Vegetable cultivation ಸೊಪ್ಪು ತರಕಾರಿ ಬೆಳೆಯಲ್ಲಿಯೇ ಯಶಸ್ಸು ಕಂಡು ಬದುಕು ಹಸನಾಗಿಸಿಕೊಂಡ ಬೀದರ್ ಜಿಲ್ಲೆಯ ರೈತರು

| Updated By: ಸಾಧು ಶ್ರೀನಾಥ್​

Updated on: Feb 10, 2021 | 6:11 PM

Vegetable cultivation ಬೀದರ್​ನಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಬೇರೆ ಬೆಳೆಗಳನ್ನು ಬೆಳೆದರೂ ನಷ್ಟವೇ ಜಾಸ್ತಿ. ಸೊಪ್ಪು ತರಕಾರಿ ಬೆಳೆಯಲು ನೀರಿನ ಪ್ರಮಾಣ ಕಡಿಮೆ ಇದ್ದರೂ ಸಾಕು ಎಂಬುದು ಅಲ್ಲಿನ ರೈತರ ಅನಿಸಿಕೆ.

Vegetable cultivation ಸೊಪ್ಪು ತರಕಾರಿ ಬೆಳೆಯಲ್ಲಿಯೇ ಯಶಸ್ಸು ಕಂಡು ಬದುಕು ಹಸನಾಗಿಸಿಕೊಂಡ ಬೀದರ್ ಜಿಲ್ಲೆಯ ರೈತರು
ಸೊಪ್ಪು ಬೆಳೆದು ಬದುಕು ಹಸನಾಗಿಸಿಕೊಂಡ ರೈತರು
Follow us on

ಬೀದರ್: ಐವತ್ತರಿಂದ ನೂರು ಮನೆಗಳಿರುವ ಪುಟ್ಟ ಊರು, ಒಬ್ಬ ರೈತನಿಗೆ ಐದು, ಹತ್ತು ಗುಂಟೆ ಮಾತ್ರ ಜಮೀನಿದೆ. ಕಡಿಮೆ ಜಮೀನಿದೆ ಎಂದು ಕೊರಗದೆ ಅಷ್ಟೇ ಜಮೀನಿನಲ್ಲಿ ಸಾವಿರಾರು ರೂಪಾಯಿ ಆದಾಯ ಮಾಡುತ್ತಿದ್ದಾರೆ. ಪ್ರತಿನಿತ್ಯವೂ ತರಕಾರಿ ಮಾರಿ ಬಂದ ಹಣದಲ್ಲಿ ನೆಮ್ಮಂದಿಕೊಂಡಿದ್ದಾರೆ. ಕೃಷಿಯಲ್ಲಿ ಈ ರೈತರ ಬುದ್ಧಿವಂತಿಕೆ, ಶ್ರಮ ಹಾಗೂ ಮಾರುಕಟ್ಟೆ ಜ್ಞಾನ ಬದುಕನ್ನೇ ಹಸನಾಗಿಸಿದೆ.ಈ ಪುಟ್ಟ ಊರಿನಲ್ಲಿನ ರೈತರು ಸೊಪ್ಪು ತರಕಾರಿ ಬೆಳೆಯುವುದರಲ್ಲಿ ನಿಸ್ಸೀಮರಾಗಿದ್ದು, ಹೊಲದಲ್ಲಿ ವಾಣಿಜ್ಯ ಬೆಳೆಯನ್ನೇ ಇವರು ಬೆಳೆಯಲ್ಲ ಬದಲಿಗೆ ಸೊಪ್ಪು ತರಕಾರಿ ಬೆಲೆಯುತ್ತಿದ್ದಾರೆ. ಸಬ್ಬಸಗಿ, ಬದನೆಕಾಯಿ, ಹರವೆಸೊಪ್ಪು, ಪಾಲಕ್‌, ಸೌತೆ, ಮೂಲಂಗಿ, ಮೆಂತೆ, ರಾಜಗಿರಿ, ನವಿಲುಕೋಸು ಹೀಗೆ ವಿವಿಧ ರೀತಿಯ ತರಕಾರಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಗಂಡಸರ ಜೊತೆಗೆ ಕೃಷಿ ಕೆಲಸಕ್ಕೆ ಮಹಿಳೆಯರೂ ನೆರವಾಗುತ್ತಾರೆ.

ಐತಿಹಾಸಿಕ ಬೀದರ್ ಕೋಟೆಯ ಪಕ್ಕದಲ್ಲಿ ಬರುವ ವಾಲದೊಡ್ಡಿ, ತಳಗಟ್ಟ, ತಾದಲಾಪುರ ಗ್ರಾಮದ ರೈತರು ತರಕಾರಿ ಬಿಟ್ಟರೇ ಬೇರೆ ಯಾವ ಬೆಳೆಯನ್ನ ಕೂಡ ಬೆಳೆಯುವುದಿಲ್ಲ. ಈ ಮೂರು ಗ್ರಾಮ ಸೇರಿ 200 ಮನೆಗಳು ಈ ಗ್ರಾಮದಲ್ಲಿ ಇದ್ದು, ಶೇಕಡಾ 80 ರಷ್ಟು ಇಲ್ಲಿ ರೈತರೇ ಇದ್ದಾರೆ. ತರಕಾರಿ ಬೆಳೆದೇ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿಯೊಬ್ಬ ರೈತನಿಗೂ ಕೂಡ ಇಲ್ಲಿ ಇರುವ ಜಮೀನು 5 ರಿಂದ 10 ಗುಂಟೆ ಮಾತ್ರ ಆದರೂ ಈ ಗ್ರಾಮಗಳು ತರಕಾರಿ ಕೃಷಿಗೆ ಹೆಸರುವಾಸಿ.

ತರಕಾರಿ ಬೆಳೆಯುವುದರಿಂದ ನಷ್ಟ ಕಡಿಮೆ. ಹಾಕಿದ ಹಣಕ್ಕೆ ಮೋಸ ಆಗುವುದಿಲ್ಲ. ಈಚೆಗೆ ಬಿಳಿರೋಗ ಮತ್ತು ಹುಳ(ಕೀಟ)ಗಳ ಕಾಟ ಜಾಸ್ತಿಯಾಗಿದ್ದು, ಹಲವು ಕ್ರಿಮಿನಾಶಕಗಳು ಬಂದಿವೆ. ಅವುಗಳ ಸಿಂಪಡಣೆ ಅನಿವಾರ್ಯ. ಮಾರುಕಟ್ಟೆಯಲ್ಲಿ ದರ ಏರುಪೇರು ಆದರೆ ರೈತರು ನಷ್ಟ ಅನುಭವಿಸಲೇ ಬೇಕು. ಇಲ್ಲಿ ಬೆಳೆಯುವ ಸೊಪ್ಪು ತರಕಾರಿ ಬೀದರ್, ನಾಂದೇಡ್, ಹೈದರಬಾದ್ ಮತ್ತು ಸುತ್ತಮುತ್ತಲಿನ ಸಂತೆಗಳಿಗೆ ಹೋಗುತ್ತದೆ. ಸಾಕಪ್ಪಾ ಕೃಷಿಯ ಸಹವಾಸ ಎನ್ನುವವರಿಗೆ ಈ ಕಾಯಿಪಲ್ಯೆ ಗ್ರಾಮ ಇತರರಿಗೆ ಮಾದರಿಯಾಗಿದ್ದು, ಇಲ್ಲಿನ ಎಲ್ಲಾ ರೈತರು ಸೊಪ್ಪು ತರಕಾರಿ ಬೆಳೆಯುತ್ತಾರೆ.

ಪಾಲಕ್ ಸೊಪ್ಪು ಕಟಾವು ಮಾಡುತ್ತಿರುವ ರೈತರು

ಸೊಪ್ಪು ಬೆಳೆದ ರೈತರು

ಇನ್ನು ಬೀದರ್​ನಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಬೇರೆ ಬೆಳೆಗಳನ್ನು ಬೆಳೆದರೂ ನಷ್ಟವೇ ಜಾಸ್ತಿ. ಸೊಪ್ಪು ತರಕಾರಿ ಬೆಳೆಯಲು ನೀರಿನ ಪ್ರಮಾಣ ಕಡಿಮೆ ಇದ್ದರೂ ಸಾಕು ಎಂಬುದು ಅಲ್ಲಿನ ರೈತರ ಅನಿಸಿಕೆ. ಇನ್ನು ಸೊಪ್ಪು ತರಕಾರಿ ಬೆಳೆಯಲು ಕೂಲಿಕಾರರ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ. ಮನೆಯ ಸದಸ್ಯರೇ ಕೆಲಸ ನಿರ್ವಹಿಸುತ್ತಾರೆ. ನಸುಕಿನಲ್ಲಿಯೇ ಏಳುವ ಮಹಿಳೆಯರು ಹೊಲಕ್ಕೆ ತೆರಳಿ ಸೊಪ್ಪು ತರಕಾರಿ ಕೊಯ್ಲು ಮಾಡುತ್ತಾರೆ. ಮನೆಯ ಸದಸ್ಯರೆಲ್ಲ ಸೇರಿ ತರಕಾರಿಯನ್ನು ನೀರಿನಲ್ಲಿ ತೊಳೆದು ಚೀಲ ತುಂಬುತ್ತಾರೆ. ಸಾಕಪ್ಪಾ ಕೃಷಿಯ ಸಹವಾಸ ಎನ್ನುವವರಿಗೆ ಈ ಕಾಯಿಪಲ್ಯೆ ಗ್ರಾಮ ಇತರರಿಗೆ ಮಾದರಿಯಾಗಿದೆ.

ಕಟಾವು ಮಾಡಿ ಇಟ್ಟಿರುವ ಸೊಪ್ಪು

ಹರವೆಸೊಪ್ಪು

ರೈತರು ತಾವು ನಂಬಿಕೊಂಡ ಕೃಷಿಯಲ್ಲಿ ಲಾಭ ಗಳಿಸಲಾಗದೆ ತಮ್ಮ ಜಮೀನುಗಳನ್ನು ಮಾರಾಟ ಮಾಡಿ ನಗರಗಳತ್ತ ಗುಳೆ ಹೋಗುತ್ತಿರುವ ಇಂದಿನ ದಿನಮಾನದಲ್ಲಿ ಈ ಗ್ರಾಮದ ರೈತರು ಮಾದರಿಯಾಗಿದ್ದಾರೆ. ದಿನಕ್ಕೆ ಸಾವಿರಾರು ರೂಪಾಯಿ ಆದಾಯ ಬರುತ್ತಿರುವುದರಿಂದ ಎಲ್ಲಾ ರೈತರು ಕೃಷಿಯತ್ತ ಮನಸ್ಸು ಮಾಡಿದ್ದಾರೆ. ಇದರಿಂದ ರೈತರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದು, ಇನ್ನು ಇಲ್ಲಿನ ರೈತರು ಬೆಳೆಯುತ್ತಿರುವ ತರಕಾರಿ ಜಿಲ್ಲೆಯಾದ್ಯಂತ ರವಾನೆ ಆಗುತ್ತಿದ್ದು, ತರಕಾರಿಗೆ ಭಾರೀ ಬೇಡಿಕೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.

ಕಟಾವು ಮಾಡಿ ಹೊತ್ತೋಯ್ಯುತ್ತಿರುವ ರೈತ

ಒಟ್ಟು ಸುಮಾರು 200 ಮನೆಗಳಿವೆ. ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದು ಸೊಪ್ಪು ತರಕಾರಿ ನಮ್ಮ ಕೈ ಹಿಡಿದಿದೆ. ಹತ್ತಾರು ವರ್ಷದಿಂದ ತರಕಾರಿ ಬೆಳೆಯಲು ಆರಂಭಿಸಿದ್ದು, ಇದು ಬಿಟ್ಟರೇ ಬೇರೆ ಕೆಲಸ ಗೊತ್ತಿಲ್ಲ. ಹತ್ತು ಗುಂಟೆಯಲ್ಲಿ ತರಕಾರಿ ಬೆಳೆಯಬೇಕಾದರೆ ಅಂದಾಜು ಹತ್ತು ಸಾವಿರ ರೂಪಾಯಿ ಖರ್ಚು ಬರುತ್ತದೆ. ತರಕಾರಿ ಬೀಜಕ್ಕೆ ಹೆಚ್ಚು ಹಣ ಬೇಕು, ಮಡಿ ಮಾಡಿ ಬೀಜ ಬಿತ್ತಿ ತರಕಾರಿ ಮಾರುಕಟ್ಟೆಗೆ ಹೋಗಬೇಕಾದರೆ ಸುಮಾರು 45 ರಿಂದ 50 ದಿನಗಳು ಬೇಕು. 4ರಿಂದ 5 ತಿಂಗಳ ಅವಧಿಗೆ ಯಾವುದೇ ಸೊಪ್ಪು ತರಕಾರಿ ಬೆಳೆದರೂ ಕನಿಷ್ಠ 15 ಸಾವಿರ ಲಾಭಕ್ಕೆ ಮೋಸವಿಲ್ಲ. ತರಕಾರಿ ಬೆಳೆದು ಚೆನ್ನಾಗಿದ್ದೇವೆಂದು ಇಲ್ಲಿನ ತರಕಾರಿ ಬೆಳೆಗಾರ ನಾಗಶೆಟ್ಟಿ ಹೇಳಿದ್ದಾರೆ.

ಹೂಕೋಸು

ಸೊಪ್ಪಿನ ಕೊಯ್ಲು

ಮಾರ್ಕೆಟ್​ಗೆ ಎಂಟ್ರಿ ಕೊಟ್ಟ ಅವರೆಕಾಯಿ.. ಎಲ್ಲೆಲ್ಲೂ ಅದರದೇ ಘಮ, ಬೇರೆ ತರಕಾರಿಗಳಿಗೆ ಗುಡ್​ಬೈ ಹೇಳಿ ಖರೀದಿಗೆ ಮುಗಿಬಿದ್ದ ಗ್ರಾಹಕರು