಗರಿಕನ ಹಕ್ಕನ್ನು ಕಾಪಾಡುವುದು ಸರ್ಕಾರದ ಕರ್ತವ್ಯ’ ಎಂದರು.

ಕಾನೂನುಬದ್ಧವಾಗಿ ‘ಎ’ ಖಾತಾ ಪರಿವರ್ತನೆ

‘ಭೂಮಾಲೀಕರ ಆಸ್ತಿ ಪೋಡಿ ಮಾಡಿಕೊಡುವುದು, ‘ಬಿ’ ಖಾತಾದಿಂದ ‘ಎ’ ಖಾತಾಗೆ ಕಾನೂನಿನ ಚೌಕಟ್ಟಿನಲ್ಲೇ ಪರಿವರ್ತಿಸುವುದು ಮತ್ತು ಫಲಾನುಭವಿಯ ಭಾವಚಿತ್ರವಿರುವ ಅಧಿಕೃತ ದಾಖಲೆ ನೀಡುವುದು ನಮ್ಮ ಆದ್ಯತೆ. ಆದರೆ ಯಾವುದೇ ಬೋಗಸ್ ನೋಂದಣಿಗೆ ಅವಕಾಶವಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಅಭಿಯಾನ’, ಸ್ಥಳದಲ್ಲೇ ಸಾರ್ವಜನಿಕರ ಸಮಸ್ಯೆಗೆ ಪರಿಹಾರ

‘ಮುಂದಿನ ದಿನಗಳಲ್ಲಿ ಆಸ್ತಿ ವರ್ಗಾವಣೆ, ಬ್ಯಾಂಕ್ ಸಾಲ ಅಥವಾ ಕುಟುಂಬದೊಳಗೆ ಆಸ್ತಿ ಹಂಚಿಕೆಗೆ ಯಾವುದೇ ತೊಂದರೆಯಾಗದಂತೆ ಸಂಪೂರ್ಣ ಸುರಕ್ಷತೆ ನೀಡಲಾಗುತ್ತಿದೆ. ಕೃಷ್ಣಬೈರೇಗೌಡರು ಕಂದಾಯ ಸಚಿವರಾಗಿದ್ದಾಗಿನಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ನಾವು ಮುಂದುವರಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಹೆಚ್​ಡಿ ಕುಮಾರಸ್ವಾಮಿ ಹೋರಾಟ ನಮ್ಮ ವಿರುದ್ಧ ಅಲ್ಲ, ಬಿಜೆಪಿ ವಿರುದ್ಧ: ಸಿಎಂ

ಕೆಪಿಎಸ್‌ಸಿ ಹಗರಣದ ಕುರಿತು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್, ‘ಕುಮಾರಸ್ವಾಮಿ ಅವರು ನಮ್ಮ ವಿರುದ್ಧ ಹೋರಾಟ ಮಾಡುತ್ತಿಲ್ಲ, ಮೈತ್ರಿ ಪಕ್ಷ ಬಿಜೆಪಿಯ ವಿರುದ್ಧವೇ ಹೋರಾಡುತ್ತಿದ್ದಾರೆ. ಅಲ್ಲೋಲ ಕಲ್ಲೋಲ ಸೃಷ್ಟಿಸುವ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿರುವುದು ಬಹಳ ಸಂತೋಷ, ಅವರ ಕರ್ತವ್ಯವನ್ನು ಅವರು ಮಾಡಲಿ. ಯಾರು ಏನೇ ಮಾತನಾಡಿದರೂ ಕಾಲವೇ ತಕ್ಕ ಉತ್ತರ ನೀಡಲಿದೆ’ ಎಂದರು.

ಕೆಪಿಎಸ್‌ಸಿ ತನಿಖೆಯಲ್ಲಿ ಹಸ್ತಕ್ಷೇಪವಿಲ್ಲ

ಕೆಪಿಎಸ್‌ಸಿ ಅಕ್ರಮ ಪ್ರಕರಣದಲ್ಲಿ ಬಿಜೆಪಿ ನಾಯಕರ ಬಂಧನದ ಕುರಿತು ಮಾತನಾಡಿದ ಸಿಎಂ, ‘ನಾನು ಯಾವುದೇ ಕಾರಣಕ್ಕೂ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸಂಪೂರ್ಣ ವರದಿ ಬರುವ ಮುನ್ನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಕೆಪಿಎಸ್‌ಸಿಗೆ ಆ ಸದಸ್ಯರನ್ನು ನೇಮಕ ಮಾಡಿದವರು ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಸದ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ’ ಎಂದಿದ್ದಾರೆ.

ಬಿಜೆಪಿ ಪಾದಯಾತ್ರೆಗೆ ನಮ್ಮದೇ ಶೈಲಿಯಲ್ಲಿ ಉತ್ತರ ಎಂದ ಸಿಎಂ

ವಿಪಕ್ಷಗಳ ಪಾದಯಾತ್ರೆಗೆ ತಿರುಗೇಟು ನೀಡಿದ ಸಿಎಂ, ‘ಅವರು ಮೊದಲು ಪಾದಯಾತ್ರೆ ಶುರು ಮಾಡಲಿ, ಆನಂತರ ನಮ್ಮದು ಯಾವ ಯಾತ್ರೆ ಆರಂಭವಾಗುತ್ತದೆ ಎಂಬುದನ್ನು ನಾವೂ ತೋರಿಸುತ್ತೇವೆ. ನಾವೂ ರಾಜಕಾರಣಿಗಳೇ ಅಲ್ಲವೇ? ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ರೈತರ ಹಿತರಕ್ಷಣೆಯಂತಹ ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಲು ನಾವು ಸಿದ್ಧವಿದ್ದೇವೆ ಮತ್ತು ಇದಕ್ಕಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುವುದು’ ಎಂದು ಸಿಎಂ ಡಿಕೆ ಶಿವಕುಮಾರ್​ ತಿಳಿಸಿದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:10 pm, Mon, 31 August 26

Loading...
Unable to load recommendations.
Follow Us